ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮೌನ ಮುರಿದ್ದಾರೆ. ಕೆಲ ದಿನಗಳಿಂದ ತಮ್ಮ ಎಕ್ಸ್ ಖಾತೆಯಲ್ಲಿ ಖಾಲಿ ಪೋಸ್ಟ್ ಹಂಚಿಕೊಂಡ ಅವರು ಟ್ರೋಲ್ಗೆ ಗುರಿಯಾಗಿದ್ದರು.
ಭಾನುವಾರ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪಹಲ್ಗಾಮ್ ದಾಳಿಯನ್ನು ಮರೆಯಲಾಗದು ಎಂದಿದ್ದಾರೆ.
ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ನವ ವಿವಾಹಿತೆಯೊಬ್ಬಳ ಸಂಕಟವನ್ನು ಕವಿತೆಯ ಮೂಲಕ ವಿವರಿಸಿರುವ ಅವರು, '3 ದಿನಗಳ ಹಿಂದೆಯಷ್ಟೇ ಮದುವೆಯಾದ ಆಕೆ ಮೊಣಕಾಲೂರಿ ಅಳುತ್ತಾ, 'ನನ್ನ ಗಂಡನನ್ನು ಕೊಲ್ಲಬೇಡಿ' ಎಂದು ಪರಿ ಪರಿಯಾಗಿ ಬೇಡಿಕೊಂಡಳು. ಆದರೆ ಆ ಹೇಡಿ ರಾಕ್ಷಸ, ಕ್ರೌರ್ಯ ಮೆರೆದ. ಆಕೆಯ ಕಣ್ಣೆದುರೆ ಗುಂಡು ಹಾರಿಸಿ ಆತನನ್ನು ಹತ್ಯೆಗೈದ. 'ನನ್ನನ್ನೂ ಕೊಲ್ಲು' ಎಂದು ಆಕ್ರೋಶ ಭರಿತಳಾಗಿ ಆಕೆ ಕೂಗಿದಾಗ ಆ ರಾಕ್ಷಸ, 'ಇಲ್ಲ ಹೋಗಿ ಮೋದಿಗೆ ಹೇಳು' ಎಂದನಂತೆ. ಆ ಕ್ಷಣದಲ್ಲಿ, ಆ ಹೆಣ್ಣು ಮಗಳ ಸಂಕಟವನ್ನು ನೆನೆದಾಗ ನನಗೆ ನನ್ನ ತಂದೆ ಹರಿವಂಶ್ ರಾಯ್ ಬಚ್ಚನ್ ಅವರ ಕವಿತೆಯ ಸಾಲು ನೆನಪಿಗೆ ಬಂತು. 'ನಾನು ಕೈಯಲ್ಲಿ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಹಿಡಿದಿದ್ದೇನೆ. ಆದರೂ ಜಗತ್ತು ನನ್ನಿಂದ ಸಿಂಧೂರವನ್ನು ಕೇಳುತ್ತಿದೆ' ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅವರು ಶ್ಲಾಘಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.