
ಯಾದಗಿರಿ ನಗರದಲ್ಲಿ ಶನಿವಾರ ಕಲ್ಲಂಗಡಿ ಹಣ್ಣು ಖರೀದಿಯಲ್ಲಿ ನಿರತವಾದ ಗ್ರಾಹಕರು
ಯಾದಗಿರಿ: ಮಹಾಶಿವರಾತ್ರಿ ಆಚರಣೆಗಾಗಿ ನಗರವೂ ಸೇರಿದಂತೆ ಗ್ರಾಮೀಣ ಭಾಗದ ಎಲ್ಲ ಶಿವಾಲಯಗಳೂ ಅಣಿಯಾಗಿವೆ. ಭಕ್ತರು ಭಕ್ತಿಭಾವದ ಆಚರಣೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ನಗರದ ಅಮೃತೇಶ್ವರ ದೇವಸ್ಥಾನ, ಸ್ವಾಮಿ ವಿವೇಕಾನಂದ ನಗರದ ಈಶ್ವರ ದೇವಸ್ಥಾನ, ಬಸವೇಶ್ವರ ನಗರದ ಈಶ್ವರ ಬಸವಣ್ಣ ದೇವಸ್ಥಾನ, ಲಕ್ಷ್ಮಿ ನಗರದ ಲಕ್ಷ್ಮಿ ದೇವಸ್ಥಾನ, ಮಾತಾಮಾಣಿಕೇಶ್ವರ ನಗರದ ಹನುಮಾನ ದೇವಸ್ಥಾನ ಸೇರಿದಂತೆ ಬಹುತೇಕ ದೇಗುಲಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು ಜರುಗಲಿವೆ. ಹಬ್ಬದ ಹಿಂದಿನ ದಿನವಾದ ಶನಿವಾರ ತೋರಣ ಕಟ್ಟುವುದು, ಸ್ವಚ್ಛತೆ, ಅನ್ನಸಂತರ್ಪಣೆಗೆ ಸಿದ್ಧತಾ ಕಾರ್ಯಗಳು ನಡೆದವು.
ದೇಗುಲಗಳಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಮನೆಗಳಲ್ಲಿ ವಿಶೇಷ ಪೂಜೆ, ಉಪವಾಸ ವೃತ, ಜಾಗರಣೆ ಜರುಗಲಿದೆ. ಅಲ್ಲಲ್ಲಿ ಬಿಲ್ಪಪತ್ರೆಗಳನ್ನು ಮಾರಾಟ ಮಾಡಲು ಕೆಲವು ಹೂ ವ್ಯಾಪಾರಿಗಳು ತಂದಿರಿಸಿದ್ದರು. ಬಿಲ್ಪಪತ್ರೆ ಮಾತ್ರವಲ್ಲದೆ ವಿವಿಧ ಬಗೆಯ ಹೂಗಳ ಖರೀದಿಯಲ್ಲೂ ಭಕ್ತರು ತೊಡಗಿದ್ದಾರೆ.
ನಗರದ ನೇತಾಜಿ ಸುಭಾಷ್ ವೃತ್ತ, ಹೊಸಳ್ಳಿ ಕ್ರಾಸ್, ರೈಲ್ವೆ ನಿಲ್ದಾಣ ರಸ್ತೆ, ಗಂಜ್ ವೃತ್ತ ಸೇರಿದಂತೆ ಹಲವೆಡೆ ಹಬ್ಬಕ್ಕೆ ಬೇಕಾಗಿರುವ ಸಾಗ್ರಿಗಳ ಖರೀದಿಯಲ್ಲಿ ಜನರು ನಿರತವಾಗಿದ್ದರು. ಗ್ರಾಹಕರು ಚೌಕಾಸಿ ಮಾಡಿ ಹಣ್ಣುಗಳನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು.
ಶಿವರಾತ್ರಿ ಹಿನ್ನೆಲೆಯಲ್ಲಿ ಹಣ್ಣುಗಳ ದರ ಏರಿಕೆಯಾಗಿದೆ. ಒಂದು ಕೆ.ಜಿ. ದ್ರಾಕ್ಷಿ ಹಣ್ಣು ₹ 160ಗೆ, ಕಲ್ಲಂಗಡಿ ಹಣ್ಣು ಸಣ್ಣ ಗಾತ್ರಕ್ಕೆ ₹ 40ರಿಂದ ಆರಂಭವಾಗಿ ದೊಡ್ಡ ಗಾತ್ರದ್ದು ₹ 100ಗೆ ಮಾರಾಟವಾದವು. ನಾಲ್ಕು ಸೇಬು ಹಣ್ಣಗಳಿಗೆ ₹ 100 ಇದ್ದರೆ, ಡಜನ್ ಬಾಳೆಹಣ್ಣು ₹ 50ಗೆ, ಒಂದು ಕೆ.ಜಿ. ಸಪೋಟ ₹60ಯಂತೆ ಖರೀದಿಯಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.