ADVERTISEMENT

ಮೋದಿ ಮತ್ತೆ ಪ್ರಧಾನಿಯಾಗ್ತಾರಾ, ಮುಂದಿನದ್ದು ಯಾರ ಸರ್ಕಾರ? ಇಂದು ಸಿಗಲಿದೆ ಉತ್ತರ

ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ

ಪಿಟಿಐ
Published 22 ಮೇ 2019, 20:06 IST
Last Updated 22 ಮೇ 2019, 20:06 IST
   

ನವದೆಹಲಿ: ಮುಂದಿನ ಐದು ವರ್ಷ ದೇಶವನ್ನು ಮುನ್ನಡೆಸುವವರು ಯಾರು ಎಂಬ ಎಲ್ಲರ ಕುತೂಹಲಕ್ಕೆ ಇಂದು (ಗುರುವಾರ) ಉತ್ತರ ಸಿಗಲಿದೆ.ಲೋಕಸಭೆಗೆ ಏಳು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಇದರೊಂದಿಗೆ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ‘ಜನತಂತ್ರದ ಹಬ್ಬ’ಕ್ಕೆ ತೆರೆ ಬೀಳಲಿದೆ.

ನರೇಂದ್ರ ಮೋದಿ ಅವರ ಜನಪ್ರಿಯತೆಯ ಅಲೆಯಲ್ಲಿ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ಅದೇ ರೀತಿಯ ಫಲಿತಾಂಶ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳಲ್ಲಿ ಹೆಚ್ಚಿನವು ಅಂದಾಜಿಸಿವೆ. ಆದರೆ, ಮತಗಟ್ಟೆ ಸಮೀ
ಕ್ಷೆಗಳ ಫಲಿತಾಂಶ ನಂಬಲರ್ಹವಲ್ಲ. ಬಿಜೆಪಿ ಭಾರಿ ಸೋಲು ಕಾಣಲಿದೆ ಎಂಬ ಆಶಾವಾದದಲ್ಲಿ ವಿರೋಧ ಪಕ್ಷಗಳಿವೆ.

ಲೋಕಸಭೆಯಲ್ಲಿ ಒಟ್ಟು 543ಕ್ಷೇತ್ರಗಳಿವೆ. ಆದರೆ, ಈ ಬಾರಿ 542ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆದಿದೆ.ಅತಿಯಾದ ಹಣ ಬಳಕೆಯಾಗಿದೆ ಎಂಬ ಕಾರಣಕ್ಕೆ ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಮತದಾನವನ್ನು ಆಯೋಗವು ರದ್ದು ಮಾಡಿದೆ.

ADVERTISEMENT

ಕರ್ನಾಟಕದಲ್ಲಿ ಸಂಭಾವ್ಯ ಪರಿಣಾಮ

* ಮತದಾನೋತ್ತರ ಸಮೀಕ್ಷೆ ಹೇಳಿರುವಂತೆ ಬಿಜೆ‍ಪಿ 20ಕ್ಕಿಂತ ಹೆಚ್ಚುಕ್ಷೇತ್ರಗಳಲ್ಲಿ ಗೆದ್ದರೆ ಮೈತ್ರಿ ಸರ್ಕಾರದ ಪತನಕ್ಕೆ ಯತ್ನಿಸುವ ಸಾಧ್ಯತೆ

*ಆಪರೇಷನ್ ಕಮಲ ಬಿರುಸುಗೊಳ್ಳಲಿದ್ದು, ಕಾಂಗ್ರೆಸ್‌–ಜೆಡಿಎಸ್ ಶಾಸಕರ ರಾಜೀನಾಮೆ ಪರ್ವ ಆರಂಭವಾಗಬಹುದು

*28 ಕ್ಷೇತ್ರಗಳ ಪೈಕಿ ಮೈತ್ರಿಕೂಟ 13 ಸಂಖ್ಯೆ ದಾಟಿದರೆ ಸರ್ಕಾರಕ್ಕೆ ಸದ್ಯಕ್ಕೆ ಆತಂಕವಿಲ್ಲ

*ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ಕಾಂಗ್ರೆಸ್‌–ಜೆಡಿಎಸ್‌ ನಾಯಕರ ಮಧ್ಯೆ ಕಚ್ಚಾಟ ತೀವ್ರಗೊಳ್ಳಬಹುದು. ಇದು ಮೈತ್ರಿ ಕಡಿದು ಹೊರಬರುವ ಮಟ್ಟಕ್ಕೂ ತಲುಪಬಹುದು

* ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆದ್ದು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸೋತರೆ ಕೈ ನಾಯಕರು, ಶಾಸಕರು ಜೆಡಿಎಸ್‌ ವಿರುದ್ಧ ಸಿಡಿದೇಳಬಹುದು. ಮೈಸೂರು ಗೆದ್ದು, ಮಂಡ್ಯ, ತುಮಕೂರಿನಲ್ಲಿ ಸೋತರೆ ಸಿದ್ದರಾಮಯ್ಯ ಬಣದ ವಿರುದ್ಧ ದಳ ನಾಯಕರು ಸಮರ ಆರಂಭಿಸಬಹುದು

ಕೇಂದ್ರದಲ್ಲಿ ನಾಲ್ಕು ಸಾಧ್ಯತೆಗಳು

1. ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಗಳ ಫಲಿತಾಂಶದ ರೀತಿಯಲ್ಲಿಯೇ ಎನ್‌ಡಿಎಗೆ ಸ್ಪಷ್ಟ ಬಹುಮತ

2. ಎನ್‌ಡಿಎ ಅಥವಾ ಯುಪಿಎ ಮೈತ್ರಿಕೂಟಕ್ಕೆ ಸರಳ ಬಹುಮತ ಇಲ್ಲದಸ್ಥಿತಿ–ಬಿಜೆಪಿ ಬೆಂಬಲದಿಂದ ಸಂಯುಕ್ತ ರಂಗ ಸರ್ಕಾರ

3. ಕಾಂಗ್ರೆಸ್‌ ಬೆಂಬಲದಿಂದ ಸಂಯುಕ್ತ ರಂಗ ಸರ್ಕಾರ

4. ಸಮೀಕ್ಷೆಗಳೆಲ್ಲವನ್ನೂ ಸುಳ್ಳು ಮಾಡಿ ಯುಪಿಎ ಅಧಿಕಾರಕ್ಕೆ

ವಿವಿಪ್ಯಾಟ್ ತಾಳೆ ಕೊನೆಗೆ

ಐದು ಮತಗಟ್ಟೆಗಳ ವಿವಿಪ್ಯಾಟ್‌ ರಶೀತಿಗಳನ್ನು ಮತ ಎಣಿಕೆಗೆ ಮೊದಲೇ ಮತಯಂತ್ರಗಳ ಜತೆಗೆ ಹೋಲಿಕೆ ಮಾಡಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಮತ ಎಣಿಕೆ ಮುಗಿದ ಬಳಿಕವೇ ವಿವಿಪ್ಯಾಟ್‌ ರಶೀತಿಗಳ ತಾಳೆ ನಡೆಯಲಿದೆ ಎಂದು ಹೇಳಿದೆ.

ವಿವಿಪ್ಯಾಟ್‌ ತಾಳೆಯ ಕೆಲಸವನ್ನು ಮೊದಲು ಮಾಡಬೇಕು. ಮತಯಂತ್ರ ಮತ್ತು ವಿವಿಪ್ಯಾಟ್‌ ತಾಳೆಯಾಗದೇ ಇದ್ದರೆ ವಿವಿಪ್ಯಾಟ್‌ ರಶೀತಿಗಳನ್ನು ಬೇಗನೆ ಎಣಿಕೆ ಮಾಡಲು ಇದರಿಂದ ಸಾಧ್ಯ ಎಂದು ವಿರೋಧ ಪಕ್ಷಗಳ ನಿಯೋಗವು ಆಯೋಗಕ್ಕೆ ಮನವಿ ಮಾಡಿದ್ದವು. ಈ ಬೇಡಿಕೆಯನ್ನು ಆಯೋಗ ತಿರಸ್ಕರಿಸಿತ್ತು. ಹಾಗಿದ್ದರೂ, ಆಯೋಗದ ಹಿರಿಯ ಅಧಿಕಾರಿಗಳು ಬುಧವಾರ ಸಭೆ ಸೇರಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.