ADVERTISEMENT

ಆರ್ಯನ್‌ ಖಾನ್ ಬಿಡುಗಡೆಗೆ ₹25 ಕೋಟಿ ಲಂಚ ಕೇಳಿದರಂತೆ ಎನ್‌ಸಿಬಿ ಅಧಿಕಾರಿಗಳು!

ಪಿಟಿಐ
Published 24 ಅಕ್ಟೋಬರ್ 2021, 18:22 IST
Last Updated 24 ಅಕ್ಟೋಬರ್ 2021, 18:22 IST
ಆರ್ಯನ್ ಖಾನ್
ಆರ್ಯನ್ ಖಾನ್   

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣವು ದಿಢೀರ್ ತಿರುವು ಪ‍ಡೆದುಕೊಂಡಿದೆ. ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದ (ಎನ್‌ಸಿಬಿ) ಅಧಿಕಾರಿಗಳು ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಕ್‌ ಖಾನ್‌ ಅವರಿಂದ ಆರೋಪಿಯಾದ ಅವರ ಮಗ ಆರ್ಯನ್‌ ಖಾನ್‌ ಬಿಡುಗಡೆಗೆ ₹25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪ್ರಕರಣದ ಸಾಕ್ಷಿಯಾಗಿರುವ ಪ್ರಭಾಕರ ಸೈಲ್‌ ಹೇಳಿದ್ದಾರೆ.

ಒಂಬತ್ತು ಖಾಲಿ ಹಾಳೆಗಳಿಗೆ ಎನ್‌ಸಿಬಿ ಅಧಿಕಾರಿಗಳು ತಮ್ಮಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದೂ ಸೈಲ್‌ ಆರೋಪಿಸಿದ್ದಾರೆ. ಈ ಆರೋಪಗಳನ್ನು ಎನ್‌ಸಿಬಿ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಇವು ಆಧಾರರಹಿತ ಮತ್ತು ದುರುದ್ದೇಶಪೂರಿತ ಆರೋಪ ಎಂದಿದ್ದಾರೆ.

ಎನ್‌ಸಿಬಿಯ ಪ್ರಾದೇಶಿಕ ನಿರ್ದೇಶಕ ಸಮೀರ್‌ ವಾಂಖೆಡೆ ಅವರು ಈ ತಿಂಗಳ ಆರಂಭದಲ್ಲಿ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದರು. ಅಂತರರಾಷ್ಟ್ರೀಯ ಡ್ರಗ್ಸ್‌ ಜಾಲವನ್ನು ಬಯಲಿಗೆ ಎಳೆದಿರುವುದಾಗಿ ಎನ್‌ಸಿಬಿ ಹೇಳಿತ್ತು. ಇದೇ 3ರಂದು ಆರ್ಯನ್‌ ಖಾನ್‌ ಅವರನ್ನು ಎನ್‌ಸಿಬಿ ಬಂಧಿಸಿತ್ತು. ಆರ್ಯನ್‌ ಅವರು ಆರ್ಥರ್‌ ರೋಡ್‌ ಜೈಲಿನಲ್ಲಿದ್ದಾರೆ.

ADVERTISEMENT

ವಿದೇಶದಲ್ಲಿ ಉದ್ಯೋಗ ದೊರಕಿಸಿ ಕೊಡುವ ಕೆ.ಪಿ. ಗೋಸಾವಿ ಎಂಬ ವ್ಯಕ್ತಿ ಪ್ರಕರಣದ ಇನ್ನೊಬ್ಬ ಸಾಕ್ಷಿ. 2018ರ ವಂಚನೆ ಪ್ರಕರಣವೊಂದರಲ್ಲಿ ಗೋಸಾವಿ ವಿರುದ್ಧ ಪುಣೆ ಪೊಲೀಸರು ಇತ್ತೀಚೆಗೆ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದಾರೆ.

ಎನ್‌ಸಿಬಿ ಅಧಿಕಾರಿಗಳು, ಗೋಸಾವಿ ಮತ್ತು ಸ್ಯಾಮ್‌ ಡಿಸೋಜಾ ಎಂಬ ಇನ್ನೊಬ್ಬ ವ್ಯಕ್ತಿ ಸೇರಿ ಶಾರುಖ್‌ ಖಾನ್‌ಗೆ ₹25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೊತ್ತ ಕೊಟ್ಟರೆ ಆರ್ಯನ್‌ ಬಿಡುಗಡೆ ಮಾಡಲಾಗುವುದು ಎಂದಿದ್ದರು ಎಂದು ಸೈಲ್‌ ಭಾನುವಾರ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.