ಆಲಮಟ್ಟಿ (ವಿಜಯಪುರ ಜಿಲ್ಲೆ): ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದ ತೆಲಂಗಾಣಕ್ಕೆ ನೀರು ಹರಿಸಿದ್ದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಮಂಗಳವಾರ ಕೃಷ್ಣಾ ನದಿಗಿಳಿದು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಅಣಕು ಶ್ರದ್ಧಾಂಜಲಿ ನಡೆಸಿದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ‘ರಾಜ್ಯದ ರೈತರ ಮೇಲೆ ಕಳಕಳಿ ಇಲ್ಲದ ಸರ್ಕಾರ ತೆಲಂಗಾಣ ರಾಜ್ಯಕ್ಕೆ ನಿರಂತರ ನೀರು ಹರಿಸಿ ಆಲಮಟ್ಟಿ ಜಲಾಶಯದ ನೀರನ್ನು ಸಂಪೂರ್ಣ ಖಾಲಿ ಮಾಡುತ್ತಿದೆ’ ಎಂದು ಆರೋಪಿಸಿದರು.
ತೆಲಂಗಾಣಕ್ಕೆ ಕೇವಲ 1.24 ಟಿಎಂಸಿ ಅಡಿ ನೀರು ಹರಿ ಬಿಟ್ಟಿದ್ದೇವೆ ಎಂದು ಸುಳ್ಳು ಹೇಳಿ 10 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದರು.
‘ನಿತ್ಯ ಆಲಮಟ್ಟಿಯಿಂದ 12,500 ಕ್ಯುಸೆಕ್ ನಷ್ಟು ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸುವ ಉದ್ದೇಶ ಏನು? ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಗಳು ಇದನ್ನು ಪ್ರಶ್ನಿಸುತ್ತಿಲ್ಲ, ಪ್ರತಿಭಟಿಸುತ್ತಿಲ್ಲ. ಪ್ರತಿಪಕ್ಷದವರು ಸುಮ್ಮನಿರುವುದು ಜಿಲ್ಲೆಯ ದೌರ್ಬಾಗ್ಯ’ ಎಂದು ತಿಳಿಸಿದರು.
ಮುಖಂಡ ವಿಠ್ಠಲ ಬಿರಾದಾರ, ಹೊನಕೇರೆಪ್ಪ ತೆಲಗಿ, ಈರಪ್ಪ ಹಂಚನಾಳ, ಸೋಮು ಬಿರಾದಾರ, ಬಾಲಪ್ಪಗೌಡ ಲಿಂಗದಳ್ಳಿ ರಾಮನಗೌಡ ಹಾದಿಮನಿ ಮಲ್ಲಪ್ಪ ಪಡಸಲಗಿ, ಗಿರಿಮಲ್ಲಪ್ಪ ದೊಡಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.