ಹೂವಿನಹಡಗಲಿ: ‘ಶೈಕ್ಷಣಿಕ ಸಾಧನೆಗೆ ಬಡತನ ಅಡ್ಡಿಯಾಗದು’ ಎಂಬುದನ್ನು ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿ ದಾದಾ ಕಲಂದರ್ ನಿರೂಪಿಸಿದ್ದಾರೆ.
ಇಲ್ಲಿನ ಪುರಸಭೆಯಲ್ಲಿ ‘ಡಿ’ ಗ್ರೂಪ್ ಸಿಬ್ಬಂದಿಯಾಗಿರುವ ಮಹಾಬುನ್ನಿ ಅವರ ಪುತ್ರ ಪಿಂಜಾರ ದಾದ ಕಲಂದರ್ ದ್ವಿತೀಯ ಪಿಯುಸಿಯಲ್ಲಿ (ಶಿಕ್ಷಣ ವಿಭಾಗ) 571 (ಶೇ 95.16) ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ.
ಕೊಟ್ಟೂರಿನ ಇಂದೂ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ದಾದಾ ಕಲಂದರ್ , ಕನ್ನಡದಲ್ಲಿ 90, ಸಂಸ್ಕೃತ 94, ಐಚ್ಛಿಕ ಕನ್ನಡ 98, ಇತಿಹಾಸ 97, ಸಮಾಜಶಾಸ್ತ್ರ 92, ಶಿಕ್ಷಣ 100 ಅಂಕ ಗಳಿಸಿದ್ದಾರೆ. ‘ಏಕಾಗ್ರತೆಯಿಂದ ಪಾಠ ಕೇಳಿ, ಪರಿಶ್ರಮದಿಂದ ಓದಿದ್ದು ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು’ ಎನ್ನುತ್ತಾರೆ ದಾದಾ ಕಲಂದರ್.
ದಾದಾ ಕಲಂದರ್ ಅವರ ತಂದೆ ಹೂವಿನಹಡಗಲಿ ಪುರಸಭೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಹತ್ತು ವರ್ಷಗಳ ಹಿಂದೆ ಅವರು ಅಕಾಲಿಕ ನಿಧನರಾಗಿದ್ದರಿಂದ ಅವರ ತಾಯಿ ಮಹಾಬುನ್ನಿ ಅನುಕಂಪ ಆಧಾರದಲ್ಲಿ ದಿನಗೂಲಿ ನೌಕರಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ’ತಂದೆಯ ಅಕಾಲಿಕ ಸಾವು ಹಾಗೂ ತಾಯಿ ಎದುರಿಸಿದ ಕಷ್ಟದ ದಿನಗಳು ಈ ಸಾಧನೆಗೆ ಪ್ರೇರಣೆಯಾದವು’ ಎಂದು ದಾದಾ ಕಲಂದರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.