
ಬಿಗ್ ಬಿ ಅಮಿತಾಭ್ ಬಚ್ಚನ್ 80 ಜಾಕೆಟ್, 25 ಪ್ಯಾಂಟು, 20 ಶರ್ಟು, 40 ಶೂ ಮತ್ತು ಕೆಲವು ಸ್ಕಾರ್ಫ್ಗಳನ್ನು ಕೇರಳದ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ, ₹ 51 ಲಕ್ಷದ ದೇಣಿಗೆಯನ್ನೂ ನೀಡಿದ್ದಾರೆ!
ಸೀನಿಯರ್ ಬಚ್ಚನ್, ಸಂಕಷ್ಟದಲ್ಲಿರುವವರಿಗೆ ನೆರವಾಗಲು ಹಿಂದೆಮುಂದೆ ನೋಡುವವರಲ್ಲ. ಕೇರಳಕ್ಕಾಗಿ ನೆರೆ ಪರಿಹಾರ ನಿಧಿ ಸಂಗ್ರಹಿಸುತ್ತಿರುವ ಧ್ವನಿ ವಿನ್ಯಾಸಕ ರೆಸೂಲ್ ಪೂಕುಟ್ಟಿ ಅವರ ಮನವಿಯನ್ನು ಪರಿಗಣಿಸಿದ ಬಚ್ಚನ್ ಹಣ ಮತ್ತು ಬಟ್ಟೆಬರೆಗಳನ್ನು ನೀಡಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.‘ಬ್ರಹ್ಮಾಸ್ತ್ರ’, ‘ಬದ್ಲಾ’ ಮತ್ತು ‘ಥಗ್ಸ್ ಆಫ್ ಹಿಂದೊಸ್ತಾನ್’ನಲ್ಲಿ ಬಿಗ್ ಬಿ ಈಗ ನಟಿಸುತ್ತಿದ್ದಾರೆ.
ನಸುಕಿನಲ್ಲಿ ರೆಕಾರ್ಡಿಂಗ್!
ಬಾಲಿವುಡ್ನ ದಿಗ್ಗಜ ಅಮಿತಾಭ್ ಬಚ್ಚನ್ ಗುರುವಾರ ಬೆಳಿಗ್ಗೆ 3.55ಕ್ಕೆ ತಮ್ಮ ‘SrBachchan ಖಾತೆಯಿಂದ ಒಂದು ಟ್ವೀಟ್ ಮಾಡಿದ್ದಾರೆ. ‘ಬೆಳಿಗ್ಗೆ 4 ಗಂಟೆ ಆಗ್ತಿದೆ. ಈಗಷ್ಟೇ ಮನೆಗೆ ಬಂದೆ. ಬೆಳಿಗ್ಗೆ 7 ಗಂಟೆಗೆ ಮತ್ತೆ ಕೆಲಸಕ್ಕೆ ರೆಡಿಯಾಗಬೇಕು. ಇನ್ನಷ್ಟು ಹುರುಪಿನಿಂದ ಕೆಲಸ ಮಾಡಬೇಕಾದರೆ ನಾನು ಈಗ ವಿಶ್ರಾಂತಿ ತಗೋಬೇಕು. ಲವ್’ ಎಂಬ ಒಕ್ಕಣೆ ಅದರಲ್ಲಿದೆ.
‘ಕೌನ್ ಬನೇಗಾ ಕರೋಡ್ಪತಿ’ ಸರಣಿಯ 10ನೇ ಆವೃತ್ತಿಯ ಚಿತ್ರೀಕರಣದಲ್ಲಿ ದಿನವಿಡೀ ಪಾಲ್ಗೊಂಡಿದ್ದ ಬಿಗ್ ಬಿ ರೆಕಾರ್ಡಿಂಗ್ ಸ್ಟುಡಿಯೊ ತಲುಪಿದಾಗ ಮಧ್ಯರಾತ್ರಿ ದಾಟಿತ್ತಂತೆ. ‘ಆಹಾ ಮಧ್ಯರಾತ್ರಿಯಲ್ಲಿ ಕೆಲಸ ಮಾಡಲು ಅತ್ಯಂತ ಪ್ರಶಾಂತವಾದ ಸಮಯವಿದು’ ಎಂದೂ ಬಚ್ಚನ್ ಬರೆದುಕೊಂಡಿದ್ದಾರೆ.
75ರಲ್ಲೂ ವರ್ಕೋಹಾಲಿಕ್ ಆಗಿ ಇರಬಯಸುವ ಈ ತಾತ, ಚಿತ್ರೀಕರಣದಲ್ಲಿ ತೊಡಗಿಸಿಕೊಂಡರೆ ತಾರುಣ್ಯ ಬಂದುಬಿಡುತ್ತದೆಯೇ? ನಸುಕಿನ ಜಾವದವರೆಗೂ ನಿರಂತರ ಕೆಲಸದಲ್ಲಿ ತೊಡಗಿಸಿಕೊಂಡರೂ ದಣಿವಾಗದಿರುವ ಉಮೇದು ನೋಡಿದರೆ ಹೌದೆನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.