ಶಹಾಪುರ: ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರ ಮಂಜುನಾಥ ಅವರಿಗೆ ಶನಿವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಕೋವಿಡ್ ಲಸಿಕೆ ನೀಡುವುದರ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.
ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ.ಮಲ್ಲಪ್ಪ ಕಣಜಿಗಿಕರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೋಡಲ್ ಅಧಿಕಾರಿ ಪ್ರಭು ದೊರೆ, ಜಿಲ್ಲಾ ಕೈಮಗ್ಗ ಜವಳಿ ಇಲಾಖೆಯ ಉಪ ನಿರ್ದೇಶಕ ಅಜೀತ ನಾಯಕ, ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಸಮ್ಮುಖದಲ್ಲಿ ವೈದ್ಯರು ಲಸಿಕೆ ನೀಡಿದರು.
ಪ್ರಥಮದಲ್ಲಿ 10 ವ್ಯಾಕ್ಸಿನ್ ಸೀಲ್ಡ್ ರವಾನೆಯಾಗಿದೆ. ಒಂದರಲ್ಲಿ 10 ಜನರಿಗೆ ಲಸಿಕೆ ನೀಡಬಹುದಾಗಿದೆ. ಶಹಾಪುರ ನಗರ ಆಸ್ಪತ್ರೆಯ 87 ಸಿಬ್ಬಂದಿಗೆ ನೀಡಲಾಗುವುದು. ಎರಡನೇಯೆ ದಿನದಲ್ಲಿ 22 ತಾಲ್ಲೂಕು ವೈದ್ಯಾಧಿಕಾರಿಗಳ 17 ಸಿಬ್ಬಂದಿಗೆ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರ 22 ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ, ಮಲ್ಲಪ್ಪ ಕಣಜಿಗಿಕರ್ ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ 1,657 ಸಿಬ್ಬಂದಿಗೆ ಪ್ರಥಮ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ತಾಲ್ಲೂಕಿನಲ್ಲಿ 12 ಪ್ರಾಥಮಿಕ ಆರೋಗ್ಯ ಕೆಂದ್ರಗಳಿವೆ. ಪ್ರತಿ 4 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಬ್ಬರನ್ನು ಮೇಲ್ವಿಚಾರಕರನ್ನಾಗಿ ನೇಮಿಸಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯಾಧಿಕಾರಿ ಮೇಲ್ವಿಚಾರಣೆಗೆ ನಿಯೋಜನೆ ಮಾಡಲಾಗಿದೆ. ಲಸಿಕೆಯಿಂದ ತೊಂದರೆ ಉಂಟಾದಲ್ಲಿ ನಗರ ಆಸ್ಪತ್ರೆಯಲ್ಲಿ ರಜೆ ರಹಿತ ವೈದ್ಯಾಧಿಕಾರಿಗಳ ತಂಡ ರಚನೆ ಮಾಡಿದೆ. ಲಸಿಕೆ ಹಂತ ಮುಗಿಯುವವರೆಗೂ ಕರ್ತವ್ಯದಲ್ಲಿ ಇರುತ್ತಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ರಮೇಶ ಗುತ್ತೆದಾರವರು ತಿಳಿಸಿದರು.
ಆಸ್ಪತ್ರೆಯ ವೈದ್ಯರಾದ ಡಾ.ವೆಂಕಟೇಶ ಬೈರಾಮಡಗಿ, ಡಾ.ಶರಣಗೌಡ ಪಾಟೀಲ, ಡಾ.ಯಲ್ಲಪ್ಪ ಪಾಟೀಲ, ಡಾ.ಗಂಗಾಧರ ಚಂಟ್ರಕಿ, ಡಾ.ಜಗದೀಶ ಉಪ್ಪಿನ, ಡಾ.ಪ್ರವೀಣ ಪಾಟೀಲ, ಡಾ.ಸುರೇಖಾ ಪಾಟೀಲ, ಡಾ.ಪದ್ಮಾನಂದ ಗಾಯಕವಾಡ, ಡಾ.ಶಾಲಿನಿ, ಡಾ.ವಿಶ್ವನಾಥ ಬಂಗಾರಿ, ಡಾ.ಸರೋಜಾ ಪಾಟೀಲ, ಡಾ.ಪ್ರೀತಿ ಪಾಟೀಲ, ಡಾ.ಚಂದ್ರಶೇಖರ, ಡಾ.ಶೈಲಾಜ ಪಾಟೀಲ ಇದ್ದರು.
***
ಹತ್ತು ತಿಂಗಳಿಂದ ಭೀತಿಯಲ್ಲಿ ಸೇವೆ ಸಲ್ಲಿಸಿದ್ದೇವು. ಲಸಿಕೆಯಿಂದ ಬಂದಿರುವುದರಿಂದ ಭಯ ದೂರವಾಗಿದೆ. ಯಾವುದೇ ತೊಂದರೆಯಾಗಿಲ್ಲ. ಆರೋಗ್ಯವಾಗಿರುವೆ. ಪ್ರಥಮ ಹಂತದಲ್ಲಿ ಲಸಿಕೆ ಪಡೆದಿರುವುದಕ್ಕೆ ಖುಷಿ ಎನಿಸುತ್ತಿದೆ
-ಸಿದ್ದರಾಮ ರಡ್ಡಿ, ಗ್ರೂಪ್ ಡಿ ನೌಕರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.