ಶಿವಮೊಗ್ಗ: ‘ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ಮಾಡುವ ಕಾಲ ಮುಗಿದಿದೆ. ಇನ್ನು ಯಾರ ಜೊತೆಗೂ ಮಾತಾಡುವುದಿಲ್ಲ’ ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ‘ನನ್ನನ್ನು ಪಕ್ಷದಿಂದ ಇನ್ನೂ ಯಾಕೆ ಉಚ್ಚಾಟಿಸಿಲ್ಲ’ ಎಂದು ಪ್ರಶ್ನಿಸಿದರು.
‘ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರಷ್ಟೇ ಇನ್ನಷ್ಟು ಕಟುವಾಗಿ ಮಾತಾಡಲು ಸಾಧ್ಯ’ ಎಂದ ಅವರು, ‘ಪ್ರಚಾರದ ಸಂದರ್ಭ ನಾನು ನರೇಂದ್ರ ಮೋದಿ ಪೋಟೋ ಬಳಸಬಾರದು ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ಯಡಿಯೂರಪ್ಪ, ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಫೋಟೊ ಇಟ್ಟುಕೊಂಡು ಹೋಗಿ ಚುನಾವಣೆ ಗೆದ್ದು ತೋರಿಸಲಿ ನೋಡೋಣ’ ಎಂದು ಸವಾಲೆಸೆದದರು.
‘ಮೋದಿ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ. ತಾಕತ್ತಿದ್ದರೆ ಯಡಿಯೂರಪ್ಪ ಕುಟುಂಬದವರು ನರೇಂದ್ರ ಮೋದಿ ಫೋಟೊ ಬಿಟ್ಟು ಪ್ರಚಾರ ಮಾಡಿ ಗೆಲ್ಲಲಿ’ ಎಂದರು.
‘ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಬೆಂಬಲಿಗರಲ್ಲಿ ಗೊಂದಲ ಮೂಡಿಸುತ್ತಿದೆ. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಒತ್ತಿ ಹೇಳಿದರು.
‘ಲೋಕಸಭೆ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ನಮಗೆ ಈಗಲೂ ಅನುಮಾನವಿದೆ. ಮತದಾನದ ಮುನ್ನಾ ದಿನವಾದ ಮೇ 6ರ ತನಕ ಈಶ್ವರಪ್ಪ ವಿಚಾರದಲ್ಲಿ ನಾವು (ಕಾಂಗ್ರೆಸ್) ಏನೂ ಮಾತನಾಡುವುದಿಲ್ಲ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈಶ್ವರಪ್ಪ ಅವರ ಸ್ಪರ್ಧೆಯಿಂದ ಕಾಂಗ್ರೆಸ್ಗೆ ಯಾವುದೇ ಲಾಭವಿಲ್ಲ ನಷ್ಟವೂ ಇಲ್ಲ. ಎದುರಾಳಿ ಮತಗಳು ವಿಭಜನೆ ಆದರೆ ನಮಗೆ ಲಾಭವೇ. ಹಾಗೆಂದು ನಾವು ಅವರ ಸ್ಪರ್ಧೆಯನ್ನು ನಂಬಿ ಕುಳಿತಿಲ್ಲ. ಬದಲಿಗೆ ಗ್ಯಾರಂಟಿ ಯೋಜನೆಗಳನ್ನು ನಂಬಿ ಸ್ಪರ್ಧಿಸುತ್ತಿದ್ದೇವೆ’ ಎಂದು ತಿಳಿಸಿದರು.
‘ಬಿ.ವೈ. ರಾಘವೇಂದ್ರ ಹಾಗೂ ಈಶ್ವರಪ್ಪ ಇಬ್ಬರೂ ಹಿಂದುತ್ವದ ಬಗ್ಗೆ ಹೇಳುತ್ತಿದ್ದಾರೆ. ಈಶ್ವರಪ್ಪ ಚುನಾವಣೆಗೆ ನಾಮಪತ್ರ ಸಲ್ಲಿಸಿ ಕೊನೆಯ ಗಳಿಗೆಯಲ್ಲಿ ತಟಸ್ಥವಾಗಿ ಉಳಿದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಎಂಬ ಅನುಮಾನವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.