ಸ್ಟಾರ್ ನಟರು ಇತ್ತೀಚೆಗೆ ವರ್ಷಕ್ಕೆ ಒಂದು ಸಿನಿಮಾಕ್ಕೆ ಸೀಮಿತರಾಗುತ್ತಿದ್ದಾರೆ. ಇದು ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಕಂಡುಬರುತ್ತಿರುವ ಸಾಮಾನ್ಯ ಬೆಳವಣಿಗೆ. ಟಾಲಿವುಡ್ ನಟರು ಇದರಿಂದ ಹೊರತಲ್ಲ. ಆದರೆ, ಇದರಿಂದ ಚಿತ್ರಮಂದಿರದ ಮಾಲೀಕರು ಅನುಭವಿಸುವ ಸಂಕಷ್ಟ ಹೇಳತೀರದು. ಒಳ್ಳೆಯ ಚಿತ್ರಗಳಿಲ್ಲದೆ ಥಿಯೇಟರ್ಗಳು ನಷ್ಟ ಅನುಭವಿಸುವಂತಾಗಿದೆ.
ಕಳೆದ ವರ್ಷ ‘ಮೆಗಾಸ್ಟಾರ್’ ಚಿರಂಜೀವಿ ಅವರು ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸಿದ್ದರು. ಈ ವರ್ಷ ‘ಆಚಾರ್ಯ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದಾರೆ. ಕಾಜಲ್ ಅಗರ್ ವಾಲ್ ಈ ಚಿತ್ರದ ನಾಯಕಿ.ಆಗಸ್ಟ್ನಲ್ಲಿ ಈ ಸಿನಿಮಾದ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಆದರೆ, ಕೊರೊನಾ ಸೋಂಕಿನ ಭೀತಿಯಿಂದ ಚಿತ್ರೀಕರಣ ಸ್ಥಗಿತಗೊಂಡಿದೆ.
‘ಆಚಾರ್ಯ’ ಚಿತ್ರದ ಬಳಿಕ ಚಿರಂಜೀವಿ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಕಾತರ ಅವರ ಅಭಿಮಾನಿಗಳಲ್ಲಿತ್ತು. ಎರಡು ಸಿನಿಮಾಗಳಲ್ಲಿ ನಟಿಸುವುದಾಗಿ ಚಿರು ಅವರೇ ಇತ್ತೀಚಿನ ಸಂದರ್ಶನದಲ್ಲಿ ಘೋಷಿಸಿದ್ದಾರೆ.
ಮಲಯಾಳದ ‘ಲೂಸಿಫರ್’ ಚಿತ್ರದ ತೆಲುಗು ರಿಮೇಕ್ನಲ್ಲಿ ಅವರು ನಟಿಸಲಿದ್ದಾರಂತೆ. ಇದಕ್ಕೆ ‘ಸಾಹೊ’ ಚಿತ್ರದ ನಿರ್ದೇಶಕ ಸುಜಿತ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮೂಲ ಚಿತ್ರದ ಸ್ಕ್ರಿಪ್ಟ್ ಅನ್ನು ತೆಲುಗಿನ ನೇಟಿವಿಟಿಗೆ ತಕ್ಕಂತೆ ಬದಲಾಯಿಸುವ ಪ್ರಕ್ರಿಯೆಯಲ್ಲಿ ಅವರು ತೊಡಗಿದ್ದಾರೆ.
ಇದಾದ ಬಳಿಕ ಕೆ.ಎಸ್. ರವೀಂದ್ರ ಬಾಬಿ ನಿರ್ದೇಶನದ ಹೊಸ ಚಿತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ. ರವೀಂದ್ರ ಟಿಪಿಕಲ್ ಕಮರ್ಷಿಯಲ್ ಡೈರೆಕ್ಟರ್. ಅವರು ನಿರ್ದೇಶಿಸಿದ್ದ ‘ಜೈ ಲವ ಕುಶ’, ‘ವೆಂಕಿ ಮಾಮ’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದ್ದವು. ಈ ಯಶಸ್ಸೇ ಚಿರು ಹೊಸ ಸಿನಿಮಾದ ನಿರ್ದೇಶನಕ್ಕೆ ಅವರಿಗೆ ಅವಕಾಶದ ಬಾಗಿಲು ತೆರೆದಿದೆ ಎಂಬುದು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿರುವ ಮಾತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.