
ಅರ್ಜುನ್ ಜನ್ಯ ನಿರ್ದೇಶನದ ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ನಟಿಸಿರುವ ‘45’ ಸಿನಿಮಾ ಇಂದು (ಡಿ.25) ತೆರೆಕಂಡಿದೆ.
ಸಿನಿಮಾದಲ್ಲಿ ಸಾಫ್ಟ್ವೇರ್ ಉದ್ಯೋಗಿ ‘ವಿನಯ್’ ಎಂಬ ಪಾತ್ರದಲ್ಲಿ ರಾಜ್, ‘ರಾಯಪ್ಪ’ನಾಗಿ ಉಪೇಂದ್ರ, ‘ಶಿವಪ್ಪ’ನಾಗಿ ಶಿವರಾಜ್ಕುಮಾರ್ ಕಾಣಿಸಿಕೊಂಡಿದ್ದಾರೆ. ಸಾವು–ಬದುಕಿನ ನಡುವಿನ ಕಥೆ ಹೊತ್ತ ಈ ಸಿನಿಮಾವನ್ನು ಎಂ.ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಿಸಿದ್ದಾರೆ.
‘ಟ್ರೇಲರ್ಗೆ ಎಲ್ಲಾ ಕಡೆಗಳಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಹಾಡಿಗೂ ಜನರು ಮನ ಸೋತಿದ್ದಾರೆ. ಶಿವರಾಜಕುಮಾರ್ ಅವರಿಗೆ ವಿಶೇಷ ಧನ್ಯವಾದ ಹೇಳಬೇಕು. ಅವರಿಗೆ ಆರೋಗ್ಯದ ಸಮಸ್ಯೆ ಇದ್ದರೂ ಚಿತ್ರಕ್ಕೆ ತೊಂದರೆಯಾಗಬಾರದು ಎಂದು ತಮ್ಮ ಕೆಲಸಗಳನ್ನು ಪೂರೈಸಿ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು. ಅರ್ಜುನ್ ಜನ್ಯ ಅವರು ಮೂರು ವರ್ಷಗಳಿಂದ ಚಿತ್ರಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಅವರ ಶ್ರಮ ಸಾರ್ಥಕ ಆಗಿದೆ. ಸಿನಿಮಾವನ್ನು ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದಲ್ಲೂ ಜನಪ್ರಿಯ ಸಂಸ್ಥೆಗಳು ವಿತರಣೆ ಮಾಡುತ್ತಿವೆ. ಉತ್ತರ ಭಾರತದಲ್ಲಿ ಜೀ ಸ್ಟುಡಿಯೊಸ್ ವಿತರಣೆ ಮಾಡುತ್ತಿದೆ’ ಎಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.
ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅವರ ಅಭಿಮಾನಿಯಾಗಿ ಅರ್ಜುನ್ ಜನ್ಯ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ಇದು 45 ದಿನಗಳಲ್ಲಿ ನಡೆಯುವ ಕಥೆಯಾದ ಕಾರಣ ಸಿನಿಮಾಗೆ ಹೀಗೆ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಚಿತ್ರಗ್ರಹಣವಿದೆ.
ಈಗಾಗಲೇ ‘ಜೀ’ ಸಂಸ್ಥೆಯು ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದೆ. ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಕರ್ನಾಟಕದಾದ್ಯಂತ ವಿತರಣೆ ಮಾಡಲಿದೆ. ಗುರುವಾರದಿಂದಲೇ (ಡಿ.24) ಚಿತ್ರದ ಪ್ರೀಮಿಯರ್ ಪ್ರದರ್ಶನಗಳು ಕರ್ನಾಟಕದಾದ್ಯಂತ ನಡೆದಿವೆ. ಬೆಂಗಳೂರಿನಲ್ಲೇ 40ಕ್ಕೂ ಅಧಿಕ ಪ್ರದರ್ಶನಗಳು ಹೌಸ್ಫುಲ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.