ADVERTISEMENT

ಸುರಪುರ ವಿಧಾನಸಭಾ ಕ್ಷೇತ್ರ | ಸಾಂಪ್ರದಾಯಿಕ ಎದುರಾಳಿಗಳು ಬದಲು

ಸುರಪುರ ಉಪಚುನಾವಣೆ: ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಉಪ ಕದನ

ಬಿ.ಜಿ.ಪ್ರವೀಣಕುಮಾರ
Published 27 ಏಪ್ರಿಲ್ 2024, 6:17 IST
Last Updated 27 ಏಪ್ರಿಲ್ 2024, 6:17 IST
ರಾಜಾ ವೇಣುಗೋಪಾಲ ನಾಯಕ 
ರಾಜಾ ವೇಣುಗೋಪಾಲ ನಾಯಕ    

ಯಾದಗಿರಿ: ಇತಿಹಾಸದಲ್ಲೇ ಪ್ರಥಮ ಬಾರಿಗೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಯಾಗಿದ್ದು, ಕಾಯಂ ಎದುರಾಳಿಗಳು ಬದಲಾಗಿದ್ದಾರೆ.

2004ರಿಂದ 2023ರ ವಿಧಾನಸಭೆ ಚುನಾವಣೆ ವರೆಗೆ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ಬದಲಾಗಿದ್ದಾರೆ.

ಸುರಪುರ ವಿಧಾನಸಭೆ ಕ್ಷೇತ್ರದ ಸಂಖ್ಯೆ 36 (ಎಸ್.ಟಿ. ಮೀಸಲು) ರಾಜ್ಯದಲ್ಲಿ ಸದಾ ಗಮನ ಸೆಳೆಯುತ್ತಿರುವ ಕ್ಷೇತ್ರ. ಅತಿ ಸೂಕ್ಷ್ಮ ಕ್ಷೇತ್ರಗಳಲ್ಲಿ ಇದು ಒಂದು.

ADVERTISEMENT

ಕಳೆದ ಎರಡು ದಶಕಗಳಿಂದ ರಾಜಾ ವೆಂಕಟಪ್ಪನಾಯಕ ಮತ್ತು ರಾಜೂಗೌಡ ಅವರೇ ಕಾಯಂ ಎದುರಾಳಿಗಳು. ಕ್ಷೇತ್ರ ಸುರಪುರ ತಾಲ್ಲೂಕಿನ ಕೆಂಭಾವಿ ಹೋಬಳಿ (ಶಹಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ) ಹೊರತು ಪಡಿಸಿ ಸುರಪುರ ಮತ್ತು ಹುಣಸಗಿ ತಾಲ್ಲೂಕು ವಿಸ್ತಾರ ವ್ಯಾಪ್ತಿ ಹೊಂದಿದೆ. ಸುರಪುರದಿಂದ ನಾರಾಯಣಪುರ ಕಡೆಯ ಕೊನೆಯ ಹಳ್ಳಿಗಳು 80 ಕಿ.ಮೀ ದೂರದಲ್ಲಿವೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಪ್ರಮುಖ್ಯತೆ ಹೆಚ್ಚು. ಕಾಂಗ್ರೆಸ್‌, ಬಿಜೆ‍ಪಿ ಪ‍ಕ್ಷಗಳು ಸಂಪ್ರದಾಯಿಕ ಎದುರಾಳಿಗಳು. ಈ ಬಾರಿಯೂ ಅದೇ ಮುಂದುವರಿದಿದೆ.

ಆದರೆ, ರಾಜಾ ವೆಂಕಟಪ್ಪ ನಾಯಕ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಅವರ ಪುತ್ರ ರಾಜಾ ವೇಣುಗೋಪಾಲ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಬಿಜೆಪಿಯಲ್ಲಿ ನರಸಿಂಹ ನಾಯಕ (ರಾಜೂಗೌಡ) ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ಚಟುವಟಿಕೆ ಚುರುಕು:

ಉಪಚುನಾವಣೆ ನಿಗದಿಯಾಗುತ್ತಿದ್ದಂಂತೆ ಎರಡು ಪಕ್ಷಗಳ ನಾಯಕರು ಮತದಾರರ ಜೊತೆಗೆ ನಿರಂತರ ಸಂಪರ್ಕ, ಹಳ್ಳಿಗಳಿಗೆ ಭೇಟಿ, ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಮತದಾರರಿಗೆ ಹಲವಾರು ಭರವಸೆಗಳನ್ನು ನೀಡುತ್ತಿದ್ದಾರೆ. ಪಕ್ಷದ ಸೇರ್ಪಡೆ ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿದ್ದಾರೆ.

ನೂತನ ತಾಲ್ಲೂಕು ಆಗಿರುವ ಹುಣಸಗಿ ತಾಲ್ಲೂಕಿನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಹಲವು ಇಲಾಖೆಗಳ ಕಚೇರಿ ಇಲ್ಲ. ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಗುಳೆ ಸಮಸ್ಯೆ ನಿಂತಿಲ್ಲ. ನಿರುದ್ಯೋಗ ಸಮಸ್ಯೆ ನೀಗಿಸಲು ಕಾರ್ಖಾನೆ ಸ್ಥಾಪನೆ, ಉದ್ಯೋಗ ಸೃಷ್ಟಿಯಂತಹ ಕೆಲಸಗಳು ಆಗಬೇಕಿದೆ. ಒಂದು ವರ್ಷದಲ್ಲೇ ಚುನಾವಣೆ ಎದುರಾಗಿದ್ದರಿಂದ ಮತದಾರರ ಒಲವು ಯಾವ ಕಡೆ ಇದೆ ಎನ್ನುವುದು ನಿಗೂಢವಾಗಿದೆ.

ರಾಜೂಗೌಡ

ಎರಡನೇ ಹಂತದಲ್ಲಿ ಚುನಾವಣೆ ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರಕ್ಕೆ ಮೇ 7ರಂದು ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಲೋಕಸಭೆ ಚುನಾವಣೆ ಜೊತೆಗೆ ಉಪಚುನಾವಣೆ ನಿಗದಿಯಾಗಿದೆ. ಒಟ್ಟೊಟ್ಟಿಗೆ ಎರಡು ಚುನಾವಣೆಗಳಿಗೆ ಸುರಪುರ ವಿಧಾನಸಭೆ ಮತದಾರರು ಮತ ಚಲಾವಣೆ ಮಾಡಬೇಕಿದೆ. ‌ನಾಮಪತ್ರ ಪ್ರಕ್ರಿಯೆ ಪೂರ್ಣಗೊಂಡ ನಂತರ ಎರಡು ಪಕ್ಷದ ಅಭ್ಯರ್ಥಿಗಳು ದೊಡ್ಡ ಮಟ್ಟದಲ್ಲಿ ಚುನಾವಣಾ ಪ್ರಚಾರಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ ಪಕ್ಷದ ರಾಷ್ಟ್ರ ರಾಜ್ಯ ನಾಯಕರ ದೊಡ್ಡ ದೊಡ್ಡ ಸಮಾರಂಭಗಳನ್ನು ಆಯೋಜಿಸಿ ಅತಿ ಹೆಚ್ಚು ಜನರನ್ನು ಸೇರಿಸುತ್ತಿದ್ದಾರೆ.‌ ಈ ಮೂಲಕ ಗೆಲ್ಲಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.

ವಾಲ್ಮೀಕಿ ಕುರುಬ ಲಿಂಗಾಯತ ನಿರ್ಣಾಯಕ ಸುರಪುರ ವಿಧಾನಸಭೆ ವ್ಯಾಪ್ತಿಯಲ್ಲಿ ವಾಲ್ಮೀಕಿ ಮತ್ತು ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಮತದಾರರು ನಿರ್ಣಾಯಕರಾಗಿದ್ದಾರೆ. ಸಾಕ್ಷರತಾ ಪ್ರಮಾಣ ಶೇ 54 ರಷ್ಟು ಇದ್ದು ಮತದಾರರು ಪ್ರಜ್ಞಾವಂತರಾಗಿದ್ದಾರೆ. ಮತದಾನ ಪ್ರಮಾಣ ಹೆಚ್ಚಿಸಲು ಸರ್ಕಾರ ಸೇರಿದಂತೆ ರಾಜಕೀಯ ಪಕ್ಷಗಳೂ ಕೆಲಸ ಮಾಡುತ್ತಿವೆ.

ಕಾರ್ಯಕರ್ತರು ತಟಸ್ಥ ಇಲ್ಲ ಸುರಪುರ ಮತಕ್ಷೇತ್ರದಲ್ಲಿರುವ ಕಾರ್ಯಕರ್ತರು ಯಾವುದಾದರೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ ಬಹುತೇಕ ಕಾರ್ಯಕರ್ತರಿದ್ದಾರೆ. ಉಳಿದ ಪ್ರಾದೇಶಿಕ ಪಕ್ಷಗಳಲ್ಲೂ ತೊಡಗಿಸಿಕೊಂಡಿದ್ದಾರೆ.ಆದರೆ ತಟಸ್ಥವಾಗಿ ಕಾರ್ಯಕರ್ತರು ಉಳಿದಿಲ್ಲ. ಇದರಿಂದ ಮನೆಗಳಲ್ಲಿ ಆಯಾ ಪಕ್ಷದ ಬಾವುಟ ಮುಖಂಡರ ಭಾವಚಿತ್ರ ಇರುವುದು ಸಾಮಾನ್ಯವಾಗಿದೆ. ರಾಜಕೀಯ ನಾಯಕರಾಗಿ ಹಲವಾರು ಗಲಾಟೆಗಳು ಆಗಿರುವ ಚರಿತ್ರೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.