
ಹುಣಸಗಿ: ‘ಭಾರತೀಯ ಸಂಸ್ಕೃತಿ ಪರಂಪರೆ ಹಾಗೂ ಇಲ್ಲಿನ ಆತ್ಮೀಯ ಭಾವದಿಂದ ಸಹೋದರಿ ನಿವೇದಿತಾ ಅವರು ತಮ್ಮ ಜೀವನವೇ ಅರ್ಪಿಸಿಕೊಂಡ ಧೀಮಂತ ಮಹಿಳೆ’ ಎಂದು ಸಾಮಾಜಿಕ ಸಾಮರಸ್ಯ ವೇದಿಕೆ ಜಿಲ್ಲಾ ಪ್ರಮುಖ ಶಿಕ್ಷಕಿ ಅಶ್ವಿನಿ ಕುಲಕರ್ಣಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಆಶೀರ್ವಾದ ಪದವಿಪೂರ್ವ ಕಾಲೇಜಿನಲ್ಲಿ ಸಾಮಾಜಿಕ ಸಾಮರಸ್ಯ ವೇದಿಕೆ ಯಾದಗಿರಿ ವತಿಯಿಂದ ಹಮ್ಮಿಕೊಂಡಿದ್ದ ಸಹೋದರಿ ನಿವೇದಿತಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ದೇಶದಲ್ಲಿ ಮಹಿಳೆಯರ ಮೂಢನಂಬಿಕೆ-ಅಜ್ಞಾನವನ್ನು ನಿರ್ಮೂಲನೆಗೊಳಿಸಿ ವೈಜ್ಞಾನಿಕ, ವೈಚಾರಿಕವಾಗಿ ತೊಡಗಿಸಿಕೊಳ್ಳಲು ಪ್ರೇರಣೆಯಾದರು. ಇವರ ಜೀವನ ಮತ್ತು ಸಂದೇಶದ ಕುರಿತು ಇಂದಿನ ಮಕ್ಕಳು ಅರಿತುಕೊಳ್ಳಬೇಕಿದೆ’ ಎಂದರು.
ಸಾಮಾಜಿಕ ಸಾಮರಸ್ಯ ವೇದಿಕೆ ಉತ್ತರ ಕರ್ನಾಟಕ ಪ್ರಾಂತ ಸಹ ಸಂಯೋಜಕ ಸು.ಕೃಷ್ಣಮೂರ್ತಿ ಮಾತನಾಡಿ, ‘ಸ್ವಾಮಿ ವಿವೇಕಾನಂದ ಅವರ ತತ್ವಗಳಿಂದ ಹೆಚ್ಚು ಪ್ರಭಾವಿತರಾಗಿ ಇಲ್ಲಿನ ಧರ್ಮವನ್ನು ಅರ್ಥೈಸಿಕೊಂಡು ಜೀವನ ನಡೆಸುತ್ತಾ ಸಮಾಜದ ಉನ್ನತಿಗೆ ಹಗಲಿರಳು ಶ್ರಮಿಸಿದರು. ಬಳಿಕ ಆಧುನಿಕ ಶಿಕ್ಷಣದ ಜೊತೆಗೆ ಸಮಾಜ ಕಲ್ಯಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು’ ಎಂದರು.
ಆಶೀರ್ವಾದ ಪದವಿಪೂರ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೀರಭದ್ರಗೌಡ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಸಾಮರಸ್ಯ ವೇದಿಕೆ ಜಿಲ್ಲಾ ಸಂಯೋಜಕ ಬಸವರಾಜ ಮೇಲಿನಮನಿ ಮಾತನಾಡಿದರು.
ಬಾಲರಾಜ ಕುಪ್ಪಿ, ಪ್ರಾಚಾರ್ಯ ಸೌದಗಾರ್ ಪವಾರ್, ಜ್ಞಾನೇಶ್ವರಿ ನಾಟೇಕರ್, ಐಶ್ವರ್ಯ ಕೋಲಿ, ಸ್ಫೂರ್ತಿ ಗೋಖಲೆ, ಕವಿತಾ ಚವ್ಹಾಣ, ರಾಜೇಶ್ವರಿ ಇದ್ದರು. ಶಿಕ್ಷಕ ಭೀಮರಾಯ ವನದುರ್ಗ ನಿರೂಪಿಸಿದರು. ಉಪನ್ಯಾಸಕ ಬಸವರಾಜ ಅಗ್ನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.