ADVERTISEMENT

‘ಕಸ್ತೂರಿ ಮಹಲ್‌’ ಪ್ರವೇಶಿಸಿದ ನಟಿ ಶಾನ್ವಿ ಶ್ರೀವಾಸ್ತವ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 7:19 IST
Last Updated 25 ಸೆಪ್ಟೆಂಬರ್ 2020, 7:19 IST
ಶಾನ್ವಿ ಶ್ರೀವಾಸ್ತವ
ಶಾನ್ವಿ ಶ್ರೀವಾಸ್ತವ   

ದಿನೇಶ್‌ ಬಾಬು ನಿರ್ದೇಶನದ ಐವತ್ತನೇ ಚಿತ್ರದ ಹೆಸರು ‘ಕಸ್ತೂರಿ ಮಹಲ್’. ಅವರೇ ಇದರ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇತ್ತೀಚೆಗೆ ಇದರ ಮುಹೂರ್ತವೂ ನೆರವೇರಿತ್ತು.

‘ಡಿಂಪಲ್‌ ಕ್ವೀನ್’ ರಚಿತಾ ರಾಮ್ ಇದರಲ್ಲಿ ನಟಿಸಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಹಲವು ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಹಾಗಾಗಿ, ಸಮಯದ ಹೊಂದಾಣಿಕೆಯ ಕೊರತೆ ಪರಿಣಾಮ ಅವರು ಈ ಚಿತ್ರದಿಂದ ಹೊರ ನಡೆದಿದ್ದಾರೆ. ಈಗ ಅವರ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಈ ಚಿತ್ರಕ್ಕೆ ‘ಕಸ್ತೂರಿ ನಿವಾಸ’ ಎಂಬ ಟೈಟಲ್‌ ಇಡಲಾಗಿತ್ತು. ಇದಕ್ಕೆ ವರನಟ ರಾಜ್‌ಕುಮಾರ್‌ ಅಭಿಮಾನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ‌ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವ ಚಿತ್ರದ ಶೀರ್ಷಿಕೆಯನ್ನು ಮರುಬಳಕೆ ಮಾಡಬಾರದು ಎಂದು ಒತ್ತಾಯಿಸಿದ್ದರು. ಹಾಗಾಗಿ, ಚಿತ್ರತಂಡ ‘ಕಸ್ತೂರಿ ಮಹಲ್‌’ ಎಂದು ಟೈಟಲ್‌ ಬದಲಾಯಿಸಿತ್ತು.

ADVERTISEMENT

ಅಕ್ಟೋಬರ್ 5ರಿಂದ ಕೊಟ್ಟಿಗೆಹಾರದ ಸುತ್ತಮುತ್ತ ಇದರ ಮೊದಲ ಹಂತದ ಶೂಟಿಂಗ್‌ ಆರಂಭವಾಗಲಿದೆ. ಹಾರರ್, ಥ್ರಿಲ್ಲರ್ ಚಿತ್ರ ಇದಾಗಿದೆ. ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಸೌಂದರ್ ರಾಜ್ ಸಂಕಲನ ನಿರ್ವಹಿಸಲಿದ್ದಾರೆ. ಸ್ಕಂದ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ ತಾರಾಗಣದಲ್ಲಿ ಇದ್ದಾರೆ.

ಪ್ರಸ್ತುತ ಶಾನ್ವಿ ‘ತ್ರಿಶೂಲಂ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಓಂ ಪ್ರಕಾಶ್‌ ರಾವ್‌ ನಿರ್ದೇಶನದ ಇದರಲ್ಲಿ ಉಪೇಂದ್ರ ಮತ್ತು ರವಿಚಂದ್ರನ್‌ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದಾರೆ. ಇದು ತೆಲುಗಿನ ‘ಬಲುಪು’ ಚಿತ್ರದ ರಿಮೇಕ್‌. ರೊಮ್ಯಾಂಟಿಕ್ ಆ್ಯಕ್ಷನ್‌ ಚಿತ್ರ ಇದಾಗಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.