ಬಬಲೇಶ್ವರ ತಾಲ್ಲೂಕಿನ ತಿಗಣಿಬಿದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ ಐಶ್ವರ್ಯ ಅಶೋಕ ಬಿರಾದಾರ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆಯುವ 68 ನೇ ರಾಷ್ಟ್ರ ಮಟ್ಟದ ಹದಿನಾಲ್ಕು ವರ್ಷ ವಯೋಮಿತಿಯ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಕರ್ನಾಟಕ ಕಬಡ್ಡಿ ತಂಡದಲ್ಲಿ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ತಿಕೋಟಾ: 68 ನೇ ರಾಷ್ಟ್ರ ಮಟ್ಟದ 14 ವರ್ಷ ವಯೋಮಿತಿಯ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಕರ್ನಾಟಕ ಕಬಡ್ಡಿ ತಂಡದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ತಿಗಣಿ ಬಿದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯ ಅಶೋಕ ಬಿರಾದಾರ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ಡಿ. 10, 11, 12 ರವರೆಗೆ ನಡೆಯುವ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ದೇಶದ ವಿವಿಧ ರಾಜ್ಯಗಳ ತಂಡಗಳು ಭಾಗವಹಿಸುತ್ತಿದ್ದು, ಕರ್ನಾಟಕದಿಂದ ಭಾಗವಹಿಸುವ ತಂಡದಲ್ಲಿ ವಿದ್ಯಾರ್ಥಿನಿ ಐಶ್ವರ್ಯ ಇದ್ದಾಳೆ.
ಉತ್ತಮ ಪ್ರದರ್ಶನ ನೀಡಿ ರಚನೆಯಾದ ಈ ಶಾಲೆಯ ಕಬಡ್ಡಿ ತಂಡವು ನಾಗರಾಳದಲ್ಲಿ ನಡೆದ ಕ್ಲಸ್ಟರ್ ಹಂತ, ಗುಣದಾಳದಲ್ಲಿ ನಡೆದ ವಲಯ ಮಟ್ಟದ ಹಂತ, ತಿಕೋಟಾದಲ್ಲಿ ನಡೆದ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಿತು. ನಂತರ ಜಿಲ್ಲಾ ಮಟ್ಟ, ವಿಭಾಗ ಮಟ್ಟ, ರಾಜ್ಯ ಮಟ್ಟದವರೆಗೆ ಈ ಶಾಲೆಯ ಕಬ್ಬಡಿ ತಂಡದ ಹಲವು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ, ಕೊನೆಗೆ ರಾಷ್ಟ್ರಮಟ್ಟದ ತಂಡಕ್ಕೆ ಐಶ್ವರ್ಯ ಆಯ್ಕೆಯಾಗಿದ್ದಾಳೆ ಎಂದು ಶಾಲಾ ತಂಡಕ್ಕೆ ತರಬೇತಿ ನೀಡಿದ ಈ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ ದೇಸಾಯಿ ಪ್ರಜಾವಾಣಿಗೆ ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡುತ್ತಾ ಕ್ರೀಡಾ ಚಟುವಟಿಕೆಯಲ್ಲೂ ಆಸಕ್ತಿಯಿಂದ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ, ಮುಖ್ಯ ಶಿಕ್ಷಕ ಬಿ.ಎಸ್.ಕೊಟ್ಯಾಳ ಅವರಿಗೆ, ಶಾಲಾ ಸಿಬ್ಬಂದಿಗೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ ತಂಡದಿಂದ ಆಯ್ಕೆಯಾಗಿ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ತುಂಬಾ ಖುಷಿಯಾಗಿದೆ. ಈ ಖುಷಿಯ ಹಿಂದೆ ನಮ್ಮ ಶಿಕ್ಷಕರ ಪ್ರೋತ್ಸಾಹವಿದೆಐಶ್ವರ್ಯ ಬಿರಾದಾರ ಕಬಡ್ಡಿ ಕ್ರೀಡಾಪಟು
ಶಿಕ್ಷಕರ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿನಿಯ ಕ್ರೀಡಾ ಪ್ರತಿಭೆ ಹಾಗೂ ಕ್ರೀಡಾ ಭವಿಷ್ಯ ಉಜ್ವಲವಾಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿಪ್ರಮೋದಿನಿ ಬಳೋಲಮಟ್ಟಿ ಬಿಇಒ ವಿಜಯಪುರ ಗ್ರಾಮೀಣವಲಯ
ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ
ಜಿಲ್ಲೆಯ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆ. ಕಬ್ಬಡಿ ಗ್ರಾಮೀಣ ಕ್ರೀಡೆ. ಈ ಸಂದರ್ಭದಲ್ಲಿ ಈ ವಿದ್ಯಾರ್ಥಿನಿಯ ಸಾಧನೆ ಸಂತಸ ತಂದಿದೆ. ಮಹಿಳೆಯರು ಹೆಚ್ಚು ಆಟಗಳಲ್ಲಿ ಭಾಗವಹಿಸಬೇಕು. ಪುರುಷ ಪ್ರಧಾನ ಆಟಗಳಲ್ಲಿ ಸರಿಸಮಾನವಾಗಿ ಮಹಿಳೆಯರು ಮಿಂಚುತ್ತಿರುವದು ಹೆಮ್ಮೆ. ಈ ವಿದ್ಯಾರ್ಥಿನಿ ಜಿಲ್ಲೆಗೆ ಮಾದರಿಯಾಗಿದ್ದು ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.