ADVERTISEMENT

ಪೂರ್ವ ಮುಂಗಾರು | ವಿದ್ಯುತ್‌ ಅವಘಡ: ಬೇಕಿದೆ ಮುನ್ನಚ್ಚರಿಕೆ

ಬಿ.ಜಿ.ಪ್ರವೀಣಕುಮಾರ
Published 16 ಏಪ್ರಿಲ್ 2025, 7:17 IST
Last Updated 16 ಏಪ್ರಿಲ್ 2025, 7:17 IST
ಯಾದಗಿರಿ ನಗರದಲ್ಲಿ ಈಚೆಗೆ ಸುರಿದ ಪೂರ್ವ ಮುಂಗಾರು ಮಳೆ ಸಂಗ್ರಹ ಚಿತ್ರ
ಯಾದಗಿರಿ ನಗರದಲ್ಲಿ ಈಚೆಗೆ ಸುರಿದ ಪೂರ್ವ ಮುಂಗಾರು ಮಳೆ ಸಂಗ್ರಹ ಚಿತ್ರ   

ಯಾದಗಿರಿ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಆರಂಭವಾಗಿದ್ದು ಅಲ್ಲಲ್ಲಿ ವಿದ್ಯುತ್‌ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ ಮುನ್ನಚ್ಚರಿಕೆ ಅಗತ್ಯವಿದೆ.

ಜಿಲ್ಲೆಯಲ್ಲಿ ಜೆಸ್ಕಾಂ ಎರಡು ವಿಭಾಗಗಳನ್ನು ಮಾಡಲಾಗಿದೆ. ಯಾದಗಿರಿ, ಗುರುಮಠಕಲ್‌, ವಡಗೇರಾ ವಿಭಾಗ, ಶಹಾಪುರ, ಸುರಪುರ, ಹುಣಸಗಿ ಮತ್ತೊಂದು ವಿಭಾಗವಾಗಿದೆ.

ಒಂದೆಡೆ ಬೇಸಿಗೆ, ಮತ್ತೊಂದೆಡೆ ಪೂರ್ವ ಮುಂಗಾರು ಆರಂಭವಾಗಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಬೇಸಿಗೆ ಇರುವುದರಿಂದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟ 24 ತಾಸುಗಳಲ್ಲಿ ಬೇರೆ ಟಿಸಿ ಅಳವಡಿಕೆ ಮಾಡಬೇಕೆಂಬ ಸರ್ಕಾರದ ನಿಯಮವಿದೆ. ಆದರೆ, ಸರ್ಕಾರದ ನಿಯಮ ಗಾಳಿಗೆ ತೂರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ.

ADVERTISEMENT

ಗ್ರಾಮೀಣ ಭಾಗದಲ್ಲಿ ಕಣ್ಣಾಮುಚ್ಚಾಲೆ: ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಸಮಸ್ಯೆ ತೀವ್ರವಾಗಿದೆ. ಕೆಲವೊಮ್ಮೆ ಅನಿಯಮಿತವಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.

ಜಾಲಿಬೆಂಚಿ ಘಟನೆ: ಸುರಪುರ ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಈಚೆಗೆ ವಿದ್ಯುತ್ ಅವಘಡವಾಗಿ ಅರ್ಧ ಗ್ರಾಮದಷ್ಟು ಮನೆಗಳು ವಿದ್ಯುತ್ ಸಂಪರ್ಕ ಕಡಿತವಾಗಿತ್ತು.

ಕಳೆದ ಏಳೆಂಟು ವರ್ಷಗಳ ಹಿಂದೆ ವಿದ್ಯುತ್‌ ತಂತಿ ಎಳೆಯಲಾಗಿತ್ತು. ವಿದ್ಯುತ್ ತಂತಿಗಳು ಜೋತು ಬಿದ್ದು ವರ್ಷಗಳೇ ಕಳೆದಿದ್ದರೂ ಸರಿ ಮಾಡಿರಲಿಲ್ಲ.

ಸುಮಾರು 100 ಮನೆಗಳಲ್ಲಿ ವಿದ್ಯುತ್‌ ಅವಘಢ ಸಂಭವಿಸಿವೆ. ನೂರಾರು ಮನೆಗಳ ಟಿ.ವಿ., ಫ್ಯಾನ್, ಏರಕೂಲರ್, ರೆಫ್ರಿಜೆಟರ್‌, ಬ್ಯಾಟರಿ ಸುಟ್ಟು ಹೋಗಿತ್ತು. ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ, ಶೀಘ್ರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

10 ಜನರ ಗ್ಯಾಂಗ್‌ಮ್ಯಾನ್‌ ನೇಮಕ: ಜಾಲಿಬೆಂಚಿ ಘಟನೆ ನಂತರ ಸುರಪುರ ವಿಭಾಗದಲ್ಲಿ 10 ಜನರ ಗ್ಯಾಂಗ್‌ಮ್ಯಾನ್‌ ನೇಮಕ ಮಾಡಿಕೊಳ್ಳಲಾಗಿದೆ.

ಜಂಗಲ್ ಕಟಿಂಗ್, ಫೀಡರ್‌, ಕಂಬ, ತಂತಿಗಳ ದುರಸ್ತಿ, ಟ್ರಿಪ್‌ ಪರಿಶೀಲನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುವ ಮಾತಾಗಿದೆ.

ಗುರುಮಠಕಲ್‌ ತಾಲ್ಲೂಕಿನ ಯದ್ಲಾಪುರ ಜೆಸ್ಕಾಂ ವತಿಯಿಂದ ಜಂಗಲ್‌ ಕಟಿಂಗ್‌
ಯಾದಗಿರಿ, ಗುರುಮಠಕಲ್‌ ವಿಭಾಗದಲ್ಲಿ ವಿದ್ಯುತ್‌ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕೊಳ್ಳಲಾಗಿದೆ. ಜಂಗಲ್‌ ಕಟಿಂಗ್‌, ಟಿಸಿ ಸುತ್ತ ಸ್ವಚ್ಛಗೊಳಿಸಲಾಗಿದೆ
ಡಿ.ರಾಘವೇಂದ್ರ ಯಾದಗಿರಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್‌
ಈಚೆಗೆ ನಡೆದ ಜಾಲಿಬೆಂಚಿ ಘಟನೆಯ ನಂತರ ಎಚ್ಚೆತ್ತುಕೊಂಡು ಎಲ್ಲ ಸ್ಟೇಷನ್‌ಗಳನ್ನು ಪರೀಕ್ಷೆ ಮಾಡಿ ವಿದ್ಯುತ್‌ ಹರಿಸಲಾಗುತ್ತಿದೆ
ರಾಜಶೇಖರ ಸುರಪುರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್‌
ನಿರ್ಲಕ್ಷ್ಯಕ್ಕೆ ಯುವಕ ಸಾವು?
ನಗರದ ಎಪಿಎಂಸಿ ಯಾರ್ಡ್ ಹಿಂದುಗಡೆ ಹೈವೋಲ್ಟೇಜ್‌ನ ಪವರ್ ವೈರ್ ಹಾದು ಹೋಗಿದ್ದು ಮೂರು ದಿನಗಳಿಂದ ತುಂಡಾಗಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೆ ಎನ್ನುವ ಪ್ರಶ್ನೆ ಎದ್ದಿದೆ. ವಿದ್ಯುತ್ ತಂತಿ ಏಕಾಏಕಿ ಹರಿದು ಯುವಕ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದ್ದು ಅಧಿಕಾರಿಗಳ ಬೇಜಾಬ್ದಾರಿ ತೋರಿಸುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 110 ಕೆವಿ ತಂತಿ ಯುವಕನ ಬೆನ್ನಿನ ಮೇಲೆ ಹಾದು ಹೋಗಿದ್ದು ಯುವಕ ಬೈಕ್‌ ಮೇಲೆಯೇ ಒರಗಿ ಪ್ರಾಣ ಬಿಟ್ಟಿದ್ದಾನೆ. ಇದರಿಂದ ಯುವಕನ ಬೆನ್ನಿನ ಭಾಗ ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಲೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರಿಗೆ ಜೆಸ್ಕಾಂ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಯಿಮ್ಸ್‌ ಆಸ್ಪತ್ರೆಯಲ್ಲಿ ಮರಣೋತ್ತರ ‍ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.