
'ಧುರಂಧರ್' ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ಚಿತ್ರಮಂದಿರದ ದೃಶ್ಯ
ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಡಿಸೆಂಬರ್ 5ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿರುವ ಈ ಸಿನಿಮಾ ಒಂದೇ ವಾರದಲ್ಲಿ ₹ 250 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂಬುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಈ ಸಿನಿಮಾ ಪ್ರದರ್ಶನಕ್ಕೂ ಮುನ್ನ, ಚಿತ್ರಮಂದಿರದಲ್ಲಿ ನಡೆದಿರುವ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ದೇಶಭಕ್ತಿ, ವೈಯಕ್ತಿಕ ಆಯ್ಕೆ ಹಾಗೂ ಚಿತ್ರಮಂದಿರದಲ್ಲಿನ ವರ್ತನೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ಪ್ರಸಾರವಾಗುವ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ನೀಡಲಿಲ್ಲ ಎಂಬ ಆರೋಪದ ಮೇಲೆ ಯುವಕನೊಬ್ಬನನ್ನು ಹೊರಗೆ ಕಳುಹಿಸಿರುವ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.
'ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತದಲ್ಲಿತ್ತು. ಹೆಚ್ಚಿನ ಪ್ರೇಕ್ಷಕರು, ಹೊರಗೆ ಹೋಗುವಂತೆ ಆತನನ್ನು ಒತ್ತಾಯಿಸಿದರು. ಅಷ್ಟರಲ್ಲಿ ಚಿತ್ರಮಂದಿರದ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ, ಯುವಕನಿಗೆ ಟಿಕೆಟ್ ಹಣವನ್ನು ಹಿಂತಿರುಗಿಸಿದರು' ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಡಿಯೊ ಹಂಚಿಕೊಂಡಿರುವ ಹಲವು ನೆಟ್ಟಿಗರು, ಚಿತ್ರಮಂದಿರದಲ್ಲಿದ್ದವರ ನಡೆಯನ್ನು ಶ್ಲಾಘಿಸಿದ್ದಾರೆ. ಆದರೆ ಕೆಲವರು, ಯುವಕನ ಮೇಲೆ ಬಲವಂತವಾಗಿ ದೇಶಭಕ್ತಿಯನ್ನು ಹೇರುವ ಪ್ರಯತ್ನ ನಡೆದಿದೆ ಎಂದು ಟೀಕಿಸಿದ್ದಾರೆ.
'ಇಂತಹ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿವೆ. ರಾಷ್ಟ್ರಗೀತೆ ಗೌರವ ನೀಡದವನನ್ನು ದೇಶಭಕ್ತರು ಹೊರಗಟ್ಟಿದ್ದಾರೆ' ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.
ಅಂದಹಾಗೆ, ಈ ಘಟನೆ ನಡೆದಿರುವುದು ಎಲ್ಲಿ ಎಂಬುದು ಸ್ಪಷ್ಟವಾಗಿ ವರದಿಯಾಗಿಲ್ಲ.
ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಜೊತೆಗೆ, ಸಂಜಯ್ ದತ್, ಆಕ್ಷಯ್ ಖನ್ನಾ, ಅರ್ಜನ್ ರಾಮ್ಪಾಲ್, ಸಾರಾ ಅರ್ಜುನ್, ಆರ್. ಮಾಧವನ್ ಮತ್ತು ರಾಕೇಶ್ ಬೇಡಿ ತೆರೆ ಹಂಚಿಕೊಂಡಿದ್ದಾರೆ.
ಆದಿತ್ಯ ಧರ್, ಅವರ ಸಹೋದರ ಲೋಕೇಶ್ ಧರ್ ಮತ್ತು ಜ್ಯೋತಿ ದೇಶಪಾಂಡೆ ಅವರು ಬಂಡವಾಳ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.