ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ನನ್ನ ಆಯ್ಕೆ ಎಂದು ಹೇಳುವ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
‘ಭಾರತ್ ಜೋಡೊ ಯಾತ್ರೆ’ಯನ್ನು ಎರಡು ಬಾರಿ ಕೈಗೊಂಡಿದ್ದು ಈ ಚುನಾವಣೆಯಲ್ಲಿ ಸಾಕಷ್ಟು ನೆರವಾಯಿತು. ಇದರೊಂದಿಗೆ ಹಲವು ಪಕ್ಷಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದು, ಮೈತ್ರಿಯ ನಿರ್ಧಾರ ಹಾಗೂ ಪ್ರಚಾರದಲ್ಲಿ ಪ್ರಧಾನಿ ಮೋದಿ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿ, ಎದುರಿಸಿದ ರೀತಿಯಿಂದಾಗಿ ಅವರೇ ಈ ಹುದ್ದೆಗೆ ಸೂಕ್ತ’ ಎಂದಿದ್ದಾರೆ.
‘ರಾಹುಲ್ ಅವರು ಯುವ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ದೇಶದ ಉದ್ದಗಲ ಸಂಚರಿಸಿದ್ದಾರೆ. ಜನರ ಕಷ್ಟವನ್ನು ಅರಿತಿದ್ದಾರೆ. ಹೀಗಾಗಿ ಆ ಹುದ್ದೆಗೆ ಅವರೇ ಸೂಕ್ತ’ ಎಂದಿದ್ದಾರೆ.
‘ಪ್ರಸಕ್ತ ಚುನಾವಣೆ ಮೂಲಕವೇ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶಿಸಬೇಕು ಎಂಬ ಚರ್ಚೆ ಪಕ್ಷದ ವೇದಿಕೆಯಲ್ಲಿ ನಡೆದಿತ್ತು. ಸೋನಿಯಾ ಗಾಂಧಿ ಅವರು ಐದು ಬಾರಿ ಸತತ ಗೆಲುವು ದಾಖಲಿಸಿದ್ದ ರಾಯ್ಬರೇಲಿಯಿಂದ ಅವರು ಕಣಕ್ಕಿಳಿಯಬೇಕು ಎಂದು ನಿರ್ಧಾರವೂ ಆಗಿತ್ತು. ಆದರೆ ಪ್ರಿಯಾಂಕಾ ಅವರು ಅದನ್ನು ನಿರಾಕರಿಸಿದರು. ಅಣ್ಣ ರಾಹುಲ್ ಸ್ಪರ್ಧಿಸಲಿ. ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿ ಕಣದಿಂದ ಹಿಂದೆ ಸರಿದರು’ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಖರ್ಗೆ ಹೇಳಿದ್ದಾರೆ.
ಚುನಾವಣೆ ಆರಂಭದಲ್ಲಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಕುರಿತ ಪ್ರಶ್ನೆಗೆ, ಎಲ್ಲರೂ ಒಟ್ಟಿಗೆ ಚುನಾವಣೆ ಎದುರಿಸುತ್ತೇವೆ. ಬಹುಮತ ಪಡೆದ ನಂತರ ಪ್ರಧಾನಿ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂಬ ಹೇಳಿಕೆಯನ್ನು ಒಕ್ಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ಮುಖಂಡರೂ ಪುನರುಚ್ಚರಿಸಿದ್ದರು.
ಒಕ್ಕೂಟದ ಭಾಗವಾಗಿರುವ ಆಮ್ ಆದ್ಮಿ ಪಾರ್ಟಿ ಕೂಡಾ ಚುನಾವಣೆ ನಂತರವೇ ಪ್ರಧಾನಿ ಅಭ್ಯರ್ಥಿ ಆಯ್ಕೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಳ್ ಹೇಳಿರುವುದೂ ವರದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.