ADVERTISEMENT

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ತಿರಸ್ಕರಿಸಿ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 15:25 IST
Last Updated 10 ಏಪ್ರಿಲ್ 2024, 15:25 IST
<div class="paragraphs"><p>ಹಾವೇರಿ ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಲೋಕಸಭೆ ಚುನಾವಣೆ ಅಂಗವಾಗಿ ಬುಧವಾರ ಯುವ ಸಮಾವೇಶ ನಡೆಯಿತು</p></div>

ಹಾವೇರಿ ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಲೋಕಸಭೆ ಚುನಾವಣೆ ಅಂಗವಾಗಿ ಬುಧವಾರ ಯುವ ಸಮಾವೇಶ ನಡೆಯಿತು

   

ಹಾವೇರಿ: ಕಾಂಗ್ರೆಸ್‌ನವರು ಹೆಣ್ಣು ಮಕ್ಕಳಿಗೆ ₹1 ಲಕ್ಷ ಹಾಗೂ ಯುವಕರಿಗೆ ₹1 ಲಕ್ಷ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಅವರು ಗ್ಯಾರಂಟಿ ಕಾರ್ಡ್ ಕೊಡಲು ಬಂದರೆ ತಿರಸ್ಕರಿಸಿ ಎಂದು ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. 

ಬೃಹತ್ ರೋಡ್ ಶೋ ಹಾಗೂ ಯುವ ಸಮಾವೇಶದಲ್ಲಿ ಅವರು ಮಾತನಾಡಿ, 543 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿರುವುದೇ 200 ಕ್ಷೇತ್ರಗಳಲ್ಲಿ. ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನ ಬೇಕು. 200 ಸ್ಥಾನದಲ್ಲಿ ಸ್ಪರ್ಧಿಸಿರುವ ಇವರು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ADVERTISEMENT

ರಾಜ್ಯ ಈಗ ಕೊಡುತ್ತಿರುವ ಗ್ಯಾರಂಟಿಗಳೇ ಗಳಗಂಟಿಯಾಗಿವೆ. ಗೃಹಲಕ್ಷ್ಮಿ ಯೋಜನೆ ಎಷ್ಟು ಜನರಿಗೆ ತಲುಪಿದೆ. ಬೆಂಗಳೂರು ಬಿಟ್ಟು ಊರುಗಳಿಗೆ ಬಂದಿಲ್ಲ. ಕೇವಲ ಪ್ರಗತಿಯಲ್ಲಿದೆ ಅಂತ ಹೇಳುತ್ತಾರೆ. ಬಹುತೇಕರಿಗೆ ಗ್ಯಾರಂಟಿ ತಲುಪುತ್ತಿಲ್ಲ ಎಂದು ಟೀಕಿಸಿದರು.

ಹಾವೇರಿ ಗದಗ ಜಿಲ್ಲೆ ಮಾಡಿದ್ದು ಜೆ.ಎಚ್. ಪಟೇಲರು, ತುಂಗಾ ಮೇಲ್ದಂಡೆ ಯೋಜನೆ ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನು‌ ನೀರಾವರಿ ಸಚಿವನಾಗಿದ್ದಾಗ ಜಾರಿ ಮಾಡಿದ್ದೆವು. ಗದಗ ಜಿಲ್ಲೆಯಲ್ಲಿ ಸಿಂಗಟಾಲೂರು ಯೋಜನೆ ಜಾರಿ ಮಾಡಿದ್ದು ಬಿಜೆಪಿ ಸರ್ಕಾರ. ಯಡಿಯೂರಪ್ಪ ಸಿಎಂ ಆಗಿದ್ದಾಗ ಹಾವೇರಿ ಜಿಲ್ಲೆಯಲ್ಲಿ ಎಂಟು ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೇವೆ. ಅವು ಶೇ 90ರಷ್ಟು ಕಾರ್ಯ ಮುಕ್ತಾಯವಾಗಿದೆ. ಅದನ್ನು ಪೂರ್ಣಗೊಳಿಸಲು ಈಗಿನ ಸರ್ಕಾರಕ್ಕೆ ಆಗಿಲ್ಲ ಎಂದು ಟೀಕಿಸಿದರು.

ಹಾವೇರಿಗೆ ಮೆಡಿಕಲ್ ಕಾಲೆಜ್, ಮೆಗಾ ಡೇರಿ ನಾವು ಅಧಿಕಾರದಲ್ಲಿದ್ದಾಗ ತಂದಿದ್ದೇವೆ. ಹಾವೇರಿ ವಿಶ್ವವಿದ್ಯಾಲಯ ನಾವು ತಂದಿದ್ದೇವೆ. ಅದಕ್ಕೆ ಹಣ ಕೊಡಲು ಇವರಿಗೆ ಆಗುತ್ತಿಲ್ಲ. ಈ ಜಿಲ್ಲೆಗೆ ಒಬ್ಬ ಮಂತ್ರಿ ಮಾಡಲು ಇವರಿಗೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೆಶಕ್ಕೆ ಮೋದಿ ಮತ್ತೆ ಬರಬೇಕಿದೆ. ಸೋನಿಯಾ ಗಾಂಧಿ ತಮ್ಮ ಸುತ್ತಲೂ ಕತ್ತಲಿದೆ ಎಂದು ಹೇಳಿದ್ದಾರೆ. ನಿಮ್ಮ ಸುತ್ತಲೂ ಇನ್ನೂ ಹತ್ತು ವರ್ಷ ಕತ್ತಲು ಇರುತ್ತದೆ ಎಂದು ಜರಿದರು.

ಮೋದಿಯವರು ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಲಸಿಕೆ ಕೊಟ್ಟಿದ್ದಾರೆ. ಮನೆ ಮನೆಗೆ ನೀರು ಕೊಡುತ್ತಿದ್ದಾರೆ. ಮನೆ– ಮನೆಗೆ ಅನ್ನ ಕೊಡುತ್ತಿದ್ದಾರೆ. ರೈತನಿಗೆ ಕಿಸಾನ್ ಸಮ್ಮಾನ್‌ ನೀಡಿದ್ದಾರೆ. ಅವರಿಗೆ ಮತ ಹಾಕುವ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.