ADVERTISEMENT

‘ಪುಷ್ಪ’ದಲ್ಲಿ ಧನಂಜಯ್‌ ನಟನೆ?

ಸುಕುಮಾರ್‌ ಜೊತೆ ಮಾತನಾಡಿದ್ದು ನಿಜ ಎಂದ ಡಾಲಿ

ಕೆ.ಎಚ್.ಓಬಳೇಶ್
Published 17 ಏಪ್ರಿಲ್ 2020, 8:19 IST
Last Updated 17 ಏಪ್ರಿಲ್ 2020, 8:19 IST
ಧನಂಜಯ್‌
ಧನಂಜಯ್‌   

‘ರಂಗಸ್ಥಳಂ’ –ಸುಕುಮಾರ್‌ ಎರಡು ವರ್ಷದ ಹಿಂದೆ ನಿರ್ದೇಶಿಸಿದ ತೆಲುಗಿನ ಪಿರಿಯಾಡಿಕ್ ಆ್ಯಕ್ಷನ್‌ ಚಿತ್ರ ಇದು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿತ್ತು. ರಾಮ್‌ ಚರಣ್‌, ಸಮಂತಾ ಅಕ್ಕಿನೇನಿ, ಜಗಪತಿಬಾಬು ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದಾದ ಬಳಿಕ ಸುಕುಮಾರ್ ಈಗ ‘ಪುಷ್ಪ‍’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಲ್ಲು ಅರ್ಜುನ್‌ ಇದರ ನಾಯಕ. ಅವರಿಗೆ ಕನ್ನಡತಿ ರಶ್ಮಿಕಾ ಮಂದಣ್ಣ ಜೋಡಿ.

ರಕ್ತಚಂದನ ಕಳ್ಳಸಾಗಾಣಿಕೆಯ ಸುತ್ತ ಇದರ ಕಥೆ ಹೆಣೆಯಲಾಗಿದೆ. ಜೊತೆಗೆ, ಇದು ಪ್ಯಾನ್‌ ಇಂಡಿಯಾ ಸಿನಿಮಾ. ಹಾಗಾಗಿ, ನಿರೀಕ್ಷೆಯೂ ಹೆಚ್ಚಿದೆ. ಇದರಲ್ಲಿ ‘ಡಾಲಿ’ ಖ್ಯಾತಿಯ ನಟ ಧನಂಜಯ್‌ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದ ಹೊರಬಿದ್ದಿದೆ.

‘ಡಾಲಿ’ಗೆ ತೆಲುಗು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಅವರು ರಾಮ್‌ಗೋಪಾಲ್‌ ವರ್ಮ ನಿರ್ದೇಶಿಸಿದ್ದ ‘ಭೈರವಗೀತ’ ಚಿತ್ರದಲ್ಲಿ ನಟಿಸಿದ್ದರು. ಇದು ಕನ್ನಡ ಮತ್ತು ತೆಲುಗಿನಲ್ಲಿ ತೆರೆ ಕಂಡಿತ್ತು. ಈಗಾಗಲೇ, ಧನಂಜಯ್‌ ಮನೋಜ್ಞ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದಿದ್ದಾರೆ. ‘ಯುವರತ್ನ’, ‘ಸಲಗ’, ‘ಪೊಗರು’, ‘ಬಡವ ರಾಸ್ಕಲ್’ –ಹೀಗೆ ಅವರು ನಟಿಸಿರುವ ಸಿನಿಮಾಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಈ ನಡುವೆಯೇ ಅವರು ಬೆಂಗಳೂರಿನ ಭೂಗತ ದೊರೆಯಾಗಿದ್ದ ಎಂ.ಪಿ. ಜಯರಾಜ್‌ ಪಾತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ.

ADVERTISEMENT

‘ಪುಷ್ಪ’ ಚಿತ್ರದಲ್ಲಿನ ನಟನೆ ಬಗ್ಗೆ ಧನಂಜಯ್‌ ‘ಪ್ರಜಾ ಪ್ಲಸ್‌’ ಜೊತೆಗೆ ಮಾಹಿತಿ ಹಂಚಿಕೊಂಡಿದ್ದು ಹೀಗೆ: ‘ನಿರ್ದೇಶಕ ಸುಕುಮಾರ್ ‘ಪುಷ್ಪ’ ಚಿತ್ರದಲ್ಲಿ ನಟಿಸುವ ಬಗ್ಗೆ ನನ್ನೊಟ್ಟಿಗೆ ಮಾತನಾಡಿದ್ದು ನಿಜ. ಲಾಕ್‌ಡೌನ್‌ ವೇಳೆಯೇ ಈ ಮಾತುಕತೆ ನಡೆದಿತ್ತು. ಅವರ ಕಡೆಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ನಿರ್ಮಾಪಕರೊಟ್ಟಿಗೆ ಮಾತುಕತೆ ನಡೆಸಬೇಕಿತ್ತು. ಅದೇ ವೇಳೆಗೆ ಲಾಕ್‌ಡೌನ್‌ ಘೋಷಣೆಯಾಯಿತು. ಹಾಗಾಗಿ, ಮೈತ್ರಿ ಮೂವಿ ಮೇಕರ್ಸ್‌ ಜೊತೆಗೆ ಮಾತುಕತೆ ನಡೆಸಲು ಸಾಧ್ಯವಾಗಿಲ್ಲ’ ಎಂದು ಸ್ಪಷ್ಟಪ‍ಡಿಸಿದರು.

‘ಈಗಾಗಲೇ, ಚಿತ್ರದ ಮುಹೂರ್ತ ನೆರವೇರಿದೆ. ತೆಲುಗು ಮಾಧ್ಯಮಗಳಲ್ಲಿ ನಾನು ಆ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಸುದ್ದಿ ಪ್ರಕಟವಾಗಿರುವುದನ್ನು ಗಮನಿಸಿದ್ದೇನೆ. ಅದನ್ನು ಚಿತ್ರತಂಡವೇ ಘೋಷಣೆ ಮಾಡಿದೆಯೇ ಎಂಬುದು ನನಗೂ ಗೊತ್ತಿಲ್ಲ. ಈಗ ನಿರ್ಮಾಪಕರು ನನ್ನ ಸಂಪರ್ಕದಲ್ಲಿ ಇಲ್ಲ. ಲಾಕ್‌ಡೌನ್‌ ಬಳಿಕ ಅವರೊಟ್ಟಿಗೆ ಮಾತನಾಡುತ್ತೇನೆ’ ಎಂದು ವಿವರಿಸಿದರು.

ಧನಂಜಯ್‌ ನಟನೆಯ ‘ಬಡವ ರಾಸ್ಕಲ್‌’ ಚಿತ್ರದ ಕ್ಲೈಮ್ಯಾಕ್ಸ್‌ ಮತ್ತು ಒಂದು ಹಾಡಿನ ಶೂಟಿಂಗ್ ಬಾಕಿಯಿದೆಯಂತೆ. ‘ಇನ್ನೂ ಹತ್ತು ದಿನಗಳ ಶೂಟಿಂಗ್‌ ಬಾಕಿ ಇದೆ. ಡಬ್ಬಿಂಗ್‌ ಮಾಡಲು ನಿರ್ಧರಿಸಿದ್ದೆವು. ಎಲ್ಲಾ ಕೆಲಸಕ್ಕೂ ಲಾಕ್‌ಡೌನ್ ಬಿಸಿ ತಟ್ಟಿದೆ’ ಎಂದರು.

ಶೂನ್ಯ ನಿರ್ದೇಶನದ ಹೊಸ ಸಿನಿಮಾದಲ್ಲಿ ಅವರು ಬೆಂಗಳೂರಿನ ಭೂಗತ ದೊರೆಯಾಗಿದ್ದ ಎಂ.ಪಿ. ಜಯರಾಜ್‌ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ‘ಜಯರಾಜ್‌ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದೆ. ಪ್ರತಿದಿನ ಜಿಮ್‌ಗೆ ಹೋಗುತ್ತಿದ್ದೆ. ಈಗ ಅದು ಕೂಡ ಸ್ಥಗಿತಗೊಂಡಿದೆ. ಮನೆಯ ಸುತ್ತಮುತ್ತ ಪ್ರತಿದಿನ ದೇಹ ದಂಡಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.

ನಿರ್ದೇಶಕ ಡಿ. ಸತ್ಯಪ್ರಕಾಶ್‌ ಹೊಸ ಸಿನಿಮಾದಲ್ಲಿ ಧನಂಜಯ್‌ ನಟಿಸಲಿದ್ದಾರೆ. ಇನ್ನೂ ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಈ ಚಿತ್ರಕ್ಕೆ ಅಜಯ್‌ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.