ADVERTISEMENT

ಬಿಜೆಪಿಯ ಜಯಭೇರಿಗೆ ‘ಮೈತ್ರಿ’ಯೇ ಸವಾಲು

ಉತ್ತರ ಪ್ರದೇಶದಲ್ಲಿ ಇನ್ನೂ 54 ಕ್ಷೇತ್ರಗಳಲ್ಲಿ ಮತದಾನ ಬಾಕಿ: ಪ್ರಧಾನಿ ಸೇರಿ ಹಲವು ಗಣ್ಯರು ಕಣದಲ್ಲಿ

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:46 IST
Last Updated 9 ಮೇ 2019, 18:46 IST
ಮಾಯಾವತಿ
ಮಾಯಾವತಿ   

ನವದೆಹಲಿ: ಕೇಂದ್ರದಲ್ಲಿ ಅಧಿಕಾರ ಹಿಡಿಯಲು ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಗೆಲ್ಲುವುದು ನಿರ್ಣಾಯಕ ಎಂಬುದು ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿರುವ ನಂಬಿಕೆ. ಉತ್ತರ ಪ್ರದೇಶದಲ್ಲಿ ಇರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80. ಆ ಕಾರಣಕ್ಕಾಗಿಯೇ ಈ ರಾಜ್ಯಕ್ಕೆ ಮಹತ್ವ ಬಂದಿದೆ.

ಭಾರತದ ಪ್ರಧಾನಿಯಾದವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದವರು ಅಥವಾ ಆ ರಾಜ್ಯದಿಂದ ಲೋಕಸಭೆಗೆ ಪ್ರವೇಶಿಸಿದವರು ಎಂಬುದೂ ಇಲ್ಲಿ ಗಮನಾರ್ಹ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಇಲ್ಲಿನ 73 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಕೇಂದ್ರದಲ್ಲಿ ಅಧಿಕಾರವನ್ನೂ ಹಿಡಿಯಿತು.

ಬಿಜೆಪಿಯ ಈ ಅಭೂತಪೂರ್ವ ಗೆಲುವು 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಗೂ ವಿಸ್ತರಣೆಗೊಂಡಿತು. 403 ಸದಸ್ಯ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು 325 ಕ್ಷೇತ್ರಗಳನ್ನು ಗೆದ್ದಿತು. ಈ ಮೈತ್ರಿಕೂಟದಲ್ಲಿ ಅಪ್ನಾ ದಳ ಮತ್ತು ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಇದ್ದವು. ಉತ್ತರ ಪ್ರದೇಶವನ್ನು ಹಿಂದೆ ಆಳಿದ್ದ ಕಾಂಗ್ರೆಸ್‌, ಬಿಎಸ್‌ಪಿ ಮತ್ತು ಎಸ್‌ಪಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೆರಡಲ್ಲಿಯೂ ದೂಳೀಪಟವಾದವು.

ADVERTISEMENT

ಆದರೆ, ಗೋರಖಪುರ ಸಂಸದರಾಗಿದ್ದ ಯೋಗಿ ಆದಿತ್ಯನಾಥ ಮತ್ತು ಫೂಲ್ಪುರ ಸಂಸದರಾಗಿದ್ದ ಕೇಶವ ಪ್ರಸಾದ ‌ಮೌರ್ಯ ಅವರು ಕ್ರಮವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ನೇಮಕವಾದ ಬಳಿಕ ಸಂಸತ್ ಸ್ಥಾನಗಳಿಗೆ ರಾಜೀನಾಮೆ ಕೊಟ್ಟರು. ಈ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಇಲ್ಲಿಂದ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಖೈರಾನಾ ಕ್ಷೇತ್ರದ ಉಪಚುನಾವಣೆಯಲ್ಲಿಯೂ ಬಿಜೆಪಿ ಸೋತಿತು. ಎಸ್‌ಪಿ–ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ನಡುವಣ ಮೈತ್ರಿಯು ಈ ಕ್ಷೇತ್ರಗಳಲ್ಲಿ ಗೆಲುವು ಪಡೆಯಿತು. ಬಿಜೆಪಿ ವಿರೋಧಿ ಪಕ್ಷಗಳು ಒಂದಾದರೆ ಬಿಜೆಪಿಯನ್ನು ಮಣಿಸುವುದು ಕಷ್ಟವಲ್ಲ ಎಂಬ ಸಂದೇಶವನ್ನು ಈ ಫಲಿತಾಂಶವು ಸಾರಿತು.

ಹಾಗಾಗಿಯೇ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ–ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿಮಾಡಿಕೊಂಡಿವೆ. ಬಿಎಸ್‌ಪಿ 38, ಎಸ್‌ಪಿ 37 ಮತ್ತು ಅಜಿತ್‌ ಸಿಂಗ್‌ ಅವರ ಆರ್‌ಎಲ್‌ಡಿ ಮೂರು ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಠಿ ಮತ್ತು ಯುಪಿಎ ಅಧ್ಯಕ್ಷೆ ಪ್ರತಿನಿಧಿಸುತ್ತಿರುವ ರಾಯಬರೇಲಿಯಲ್ಲಿ ಮೈತ್ರಿಕೂಟವು ಅಭ್ಯರ್ಥಿಗಳನ್ನು ಹಾಕಿಲ್ಲ.

ಈ ಮೈತ್ರಿಕೂಟಕ್ಕೆ ಸೇರುವ ಕಾಂಗ್ರೆಸ್‌ನ ಪ್ರಯತ್ನಕ್ಕೆ ಯಶಸ್ಸು ದೊರೆಯಲಿಲ್ಲ. ಕೆಲವು ಸಣ್ಣ ಪಕ್ಷಗಳನ್ನು ಜತೆಗೆ ಸೇರಿಸಿಕೊಂಡು ಕಾಂಗ್ರೆಸ್‌ ಪಕ್ಷವು ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ, ಉತ್ತರ ಪ್ರದೇಶದ ಒಂದು ಭಾಗದ ಉಸ್ತುವಾರಿ ಕೊಡುವ ಅಚ್ಚರಿಯ ನಡೆಯನ್ನೂ ಕಾಂಗ್ರೆಸ್‌ ಕೈಗೊಂಡಿತು.

ಕಣದಲ್ಲಿ ಘಟಾನುಘಟಿಗಳು

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ ಪುನರಾಯ್ಕೆ ಬಯಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸತತ ಎರಡನೇ ಅವಧಿಗೆ ಲಖನೌ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಕೇಂದ್ರ ಸಚಿವರಾದ ಸ್ಮೃತಿ ಇರಾನಿ (ಅಮೇಠಿ), ಮೇನಕಾ ಗಾಂಧಿ (ಪಿಲಿಭಿತ್‌), ಮಹೇಶ್‌ ಶರ್ಮಾ (ಗೌತಮಬುದ್ಧ ನಗರ) ಉತ್ತರ ಪ್ರದೇಶದಿಂದಲೇ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ (ಅಮೇಠಿ) ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ (ರಾಯಬರೇಲಿ) ಪುನರಾಯ್ಕೆ ಬಯಸಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಆಜಂಗಡ ಮತ್ತು ಎಸ್‌ಪಿ ಸ್ಥಾಪಕ ಮುಲಾಯಂ ಸಿಂಗ್‌ ಅವರು ಮೈನ್‌ಪುರಿಯಿಂದ ಸ್ಪರ್ಧಿಸಿದ್ದಾರೆ. ಸಿನಿಮಾ ತಾರೆಯರಾದ ಹೇಮಾಮಾಲಿನಿ ಅವರು ಮಥುರಾ, ಜಯಪ್ರದಾ ಅವರು ರಾಂಪುರ, ರಾಜ್‌ಬಬ್ಬರ್‌ ಅವರು ಫತೇಪುರ್‌ ಸಿಕ್ರಿಯಿಂದ ಸ್ಪರ್ಧಿಸಿದ್ದಾರೆ.

54 ಕ್ಷೇತ್ರಗಳು ಬಾಕಿ

ಉತ್ತರ ಪ್ರದೇಶದಲ್ಲಿ ಎಲ್ಲ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಮೂರು ಹಂತಗಳಲ್ಲಿ 26 ಕ್ಷೇತ್ರಗಳಲ್ಲಿ ಈಗಾಗಲೇ ಮತದಾನ ಆಗಿದೆ. ಉಳಿದ ಕ್ಷೇತ್ರಗಳು 54. ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಾಣಸಿಯಲ್ಲಿ ಕೊನೆಯ ಹಂತದಲ್ಲಿ ಅಂದರೆ, ಮೇ 19ರಂದು ಮತದಾನ ನಡೆಯಲಿದೆ.

ಜಾತಿ ಲೆಕ್ಕಾಚಾರ

ಇತರ ಹಿಂದುಳಿದ ಜಾತಿಗಳಲ್ಲಿ (ಒಬಿಸಿ) ಪ್ರಭಾವಿಯಾದ ಯಾದವ ಸಮುದಾಯವು ಹಿಂದಿನಿಂದಲೂ ಎಸ್‌ಪಿ ಜತೆಗೆ ನಿಂತಿದೆ. ಆಜಂ ಖಾನ್‌ ಅವರಂತಹ ಪ್ರಭಾವಿ ಮುಖಂಡ ಎಸ್‌ಪಿಯಲ್ಲಿ ಇರುವುದರಿಂದ ಮುಸ್ಲಿಂ ಸಮುದಾಯದ ಗಣನೀಯ ಪ್ರಮಾಣದ ಮತ ಎಸ್‌ಪಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ದಲಿತ ಸಮುದಾಯದಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ದಲಿತ–ಬ್ರಾಹ್ಮಣ ಸಮೀಕರಣದ ಮೂಲಕ ಅವರು ಉತ್ತರ ಪ್ರದೇಶದಲ್ಲಿ ಹಿಂದೆ ಅಧಿಕಾರ ಹಿಡಿದದ್ದೂ ಇದೆ. ಈ ಬಾರಿ ಯಾದವ–ದಲಿತ–ಮುಸ್ಲಿಂ ಸಮೀಕರಣವು ಮೈತ್ರಿಕೂಟಕ್ಕೆ ನೆರವಾಗಬಹುದು ಎನ್ನಲಾಗುತ್ತಿದೆ.

ಬಿಜೆಪಿಗೆ ಸವಾಲು

* 2014ರ ಸಾಧನೆ ಪುನರಾವರ್ತಿಸಲು ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಯೇ ಬಿಜೆಪಿಗೆ ಬಹುದೊಡ್ಡ ಅಡ್ಡಿ

* ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದ ಕಾರಣ ಎರಡೆರಡು ರೀತಿಯ ಆಡಳಿತ ವಿರೋಧಿ ಅಲೆ ಎದುರಿಸಬೇಕಾಗಿದೆ

* ಕಳೆದ ಬಾರಿ ಜತೆಯಲ್ಲಿದ್ದ ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ ಈ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿದೆ; ಅಪ್ನಾದಳ ಒಡೆದು ಹೋಳಾಗಿದೆ

* ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕೀಯ ಪ್ರವೇಶದ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಾಗಿದೆ

* ಮೈತ್ರಿಕೂಟದಲ್ಲಿ ಸೇರದೆ ಕಾಂಗ್ರೆಸ್‌ ಪ್ರತ್ಯೇಕವಾಗಿದೆ; ಹಾಗಾಗಿ ಇದು ಬಿಜೆಪಿಯ ಮತಗಳನ್ನು ತನ್ನತ್ತ ಸೆಳೆದು ಮೈತ್ರಿಕೂಟಕ್ಕೆ ನೆರವಾಗಬಹುದು ಎಂಬ ಲೆಕ್ಕಾಚಾರ ಇದೆ

* ಕಳೆದ ಬಾರಿಯಂತೆ ಮೋದಿ ಅಲೆ ಇಲ್ಲ, ಬದಲಿಗೆ ಸ್ಥಳೀಯ ವಿಚಾರಗಳೇ ಚುನಾವಣೆಯ ಮುಖ್ಯ ವಿಷಯವಾಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.