ADVERTISEMENT

ಹಾನಿ ಸಮೀಕ್ಷೆ: ಒಂದು ಎಕರೆಯೂ ತಪ್ಪಬಾರದು: ಶರಣಬಸಪ್ಪ ದರ್ಶನಾಪುರ

ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಾಕೀತು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:58 IST
Last Updated 17 ಸೆಪ್ಟೆಂಬರ್ 2025, 5:58 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ಜಿಲ್ಲಾಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜಿಲ್ಲಾಧಿಕಾರಿಹರ್ಷಲ್ ಭೋಯರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಸಂಸದ ಜಿ.ಕುಮಾರ್ ನಾಯಕ ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿದರು. ಜಿಲ್ಲಾಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಜಿಲ್ಲಾಧಿಕಾರಿಹರ್ಷಲ್ ಭೋಯರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಸಂಸದ ಜಿ.ಕುಮಾರ್ ನಾಯಕ ಉಪಸ್ಥಿತರಿದ್ದರು   

ಯಾದಗಿರಿ: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆ ಸಮೀಕ್ಷೆಯಲ್ಲಿ ಒಂದೇ ಒಂದು ಎಕರೆಯೂ ತಪ್ಪಿ ಹೋಗಬಾರದು. ಮೂರು ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಹಾನಿಯ ಮಾಹಿತಿಯನ್ನು ಕ್ರೋಡೀಕರಣ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ 10 ತಿಂಗಳ ಬಳಿಕ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆ ಆರಂಭದಲ್ಲಿ ಕೃಷಿ ಇಲಾಖೆಯ ಪ್ರಗತಿ ವಿವರ ಕೇಳಲಾಯಿತು. ಶಾಸಕ ಶರಣಗೌಡ ಕಂದಕೂರ ಅವರು ‘ಗುರುಮಠಕಲ್ ಕ್ಷೇತ್ರದಲ್ಲಿ ಬೆಳೆ ಹಾನಿ ಶೂನ್ಯ ಪ್ರಮಾಣದಲ್ಲಿ ತೋರಿಸಲಾಗಿದೆ. ಹಲವು ರೈತರು ಫೋನ್ ಕರೆ ಮಾಡಿ, ತಮ್ಮ ಜಮೀನಿನ ಸಮೀಕ್ಷೆ ಅಧಿಕಾರಿ ಬಂದಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಭಾವಿಗಳು ಸೂಚಿಸದ ಕಡೆಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಲೋಪವೂ ಕಂಡುಬರುತ್ತಿದೆ’ ಎಂದರು.

ADVERTISEMENT

ಇದಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರೂ ಧ್ವನಿಗೂಡಿಸಿ, ‘ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಬೇಕು. ಆದರೆ, ಒಂದೊಂದು ಇಲಾಖೆಯವರು ಪ್ರತ್ಯೇಕವಾಗಿ ತೆರಳುತ್ತಿದ್ದಾರೆ. ಇದರಿಂದ ರೈತರಲ್ಲಿ ಗೊಂದಲ ಆಗುತ್ತಿದೆ’ ಎಂದು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ರೈತರು ಒಂದು ವರ್ಷ ಬೆಳೆ ಕಳೆದುಕೊಂಡರೆ ಅದರ ನಷ್ಟದಿಂದ ಹೊರಬರಲು ಮೂರ್ನಾಲ್ಕು ವರ್ಷಗಳು ಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವ ರೈತನಿಗೆ ನಾವು ಕನಿಷ್ಠ ಮೊತ್ತವನ್ನು ನಷ್ಟ ಪರಿಹಾರವಾಗಿ ಕೊಡುತ್ತೇವೆ. ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡಿ, ವರದಿ ಕೊಡದಿದ್ದರೆ ರೈತರು ಕಚೇರಿಗೆ ಅಲೆದಾಡುವುದರಲ್ಲಿಯೇ ಪರಿಹಾರದ ಹಣವನ್ನು ಖರ್ಚು ಮಾಡಿಕೊಳ್ಳುತ್ತಾರೆ’ ಎಂದರು.

‘ಮೂರು ಇಲಾಖೆಯವರು ಸಮನ್ವಯದಿಂದ ಸಮೀಕ್ಷೆ ನಡೆಸಿ, 100 ಪರ್ಸೆಂಟ್ ರೈತರಿಗೆ ನ್ಯಾಯ ಸಿಗುವಂತೆ ಆಗಬೇಕು. ಸಮೀಕ್ಷೆ ಮುಗಿದ ಬಳಿಕ ಎಲ್ಲ ಶಾಸಕರು, ಅಧಿಕಾರಿಗಳು ಸಭೆ ನಡೆಸಿ ವರದಿಯನ್ನು ಪರಿಶೀಲಿಸಿದ ಬಳಿಕವೇ ಸರ್ಕಾರಕ್ಕೆ ಸಲ್ಲಿಸೋಣ’ ಎಂದು ಹೇಳಿದರು.

‘ಸರ್ಕಾರಿ ಯೋಜನೆಗಳ ಸಬ್ಸಿಡಿಗಾಗಿ ಬ್ಯಾಂಕ್‌ಗಳಿಗೆ ಅರ್ಜಿ ಹಾಕಿದವರ ಮಾಹಿತಿಯನ್ನು ಜಿಲ್ಲಾಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು. ಸಾಲ ಕೊಡದಿರುವ ಬ್ಯಾಂಕ್‌ ಬಗ್ಗೆಯೂ ಗಮನಕ್ಕೆ ತರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಗುರುಮಠಕಲ್‌ನಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ, ತೊಗರಿ ಬೆಳೆ ಹಾನಿಯಾಗಿದ್ದು, ಈಗಾಗಲೇ ಶೇ 70ರಷ್ಟು ಹಾನಿಯ ಸಮೀಕ್ಷೆ ಮುಗಿದಿದೆ. ಜಮೀನುಗಳಲ್ಲಿ ನೀರು ನಿಂತು, ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಸಮೀಕ್ಷಾ ಕಾರ್ಯಕ್ಕೆ ಅಡ್ಡಿಯಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಸ್ಪಷ್ಟನೆ ನೀಡಿದರು.

ಸಭೆಯಲ್ಲಿ ಸಂಸದ ಜಿ.ಕುಮಾರ್ ನಾಯಕ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಎಸ್ಪಿ ಪೃಥ್ವಿಕ್ ಶಂಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು. ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು ರಾಜಾ ವೇಣುಗೋಪಾಲ್ ನಾಯಕ್ ಉಪಸ್ಥಿತರಿದ್ದರು
ರೈತರ ಆತ್ಮಹತ್ಯೆಯ ಪ್ರಕರಣಗಳನ್ನು ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು. ನಿಯಮಗಳ ಬದಲಾವಣೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
ಛಲವಾದಿ ನಾರಾಯಣಸ್ವಾಮಿ
ಹಳೇ ವೈರ್ ವಿದ್ಯುತ್ ಕಂಬಗಳ ಬದಲಾವಣೆಗೆ ಜೆಸ್ಕಾಂ ಅಧಿಕಾರಿಗಳಿಗೆ ಪತ್ರಗಳನ್ನು ಬರೆದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇನ್ನು ಮುಂದೆ ಹೀಗೆ ಆಗಬಾರದು
ರಾಜಾ ವೇಣುಗೋಪಾಲ್ ನಾಯಕ ಶಾಸಕ 
ಸಭೆಯಲ್ಲಿ ಸಚಿವರು ಶಾಸಕರು ಸೂಚಿಸಿರುವ ನಡಾವಳಿಗಳು ಕಟ್ಟು ನಿಟ್ಟಾಗಿ ಜಾರಿಗೆ ತಂದು ಜನರಿಗೆ ಉತ್ತಮ ಆಡಳಿತ ನೀಡಲಾಗುವುದು. ಅನುಪಾಲನ ವರದಿಯನ್ನು ತರಿಸಿಕೊಳ್ಳಲಾಗುವುದು
ಹರ್ಷಲ್ ಭೋಯರ್ ಜಿಲ್ಲಾಧಿಕಾರಿ
‘ಶಿಕ್ಷಕರ ವರ್ಗಾವಣೆ; ಅನುಮತಿ ಕಡ್ಡಾಯ’
‘ಶಿಕ್ಷಕರ ವರ್ಗಾವಣೆಯ ಕೌನ್ಸಿಲಿಂಗ್ ಕೆಲವು ದಿನಗಳಲ್ಲಿ ನಡೆಯಲಿದೆ. ಇಲ್ಲಿಂದ ಹೊರಗೆ ಹೋದ ಪ್ರತಿ ಆರು ಶಿಕ್ಷಕರ ಪೈಕಿ ಮೂವರು ಮಾತ್ರ ಒಳ ಬರುತ್ತಿದ್ದಾರೆ. ಈಗಾಗಲೇ ಗಣಿತ ವಿಜ್ಞಾನ ಹಿಂದಿ ಭಾಷಾ ವಿಷಯಗಳಿಗೆ ಕೆಲವೆಡೆ ಅತಿಥಿ ಶಿಕ್ಷಕರೂ ಇಲ್ಲ’ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ ಅವರು ‘ಶಿಕ್ಷಕರ ಕೌನ್ಸಿಲಿಂಗ್ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದ ಸಮಿತಿ ಇದೆ. ಸಮಿತಿ ಅನುಮತಿ ಇಲ್ಲದೆ ವರ್ಗಾವಣೆಯಡಿ ಬಿಡುಗಡೆ ಮಾಡುವಂತೆ ಇಲ್ಲ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಬಾರದು’ ಎಂದರು. ‘ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಬಯೋಮೆಟ್ರಿಕ್ ಅಳವಡಿಕೆ ಬಗ್ಗೆ ಪರಿಶೀಲಿಸಿ. ಅಕ್ಷರ ಆವಿಷ್ಕಾರದಡಿ ಶಾಲಾ ತರಗತಿಗಳ ದುರಸ್ತಿ ಶೌಚಾಲಯ ಕುಡಿಯುವ ನೀರು ಕಾಂಪೌಂಡ್ ನಿರ್ಮಾಣಕ್ಕೆ ಆದ್ಯತೆ ಕೊಟ್ಟು ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಸೂಚಿಸಿದರು.
‘ಜೆಜೆಎಂ ಕಾಮಗಾರಿ ಮುಗಿದಿದೆ ಆದರೆ ನೀರೇ ಬರುತ್ತಿಲ್ಲ’
‘ಜೆಜೆಎಂ ಯೋಜನೆಯಡಿ ಕಾಮಗಾರಿಗಳು ಮುಗಿದಿವೆ. ಬಿಲ್ ಕೂಡ ಪಾವತಿ ಆಗಿದೆ. ಆದರೆ ನೀರಿನ ಮೂಲವೇ ಇಲ್ಲದೆ ಕೊಳವೆ ಹಾಕಿಸಿಕೊಂಡ ನಲ್ಲಿಗಳಿಂದ ಜನರಿಗೆ ನೀರೇ ಸಿಗುತ್ತಿಲ್ಲ’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಅಸಮಾಧಾನ ವ್ಯಕ್ತಪಡಿಸಿದರು. ‌‘ಗುತ್ತಿಗೆದಾರರು ಕಾಮಗಾರಿ ಮುಗಿಸಿದರೆ ಸಾಲದು ನಲ್ಲಿಗಳಲ್ಲಿ ನೀರು ಬಂದು ಜನರು ಕುಡಿಯುವಂತೆ ಆಗಬೇಕು. ಆದರೆ ಅರ್ಧಷ್ಟು ಕಾಮಗಾರಿಗಳು ತೃಪ್ತಿಕರವಾಗಿಲ್ಲ. ಕೆಲವು ಕಡೆಗಳಲ್ಲಿ ಕಾಮಗಾರಿ ಮುಗಿದು ಎರಡ್ಮೂರು ವರ್ಷಗಳಾದರೂ ಪಂಚಾಯಿತಿಗೆ ಹಸ್ತಾಂತರ ಮಾಡಿಲ್ಲ. ಹಸ್ತಾಂತರ ಮಾಡಿಕೊಳ್ಳದ ಪಿಡಿಒಗಳನ್ನು ಅಮಾನತು ಮಾಡಬೇಕು’ ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ‘ಜೆಜೆಎಂ ಕಾಮಗಾರಿಯ ಬಾಳಿಕೆಯ ಅವಧಿ 30 ವರ್ಷಗಳಿದೆ. ಆದರೆ ಕೆಲವೆಡೆ ಕಳಪೆ ಗುಣಮಟ್ಟದಿಂದ ಕೂಡಿದೆ. ಪೈಪ್‌ಗಳನ್ನು ನಿಗದಿಗಿಂತ ಮೇಲೆ ಹಾಕಲಾಗಿದೆ’ ಎಂದರು.
ಪಡಿತರ ಡೀಲರ್‌ ಮೇಲೆ ನಿಗ ಇರಿಸಿ’
‘ಜಿಲ್ಲೆಯಲ್ಲಿ 4000 ಕ್ವಿಂಟಲ್ ಅಕ್ರಮ ಪರಿತರ ಅಕ್ಕಿ ಪತ್ತೆಯಾಗಿದೆ. ಹೀಗಾಗಿ ಆಹಾರ ಇಲಾಖೆಯವರು ಪಡಿತರ ಡೀಲರ್‌ಗಳ ಮೇಲೆ ನಿಗ ಇರಿಸಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಸೂಚಿಸಿದರು.‌ ಇದಕ್ಕೆ ಧ್ವನಿಗೂಡಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ‘ರಾಜಾರೋಷವಾಗಿ ಅಕ್ಕಿ ಮಾರಾಟ ನಡೆಯುತ್ತಿದೆ. ಫುಡ್‌ ಇನ್‌ಸ್ಪೆಕ್ಟರ್‌ಗಳಿಗಿಂದ ಡೀಲರ್‌ಗಳು ಡೀಲರ್‌ಗಿಂತ ಫುಡ್‌ ಇನ್‌ಸ್ಪೆಕ್ಟರ್‌ಗಳು ಬುದ್ಧಿವಂತರಿದ್ದಾರೆ. ಆದರೂ ನಿಯಂತ್ರಿಸಲು ಆಗುತ್ತಿಲ್ಲ’ ಎಂದರು.
ಜಿಲ್ಲಾಡಳಿತದ ವಿರುದ್ಧ ಶಾಸಕ ಶರಣಗೌಡ ಗರಂ
ಕೆಡಿಪಿ ಸಭೆಯಲ್ಲಿ ಶಾಸಕ ಶರಣಗೌಡ ಕಂದಕೂರ ಅವರು ಜಿಲ್ಲಾಡಳಿತದ ವಿರುದ್ಧ ಸಿಟ್ಟಾದರು. ಈ ಹಿಂದಿನ ಅಧಿಕಾರಿಗಳು ಕೆಡಿಪಿ ಸಭೆಗೂ ಮುನ್ನ ಶಾಸಕರಿಗೆ ಫೋನ್ ಕರೆ ಮಾಡಿ ಮಾಹಿತಿ ನೀಡುತ್ತಿದ್ದರು. ಸಭೆಯ ದಿನಾಂಕ ನಿಗದಿಯ ಬಗ್ಗೆ ಮಾಹಿತಿ ನೀಡಿಲ್ಲ’ ಎಂದು ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒ‌ ವಿರುದ್ಧ ‌ಕಿಡಿಕಾರಿದರು.
ಮೊಬೈಲ್ ‌ನೋಡುವುದರಲ್ಲೇ ಅಧಿಕಾರಿಗಳು ಬ್ಯುಸಿ
ಸಚಿವ ಶರಣಬಸಪ್ಪ ದರ್ಶನಾಪುರ ಅವರ ನೇತೃತ್ವದಲ್ಲಿ ಕೆಡಿಪಿ‌ ಸಭೆ ನಡೆಯುತ್ತಿದ್ದರೆ ಕೆಲವು ಅಧಿಕಾರಿಗಳು ತಮಗೇನು ಸಂಬಂಧವೇ ಇಲ್ಲ ಎಂಬಂತೆ ಮೊಬೈಲ್‌ನಲ್ಲಿ ಮುಳುಗಿದ್ದರು. ಕೆಲವರು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿದ್ದರೆ ಮತ್ತೆ ಕೆಲವರು ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಮಾಡುತ್ತಿದ್ದರು. ಇನ್ನೂ ಕೆಲವರು ವಿಡಿಯೊ ಫೊಟೊಗಳು ನೋಡುವುದರಲ್ಲಿ ಬ್ಯುಸಿ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.