ADVERTISEMENT

ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲಾಗುವುದು: ಅಮಿತ್‌ ಶಾ

ಪಿಟಿಐ
Published 15 ಮೇ 2024, 9:59 IST
Last Updated 15 ಮೇ 2024, 9:59 IST
<div class="paragraphs"><p>ಅಮಿತ್‌ ಶಾ (ಸಂಗ್ರಹ ಚಿತ್ರ)</p></div>

ಅಮಿತ್‌ ಶಾ (ಸಂಗ್ರಹ ಚಿತ್ರ)

   

ಶ್ರೀರಾಮಪುರ (ಪಶ್ಚಿಮ ಬಂಗಾಳ): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಪಿಒಕೆ ಭಾರತದ ಭಾಗವಾಗಿದ್ದು, ಅದನ್ನು ನಾವು ಮರಳಿ ಪಡೆಯುತ್ತೇವೆ’ ಎಂದು ಬುಧವಾರ ಹೇಳಿದರು.

ಶ್ರೀರಾಮಪುರದಲ್ಲಿ ನಡೆದ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘370ನೇ ವಿಧಿ ಅಡಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಆದರೆ, ಈಗ ಪಿಒಕೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿಂದೆ ಆಜಾದಿಯ ಘೋಷಣೆಗಳು ಇಲ್ಲಿ ಕೇಳಿಬರುತ್ತಿದ್ದವು. ಈಗ ಅವೇ ಘೋಷಣೆಗಳು ಅಲ್ಲಿ ಕೇಳಿಬರುತ್ತಿವೆ. ಹಿಂದೆ ಇಲ್ಲಿ ಕಲ್ಲು ಎಸೆಯುವುದು ನಡೆಯುತ್ತಿತ್ತು, ಈಗ ಅಲ್ಲಿ ನಡೆಯುತ್ತಿದೆ’ ಎಂದು ವಿಶ್ಲೇಷಿಸಿದರು.

ADVERTISEMENT

ಪಿಒಕೆ ವಾಪಸ್ ಪಡೆಯುವ ವಿಚಾರದಲ್ಲಿ ಕಾಂಗ್ರೆಸ್ ಬೆಂಬಲ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ‘ಮಣಿಶಂಕರ್ ಅಯ್ಯರ್‌ ಅವರಂಥ ಕಾಂಗ್ರೆಸ್ ನಾಯಕರು, ಪಾಕ್ ಬಳಿ ಅಣ್ವಸ್ತ್ರ ಇರುವುದರಿಂದ ಹಾಗೆ ಮಾಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಪಿಒಕೆ ಭಾರತದ ಭಾಗ, ಅದನ್ನು ನಾವು ಪಡೆಯುತ್ತೇವೆ’ ಎಂದು ಹೇಳಿದರು.

‘ಶ್ರೀಕೃಷ್ಣನಂತೆ ಬಿಜೆಪಿಗೆ ಮೋದಿ ಮಾರ್ಗದರ್ಶನ’ (ಜಲೌನ್‌ ವರದಿ): ಬಿಜೆಪಿ ವಿರೋಧಿಗಳನ್ನು ‘ದುರ್ಯೋಧನ’, ‘ದುಶ್ಯಾಸನ’ ಎಂದು ಬಣ್ಣಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾಭಾರತದ ಶ್ರೀ ಕೃಷ್ಣನಂತೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಯ ಮಹಾ ಯುದ್ಧದಲ್ಲಿ ಬಿಜೆಪಿಯನ್ನು ಜಯದತ್ತ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಜಲೌನ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘ಈ ಚುನಾವಣೆಯು ಧ್ರುವೀಕರಣದ ಬಗ್ಗೆ ಅಲ್ಲ. ಇದು ರಾಮಭಕ್ತರು ಮತ್ತು ರಾಮದ್ರೋಹಿಗಳ ಕುರಿತದ್ದು’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.