ADVERTISEMENT

ವರ್ಷಾಂತ್ಯದ ಪರೀಕ್ಷೆಗೆ ಹೀಗಿರಲಿ ಸಿದ್ಧತೆ

ಅರವಿಂದ ಚೊಕ್ಕಾಡಿ
Published 29 ಮೇ 2022, 19:30 IST
Last Updated 29 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಲೆಗಳು ಪ್ರಾರಂಭವಾಗುತ್ತಿವೆ. ಕಳೆದ ಎರಡು ಶೈಕ್ಷಣಿಕ ವರ್ಷಗಳ ಕೊರೊನಾ ತಡೆಗಳ ನಂತರ ದೊರೆಯುತ್ತಿರುವ ಪೂರ್ಣ ರೂಪದ ಶೈಕ್ಷಣಿಕ ವರ್ಷವಿದು.‌ ಯಶಸ್ವಿ ಕಲಿಕೆಯನ್ನು ಸಾಧಿಸುವ ದೃಷ್ಟಿಯಿಂದ ಮಾಡಿಕೊಳ್ಳಬೇಕಾದ ಸಿದ್ಧತೆಗಳನ್ನು ಈಗಲೇ ಯೋಚಿಸಬೇಕು.

ಪರೀಕ್ಷೆಯು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಇರುತ್ತದೆ. ಆದರೆ, ಆ ಪರೀಕ್ಷೆ ಎದುರಿಸುವ ಒತ್ತಡ ಕಲಿಕಾ ವರ್ಷದ ಪ್ರಾರಂಭದಲ್ಲೇ ಇರುತ್ತದೆ. ಅದರಲ್ಲೂ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳಲ್ಲಿ ಈ ಒತ್ತಡ ತುಸು ಹೆಚ್ಚು. ಇದನ್ನು ಯಶಸ್ವಿಯಾಗಿ ಸಾಧಿಸಲು ಕೆಲವು ಮಾರ್ಗಗಳನ್ನು‌ ವರ್ಷದ ಆರಂಭದಿಂದಲೇ ಅನುಸರಿಸಬೇಕು.

l ಪರೀಕ್ಷೆಯಲ್ಲಿ ಅಂಕಗಳು ಬರುವುದು ಬರೆದದ್ದಕ್ಕೇ ಹೊರತು ತಿಳಿದಿರುವುದಕ್ಕಲ್ಲ ಎಂಬ ಅರಿವಿರಬೇಕು. ಅನೇಕ ಬಾರಿ ವಿದ್ಯಾರ್ಥಿಗಳಿಗೆ ವಿಚಾರ ತಿಳಿದಿರುತ್ತದೆ. ಅದನ್ನು ಉತ್ತರದ ರೂಪದಲ್ಲಿಯೇ ಬರೆಯಲು ವಿಫಲರಾಗುತ್ತಾರೆ.‌ ಅಂಕಗಳು ಕಡಿಮೆಯಾಗುತ್ತವೆ. ಆದ್ದರಿಂದ ಬರೆವಣಿಗೆಯ ಕೌಶಲವನ್ನು ಅತ್ಯಗತ್ಯವಾಗಿ ರೂಢಿಸಿಕೊಳ್ಳಬೇಕು. ಈಗಿನಿಂದದಲೇ ಬರೆದು ಬರೆದು ಅಭ್ಯಾಸ ಮಾಡಿ.

ADVERTISEMENT

l ಹಲವು ಬಾರಿ ವಿಷಯಗಳು ಗೊತ್ತಿದ್ದರೂ ಪಾಠ ಅಥವಾ ನೋಟ್ಸ್‌ನಲ್ಲಿ ಓದಿದ ವಾಕ್ಯಗಳೇ ನೆನಪಿರುವುದಿಲ್ಲ. ಅದರಿಂದ ಉತ್ತರ ಬರೆಯಲು ಸಾಧ್ಯವಾಗದೆ ಹೋಗುತ್ತದೆ. ಇಲ್ಲಿ ಸಮಸ್ಯೆ ಇರುವುದು ಪಠ್ಯ ವಾಕ್ಯದ ಹೊರತಾಗಿ ಸ್ವಂತ ವಾಕ್ಯವನ್ನು ರಚಿಸಿ ಬರೆಯುವ ಸಾಮರ್ಥ್ಯ ಇಲ್ಲದೆ ಇರುವುದರಿಂ, ಸ್ವಂತ ವಾಕ್ಯ ರಚನೆಯ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು. ಅದಕ್ಕೆ ಯಾವುದಾದರೊಂದು ವಿಷಯದಲ್ಲಿ ಪ್ರತಿ ದಿನ ಒಂದು ಸಣ್ಣ ಪ್ಯಾರಾಗ್ರಾಫ್ ಅನ್ನು ಸ್ವಂತ ವಾಕ್ಯದಲ್ಲಿ ಬರೆಯಬೇಕು. ಅಂತಹ ಪರಿಕಲ್ಪನೆಗಳು ‘ನನ್ನ ಮನೆ', ‘ನನ್ನ ಕನಸು’ ಈ ರೀತಿಯ ಸ್ವಂತ ಕಲ್ಪನೆಯಾಗಬೇಕು. ಪಾಠ ಪುಸ್ತಕದಲ್ಲಿರುವ ವಿಷಯವನ್ನೆ ತೆಗೆದುಕೊಂಡರೆ ಪಾಠ ಪುಸ್ತಕದ ವಾಕ್ಯಗಳೇ ಬರುತ್ತವೆ.‌ ಅದರಿಂದ ಉಪಯೋಗವಾಗುವುದಿಲ್ಲ. ಸ್ವಂತ ಕಲ್ಪನೆಗಳನ್ನು ಬರೆದಾದ ಮೇಲೆ ‘ತಿಳಿದವರಿಗೆ’ ಅದನ್ನು ತೋರಿಸಿ ಪರಿಷ್ಕರಿಸಿಕೊಂಡು ಬರೆಯುತ್ತಿರಬೇಕು. ಆಗ ನಮ್ಮಲ್ಲಿರುವ ಚಿಂತನೆಯನ್ನು ಬರಹ ರೂಪದಲ್ಲಿ ಹೇಳುವ ಸಾಮರ್ಥ್ಯ ಬರುತ್ತದೆ. ಪಠ್ಯದ ವಾಕ್ಯಗಳೇ ನೆನಪಿಗೆ ಬಾರದೆ ಇದ್ದರೂ ಪರೀಕ್ಷೆಯಲ್ಲಿ ಬರೆಯಲು ಸಾಧ್ಯವಾಗುತ್ತದೆ.

l ಪರೀಕ್ಷೆಯಲ್ಲಿ ಆಗುವ ಇನ್ನೊಂದು ಸಮಸ್ಯೆ ಎಂದರೆ ಯಾವ ಪ್ರಶ್ನೆಗೆ ಎಷ್ಟು ಬರೆಯಬೇಕು ಎಂಬ ಅಂದಾಜಿಸುವಿಕೆ ಇಲ್ಲದೆ ಇರುವುದು.‌ ಎಸ್ಸೆಸ್ಸೆಲ್ಸಿ ತರಗತಿಯ ಮಟ್ಟವನ್ನು ಇರಿಸಿಕೊಂಡು ಹೇಳುವುದಾದರೆ ನಾಲ್ಕು ಅಂಕಗಳ ಪ್ರಶ್ನೆಗೆ ಎಂಟು ಅಂಶಗಳನ್ನು ಬರೆದರೆ ಸಾಕಾಗುತ್ತದೆ. ಸಮರ್ಪಕವಾದ ಎಂಟು ಅಂಶಗಳನ್ನು ಸ್ಪಷ್ಟವಾಗಿ ಬರೆಯುವುದನ್ನು ರೂಢಿಸಿಕೊಳ್ಳಬೇಕು.‌ ಹಾಗೆಯೇ ವಿವಿಧ ಹಂತಗಳಲ್ಲಿ ಎಷ್ಟು ಅಂಕಗಳ ಪ್ರಶ್ನೆಗೆ ಎಷ್ಟು ಅಂಶಗಳನ್ನು ಬರೆಯಬೇಕು ಎಂಬುದನ್ನು ಅಭ್ಯಾಸ ಮಾಡಬೇಕು. ಇದನ್ನು ಬರೆದೂ ಬರೆದೂ ಅಭ್ಯಾಸ ಆಗಬೇಕೆ ಹೊರತು ಕೇವಲ ತಿಳಿದುಕೊಂಡರೆ ಸಾಲದು. ಬರೆದು ಅಭ್ಯಾಸವಾಗಿ ರೂಢಿಯಾಗದೆ ಇದ್ದರೆ ಪರೀಕ್ಷೆಗಾದಾಗ ಬರೆವಣಿಗೆಯನ್ನು ಶಿಸ್ತುಬದ್ಧವಾಗಿ ತರಲು ಆಗುವುದಿಲ್ಲ.

l ಬರೆವಣಿಗೆಯನ್ನು ಅಭ್ಯಾಸ ಮಾಡುವಾಗ ನಿರ್ದಿಷ್ಠ ಉತ್ತರಕ್ಕೆ ಸೂಕ್ತವಲ್ಲದ ವಿಷಯಗಳು ಬಾರದ ಹಾಗೆ ಬರೆದು ಅಭ್ಯಾಸ ಮಾಡಬೇಕು. ಉದಾಹರಣೆಗೆ, ‘ಸತಿ ಪದ್ಧತಿ ನಿಷೇಧಿಸಿದ ಗವರ್ನರ್ ಜನರಲ್ ಯಾರು?’ ಎಂದು ಕೇಳಿದರೆ, ‘ಸತಿ ಪದ್ಧತಿ ನಿಷೇಧಿಸಿದ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್‘ ಎನ್ನುವುದಷ್ಟೇ ಅಲ್ಲಿ ಉತ್ತರವಾಗಿರುತ್ತದೆ. ‘ವಿಲಿಯಂ ಬೆಂಟಿಂಕನು ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದನು. ರಾಜಾರಾಮ್ ಮೋಹನ್ ರಾಯರು ಸತಿ ಪದ್ಧತಿ ನಿಷೇಧಕ್ಕಾಗಿ ಹೋರಾಡಿದರು. ಅವರಹೋರಾಟದ ಪರಿಣಾಮವಾಗಿ ವಿಲಿಯಂ ಬೆಂಟಿಂಕನು ಸತಿ ಪದ್ಧತಿ ನಿಷೇಧಿಸಿದನು‘ ಎಂದು ಬರೆದರೆ, ಸಮಯದ ಅಪವ್ಯಯ ಹಾಗೂ ಮೌಲ್ಯಮಾಪಕರಿಗೆ ನಿಖರ ಉತ್ತರ ಕಾಣವುದಿಲ್ಲ. ಆಗ ಅವರು ಪ್ರತಿ ವಾಕ್ಯ ಓದಿ, ಉತ್ತರ ಹುಡುಕಬೇಕು. ಪತ್ರಿಕೆಯ ತುಂಬಾ ಈ ರೀತಿ ಹುಡುಕುವ ಕೆಲಸವೇ ಆದಾಗ ಪೂರ್ಣ ಅಂಕ ಬರುವಲ್ಲಿಗೆ ಅರ್ಧ ಅಂಕ ಕಡಿಮೆ ಬೀಳಬಹುದಾದ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಅನಗತ್ಯದ ವಾಕ್ಯಗಳನ್ನು ಬರೆಯಬೇಡಿ.

l ಸಮರ್ಪಕ ಬರೆವಣಿಗೆಯು ಸಮರ್ಪಕ ಓದನ್ನು ಆಧರಿಸಿರುತ್ತದೆ. ನಮ್ಮಲ್ಲಿ ಬಹುತೇಕರು ಓದುವಾಗ ಲೇಖನ ಚಿಹ್ನೆಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಓದುತ್ತಾರೆ. ಅದರಿಂದಾಗಿ ಓದಿದ್ದು ನೆನಪಿನಲ್ಲಿ ಉಳಿಯದಾಗುವುದು, ಪರೀಕ್ಷೆಯಲ್ಲಿ ವಾಕ್ಯ ಮರೆತು ಹೋಗುವುದು, ತಪ್ಪಾಗಿ ಬರೆಯುವುದು ಎಲ್ಲ ನಡೆಯುತ್ತದೆ.

ಲೇಖನ ಚಿಹ್ನೆಗಳು ಹೇಗೆ ಓದಿಕೊಳ್ಳಬೇಕು ಎಂದು ಸೂಚಿಸಲು ಇರುವುದು. ಉದಾಹರಣೆಗೆ ಅಲ್ಪ ವಿರಾಮ ಇದ್ದರೆ ಅಲ್ಲಿ ‘ಒಂದು ಚಿಟಿಕೆ ಹೊಡೆಯುವಷ್ಟು ಕಾಲ ನಿಲ್ಲಿಸಿ ಮುಂದಕ್ಕೆ ಓದಿಕೊಳ್ಳಬೇಕು' ಎಂದು ಅರ್ಥ. ಹಾಗೆ ನಿಲ್ಲಿಸಿ ಓದಿಕೊಂಡಾಗ ಆ ವಿಚಾರವು ಸರಿಯಾಗಿ ಅರ್ಥ ಆಗುತ್ತದೆ.‌ ಆಶ್ಚರ್ಯ ಚಿಹ್ನೆ ಇದ್ದರೆ ಅದನ್ನು ಆಶ್ಚರ್ಯದ ಭಾವದಲ್ಲಿ ಓದಿಕೊಳ್ಳಬೇಕು ಎಂದು ಅರ್ಥ. ಹಾಗೆ ಓದಿಕೊಂಡಾಗ ಆ ವಿಚಾರವು ಸಮರ್ಪಕವಾಗಿ ಅರ್ಥವಾಗುತ್ತದೆ. ನೆನಪಿನಲ್ಲಿ ಉಳಿಯುತ್ತದೆ. ಸಮರ್ಪಕವಾಗಿ ಬರೆಯಲು ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.