ಹಾಸನ: ‘ಹಾಸನ ಕ್ಷೇತ್ರದ ಟಿಕೆಟ್ಗಾಗಿ ಬೇಡಿಕೆ ಇಟ್ಟಿರುವ ಭವಾನಿ ರೇವಣ್ಣ ಅವರನ್ನು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಕಣಕ್ಕೆ ಇಳಿಸಲು ವರಿಷ್ಠ ಎಚ್.ಡಿ.ದೇವೇಗೌಡ ಅವರು ನಿರ್ಧರಿಸಿದ್ದಾರೆ’ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರತಿಷ್ಠೆಯಾಗಿರುವ ಹಾಸನ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ವಿರಾಮ ನೀಡಲು, ಸ್ವರೂಪ್ ಅವರನ್ನು ಹಾಸನದಿಂದ ಹಾಗೂ ಭವಾನಿ ಅವರನ್ನು ಚಾಮರಾಜ ಕ್ಷೇತ್ರದಿಂದ ಕಣಕ್ಕೆ ಇಳಿಸುವ ನಿರ್ಧಾರ ಮಾಡಲಾಗಿದೆ. ಈ ಮೂಲಕ ಅಸಮಾಧಾನ ನಿವಾರಣೆಗೆ ಮುಂದಾಗಿದ್ದಾರೆ. ಆದರೆ, ಭವಾನಿ ಇದನ್ನು ಒಪ್ಪಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.
‘ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿದ್ದು, ಜೆಡಿಎಸ್ಗೆ ವರದಾನ ಆಗಲಿದೆ’ ಎಂಬುದು ಜೆಡಿಎಸ್ ಮುಖಂಡರ ಲೆಕ್ಕಾಚಾರ. ಈ ಕುರಿತು ಭವಾನಿ ರೇವಣ್ಣ ಪ್ರತಿಕ್ರಿಯಿಸಲು ನಿರಾಕರಿಸಿದರು.
ರೇವಣ್ಣ ಬೆಂಬಲ ಇಲ್ಲದಿದ್ದರೆ ಜೆಡಿಎಸ್ ಅಭ್ಯರ್ಥಿ ಠೇವಣಿ ನಷ್ಟ: ಪ್ರೀತಂ ಗೌಡ
ಹಾಸನ: ‘ಜಿಲ್ಲೆಯ ಜೆಡಿಎಸ್ನಲ್ಲಿ ರೇವಣ್ಣ ಒಂದು ಶಕ್ತಿ. ಅವರಿಂದಲೇ ಪಕ್ಷದ ಅಭ್ಯರ್ಥಿ ಗೆಲ್ಲುತ್ತಿದ್ದರು. ಅವರ ಬೆಂಬಲವಿಲ್ಲದೆ ಸ್ಪರ್ಧಿಸಿದರೆ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ’ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಪ್ರತಿಪಾದಿಸಿದರು.
‘ರೇವಣ್ಣ ಅವರಿಗೆ ಜಿಲ್ಲೆಯಲ್ಲಿ ಅವರದ್ದೇ ಆದ ಶಕ್ತಿ ಇದೆ. ಇಡೀ ರಾಜ್ಯದಲ್ಲಿ ಪಕ್ಷ ಹಾಸನ ಲೋಕಸಭಾ ಕ್ಷೇತ್ರದಲ್ಲಷ್ಟೇ ಗೆಲ್ಲಲು ಅವರೇ ಕಾರಣ. ಅವರು ಹಿರಿಯ ನಾಯಕರು. ಗೌರವ ಕೊಡುತ್ತೇನೆ. ಸವಾಲೇ ಬೇರೆ, ಅವರ ಶಕ್ತಿಯೇ ಬೇರೆ. ಅದನ್ನು ಯಾರೂ ಅಲ್ಲಗಳೆಯಬಾರದು’ ಎಂದರು.
‘ರೇವಣ್ಣ ಕುಟುಂಬದವರು ಸ್ಪರ್ಧಿಸಿದರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ಸವಾಲನ್ನು 18 ತಿಂಗಳ ಹಿಂದೆ ಹಾಕಿದ್ದೆ. ಆಗ ಉತ್ತರ ಕೊಡಬೇಕಾದವರು ಕೊಟ್ಟಿದ್ದರೆ ಮಾನ್ಯತೆ ಇರುತ್ತಿತ್ತು. ಆ ಮಾತಿಗೆ ಈಗಲೂ ಬದ್ಧ. ಮುಂದಿನ ಚುನಾವಣೆಗೂ ಅವಕಾಶ ಕೊಡುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.