
ಯಾದಗಿರಿ: ತಾಲ್ಲೂಕಿನ ಅರಕೇರಾ (ಕೆ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ನುಸಿ ಹುಳು ತಗುಲಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪಡಿತರಗಳನ್ನು ರಾಶಿ ಯಂತ್ರ ಬಳಸಿ ಸೋಮವಾರ ಸ್ವಚ್ಛ ಮಾಡಿದ್ದಾರೆ.
‘ರಾಶಿ ಯಂತ್ರವನ್ನು ಬಳಸಿಕೊಂಡು ಸುಮಾರು 7 ಕ್ವಿಂಟಲ್ ಅಕ್ಕಿ, 6 ಕ್ವಿಂಟಲ್ ಗೋಧಿ ಹಾಗೂ ಒಂದು ಕ್ವಿಂಟಲ್ ತೊಗರಿ ಬೇಳೆಯನ್ನು ಸ್ವಚ್ಛ ಮಾಡಿಸಿದ್ದೇವೆ’ ಎಂದು ಶಿಕ್ಷಕ ಶಂಕರ್ ರಾಠೋಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಕ್ಟೋಬರ್ ಮೊದಲ ವಾರದಿಂದ ಶಾಲೆಗೆ ರಜೆ ಘೋಷಿಸಲಾಗಿತ್ತು. ರಜೆಗೆ ಮುನ್ನ ಅಕ್ಕಿ, ಗೋಧಿ ಹಾಗೂ ತೊಗರಿ ಬೇಳೆ ಚೆನ್ನಾಗಿ ಇದ್ದವು. ಶಾಲೆಗೆ ಬೀಗ ಹಾಕಿ, ಕೋಣೆಯಲ್ಲಿ ಧಾನ್ಯಗಳನ್ನು ಬಹಳ ದಿನ ಇರಿಸಿದ್ದರಿಂದ ನುಸಿ ಹುಳು ಹತ್ತಿದ್ದವು’ ಎಂದರು.
ಹತ್ತಾರು ಕ್ವಿಂಟಲ್ ಧಾನ್ಯಗಳು ಇದ್ದಿದ್ದರಿಂದ ಸಿಬ್ಬಂದಿ ಮೂಲಕ ಸ್ವಚ್ಛ ಮಾಡಿಸುವುದು ಕಷ್ಟವಾಗಿತ್ತು. ಹೀಗಾಗಿ, ರಾಶಿ ಯಂತ್ರದ ಮೊರೆ ಹೋಗಿ ಸ್ವಚ್ಛಗೊಳಿಸಿದ್ದಾರೆ. ಗಂಟೆಗಳ ಕಾಲ ಸ್ವಚ್ಛತಾ ಕಾರ್ಯ ನಡೆದಿದ್ದು, ಯಂತ್ರದ ಮಾಲೀಕ ಹಣ ಪಡೆದಿಲ್ಲ. ಶಾಲೆಯ ಶಿಕ್ಷಕರು ಸೇರಿ ಇಂಧನ ಖರ್ಚು ಭರಿಸಿದ್ದೇವೆ’ ಎಂದು ಹೇಳಿದರು.
ಮುಖ್ಯಶಿಕ್ಷಕ ಚಂದ್ರನಾಯಕ್, ಶಿಕ್ಷಕರಾದ ಸಾಬಣ್ಣ, ಕಾಶಪ್ಪ, ರೇಣುಕಾ, ನರಸಮ್ಮ, ವಿದ್ಯಾಶ್ರೀ, ಅನುರಾಧ, ಭೀಮಬಾಯಿ, ಅಡುಗೆ ಸಿಬ್ಬಂದಿ ಸ್ವಚ್ಛತೆಯಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.