ಹುಣಸಗಿ: ತಾಲ್ಲೂಕಿನ ಗಡಿ ಗ್ರಾಮವಾಗಿರುವ ಬಸಾಪುರ ಗ್ರಾಮಕ್ಕೆ ಇಲ್ಲಿಯವರೆಗೂ ಒಂದು ಬಾರಿಯೂ ಬಸ್ ಸೌಲಭ್ಯವಿರಲಿಲ್ಲ. ಆದರೆ ಸದ್ಯ ಸುರಪುರ ಬಸ್ ಘಟಕದ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ್ದು, ಬಸಾಪುರ ಗ್ರಾಮದ ಜನತೆಯ ಸಂತಸಕ್ಕೆ ಕಾರಣವಾಗಿದೆ.
ಈ ಕುರಿತು ಗ್ರಾಮದ ಶಿಕ್ಷಕರಾದ ನೀಲಪ್ಪ ತೆಗ್ಗಿ ಅವರು ಮಾತನಾಡಿ, ‘ನಮ್ಮ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದ್ದರಿಂದಾಗಿ ಗ್ರಾಮದ ಜನರು ಯಾವುದೇ ಕೆಲಸ ಕಾರ್ಯಗಳಿಗೆ ಖಾಸಗಿ ವಾಹನಗಳಿಗೆ ಅವಲಂಬಿತರಾಗಿದ್ದರು. ಅಲ್ಲದೆ ಬಡ ಜನತೆ ನಡೆದುಕೊಂಡು ಹೋಗುವ ಪರಿಸ್ಥಿತಿ ಇತ್ತು. ವಿದ್ಯಾರ್ಥಿನಿಯರು ಹೆಚ್ಚಿನ ಶಿಕ್ಷಣಕ್ಕೆ ಪರದಾಡುವಂತಿತ್ತು. ಈ ಕುರಿತು ಸುರಪುರ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ಸ್ಪಂದಿಸಿ ಬೆಳಿಗ್ಗೆ ಮತ್ತೆ ಸಂಜೆ ಹುಣಸಗಿಯಿಂದ ವಿಜಯಪುರ ಜಿಲ್ಲೆಯ ನಾಲತವಾಡದವರೆಗೆ ಬಸ್ ಸಂಪರ್ಕ ಕಲ್ಲಿಸಿದ್ದಾರೆ’ ಎಂದು ಹೇಳಿದರು.
ಈ ಬಸ್ ನಿರಂತರವಾಗಿ ಸಂಚರಿಸಲಿ ಎಂದು ಗ್ರಾಮದ ನೀಲಕಂಠ ಕೊಂಡಿಕಾರ ಆಶಿಸಿದರು.
ಬಸ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಚಾಲಕ ನಿರ್ವಾಹಕರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಿಂಗಪ್ಪ ಕೊಂಡಿಕಾರ, ಸಿದ್ದಪ್ಪ ಬಿರಾದಾರ, ಸುರೇಶ, ಪವನ್ ಕೊಂಡಿಕಾರ, ಯಮನಪ್ಪ ಜೈನಾಪುರ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.