ವಾಡಿ: ಸಮೀಪದ ನಾಲವಾರ ಗ್ರಾಮದ ಪ್ರಸಿದ್ಧ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ರಥೋತ್ಸವಬುಧವಾರ ಜರುಗಿತು.
ಕೊವೀಡ್ ಕಾರಣದಿಂದ ಜಿಲ್ಲಾಡಳಿತ ಜಾತ್ರೆ ರದ್ದುಪಡಿಸಿದ್ದರೂ ಭಕ್ತರು ನಿರಂತರವಾಗಿ ಬರುತ್ತಲೇ ಇದ್ದರು.
ರಥೋತ್ಸವ ಸಮಯವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದರು. ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿದ ಮಠದ ಪೀಠಾಧಿಪತಿ ಡಾ.ಸಿದ್ದ ತೋಟೇಂದ್ರ ಶಿವಾಚಾರ್ಯರು ರಥಕ್ಕೆ ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥ ಮುಂದೆ ಸಾಗುತ್ತಿದ್ದ ಸಂದರ್ಭದಲ್ಲಿ ರಥ ಏರಿದ ತಹಶೀಲ್ದಾರ್ ಉಮಾಕಾಂತ ಹಳ್ಳೆ ಹಾಗೂ ಪೊಲೀಸ್ ಅಧಿಕಾರಿಗಳು ಸಿಮೀತ ದೂರದವರೆಗೆ ರಥ ಎಳೆದು ನಂತರ ನಿಲ್ಲಿಸುವಂತೆ ಪೀಠಾಧಿಪತಿ ಡಾ. ಸಿದ್ದತೋಟೇಂದ್ರ ಅವರಲ್ಲಿ ಮನವಿ ಮಾಡಿಕೊಂಡರು. ಆದರೆ ನೋಡನೋಡುತ್ತಲೇ ಭಕ್ತರು ಪ್ರತಿವರ್ಷದಂತೆ ಬಸವಣ್ಣನ ಗುಡಿವರೆಗೆ ರಥ ಎಳೆದರು.
ಜಾತ್ರೆಯಲ್ಲಿ ಜಮಾವಣೆಗೊಂಡ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಜಾತ್ರೆ ರದ್ದಾಗಿದ್ದು, ಕೇವಲ ಪೂಜೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಭಕ್ತರು ಮನೆಯಿಂದಲೇ ಪೂಜೆ ಸಲ್ಲಿಸಬೇಕು ಎಂದು ಮಠದ ವತಿಯಿಂದ ಪ್ರಕಟಣೆ ಹೊರಡಿಸಲಾಗಿತ್ತು.
ತನಾರತಿ ಉತ್ಸವ: ಬುಧವಾರ ಬೆಳಗಿನ ಜಾವ ಜರುಗಿದ ವರ್ಷದ ಮೊದಲ ತನಾರತಿ ಉತ್ಸವದಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿಯ ತನಾರತಿ ಹೊತ್ತು ಹರಕೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.