
ಹಿಂದಿಯ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮಕ್ಕೆ 'ಇಕ್ಕಿಸ್' ಚಿತ್ರತಂಡ ಆಗಮಿಸಿದ್ದ ವೇಳೆ ನಿರೂಪಕ ಅಮಿತಾಭ್ ಬಚ್ಚನ್ ಅವರು ಇತ್ತೀಚೆಗೆ ಅಗಲಿದ ಗೆಳೆಯ ಧರ್ಮೇಂದ್ರ ಅವರ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ನವೆಂಬರ್ನಲ್ಲಿ ನಿಧನರಾದ ನಟ ಧರ್ಮೇಂದ್ರ ಅವರ ಕುರಿತು ಮಾತನಾಡಿರುವ ಅಮಿತಾಭ್ ಬಚ್ಚನ್, ‘ಒಬ್ಬ ಕಲಾವಿದ ಕೊನೆಯ ಉಸಿರಿನವರೆಗೂ ಕಲೆಯನ್ನು ಅಭ್ಯಾಸ ಮಾಡಬೇಕೆಂದು ಬಯಸುತ್ತಾನೆ. ಅದೇ ರೀತಿ ಧರ್ಮೇಂದ್ರ ಅವರು 'ಇಕ್ಕಿಸ್' ಚಿತ್ರದಲ್ಲಿ ನಟಿಸುವ ಮೂಲಕ ಅಭಿಮಾನಿಗಳಿಗೆ ಸುಂದರ ನೆನಪುಗಳನ್ನು ನೀಡಿದ್ದಾರೆ.
ಧರ್ಮೆಂದ್ರ ಅವರು ವ್ಯಕ್ತಿ ಮಾತ್ರವಲ್ಲ ಅದೊಂದು ಭಾವನೆ. ನಮ್ಮ ಕುಟುಂಬದ ಜತೆಯಲ್ಲೂ ಆತ್ಮೀಯ ನಂಟು ಹೊಂದಿದ್ದರು. ನನ್ನ ಜೀವನದಲ್ಲಿ ಅವರ ನೆನಪು ಯಾವಾಗಲೂ ಶಾಶ್ವತ’ ಎಂದು ಹೇಳಿಕೊಂಡಿದ್ದಾರೆ.
‘ಶೋಲೆ’ ಚಿತ್ರದಲ್ಲಿ ಧರ್ಮೆಂದ್ರ ಅವರ ಜತೆ ಅಮಿತಾಭ್ ಬಚ್ಚನ್ ಕೂಡ ತೆರೆ ಹಂಚಿಕೊಂಡಿದ್ದರು.
'ಇಕ್ಕಿಸ್' ಚಿತ್ರವು 1971ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದ ಕಥಾಹಂದರವನ್ನು ಹೊಂದಿದೆ. ಈ ಚಿತ್ರದಲ್ಲಿ ಧರ್ಮೇಂದ್ರ ಅವರು ಅರುಣ್ ಖೇತರ್ಪಾಲ್ ತಂದೆಯ ಪಾತ್ರದಲ್ಲಿ ನಟಿಸಿದ್ದರೆ, ಬಚ್ಚನ್ ಅವರ ಮೊಮ್ಮಗ ಆಗಸ್ತ್ಯ ನಂದಾ ಅವರು ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
'ಇಕ್ಕಿಸ್' ಚಿತ್ರವು ನಿನ್ನೆ(ಬುಧವಾರ) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.