ಬೆಂಗಳೂರು: ಸಿನಿಮಾ ನಿರ್ಮಾಪಕ ಭರತ್ ವಿಷ್ಣುಕಾಂತ್ ಅವರಿಗೆ ಜೀವ ಬೆದರಿಕೆಯೊಡ್ಡಿರುವ ಆರೋಪದಡಿ ನಟ ದರ್ಶನ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದೆ.
‘ಭರತ್ ಅವರು ದೂರು ನೀಡಿದ್ದಾರೆ. ದೂರಿನ ಅಂಶಗಳನ್ನು ಪರಿಗಣಿಸಿ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡು ಸ್ವೀಕೃತಿ ನೀಡಲಾಗಿದೆ. ಎನ್ಸಿಆರ್ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಅಂತಿಮವಾಗಿ ಬರುವ ಆದೇಶದನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ನಿರ್ಮಾಪಕ ಭರತ್ ಅವರು ‘ಭಗವಾನ್ ಶ್ರೀ ಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಧ್ರುವನ್ ಅಭಿನಯಿಸುತ್ತಿದ್ದಾರೆ. ಹಣಕಾಸಿನ ತೊಂದರೆಯಿಂದಾಗಿ ಭರತ್, ಚಿತ್ರೀಕರಣ ಮಾಡುವುದು ತಡವಾಗಿದೆ. ಇದನ್ನು ಪ್ರಶ್ನಿಸಿದ್ದ ಧ್ರುವನ್, ಇದೇ ವಿಚಾರವನ್ನು ದರ್ಶನ್ ಅವರಿಗೆ ತಿಳಿಸಿದ್ದರು.’
‘ಭರತ್ ಅವರಿಗೆ ಇತ್ತೀಚೆಗೆ ಕರೆ ಮಾಡಿದ್ದ ದರ್ಶನ್, ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ಮೊಬೈಲ್ ಸಂಭಾಷಣೆ ವಿವರವನ್ನು ದೂರುದಾರ ನೀಡಿದ್ದಾರೆ. ಪ್ರಕರಣದ ತನಿಖೆಯಿಂದಲೇ ನಿಜಾಂಶ ತಿಳಿಯಲಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.