ಬೆಂಗಳೂರು: ಕೋವಿಡ್–19 ಎರಡನೇ ಅಲೆಯು ತೀವ್ರವಾಗಿದ್ದು, ದೇಶದಾದ್ಯಂತ ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ನಟ, ನಟಿಯರು ವಿಭಿನ್ನವಾಗಿ #StandTogether ಹೆಸರಿನಲ್ಲಿ ಕೋವಿಡ್ ಜಾಗೃತಿ ಮೂಡಿಸಿದ್ದಾರೆ.
ನಟಿ ಆಲಿಯಾ ಭಟ್ ತೆಲುಗಿನಲ್ಲಿ, ನಟರಾದ ರಾಮ್ ಚರಣ್ ತಮಿಳಿನಲ್ಲಿ, ಜೂನಿಯರ್ ಎನ್ಟಿಆರ್ ಕನ್ನಡದಲ್ಲಿ, ರಾಜಮೌಳಿ ಮಲಯಾಳಂನಲ್ಲಿ ಹಾಗೂ ಅಜಯ್ ದೇವಗನ್ ಹಿಂದಿ ಭಾಷೆಯಲ್ಲಿ ಕೋವಿಡ್ ಜಾಗೃತಿ ಮೂಡಿಸಿದ್ದಾರೆ. ‘ಎರಡನೇ ಅಲೆಯಲ್ಲಿ ದೇಶದಾದ್ಯಂತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಸರಾಗವಾಗಿ ತೆಲುಗಿನಲ್ಲಿ ಮಾತನಾಡಿರುವ ಆಲಿಯಾ ಭಟ್, ಮಾಸ್ಕ್ ಧರಿಸಿ ಹಾಗೂ ಲಸಿಕೆ ಹಾಕಿಸಿಕೊಳ್ಳಲು ಕರೆ ನೀಡಿದ್ದಾರೆ.
ಕನ್ನಡದಲ್ಲಿ ಜೂನಿಯರ್ ಎನ್ಟಿಆರ್ ಜಾಗೃತಿ
‘ಎಲ್ಲರಿಗೂ ನಮಸ್ಕಾರ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್, ಸ್ಯಾನಿಟೈಸರ್ ದೊಡ್ಡ ಅಸ್ತ್ರ. ಮಾಸ್ಕ್ ಸರಿಯಾಗಿ ಧರಿಸಿ, ಸಾರ್ವಜನಿಕವಾಗಿ ಓಡಾಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’ ಎಂದು ಕನ್ನಡದಲ್ಲೇ ಕರೆ ನೀಡಿದ್ದಾರೆ ಖ್ಯಾತ ತೆಲುಗು ನಟ ಜೂನಿಯರ್ ಎನ್ಟಿಆರ್.
ಜ್ಯೂನಿಯರ್ ಎನ್ಟಿಆರ್ ತಾಯಿ ಊರು ಕರ್ನಾಟಕ. ಈ ಹಿಂದೆ ಹಲವು ಬಾರಿ ಸಿನಿಮಾ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಕನ್ನಡದಲ್ಲೇ ಜ್ಯೂನಿಯರ್ ಎನ್ಟಿಆರ್ ಮಾತನಾಡಿದ್ದಾರೆ. ‘ನಮ್ಮ ಅಮ್ಮ ಕನ್ನಡದವರು, ಅವರ ಊರು ಕುಂದಾಪುರ’ ಎಂದು ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಕಾರ್ಯಕ್ರಮದ ವೇಳೆ ಅವರು ಹೇಳಿದ್ದರು. ಪುನೀತ್ ರಾಜ್ಕುಮಾರ್ ನಟನೆಯ ಚಕ್ರವ್ಯೂಹ ಸಿನಿಮಾದಲ್ಲೂ ‘ಗೆಳೆಯಾ ಗೆಳೆಯಾ’ ಎನ್ನುವ ಹಾಡನ್ನು ಜೂನಿಯರ್ ಎನ್ಟಿಆರ್ ಹಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.