ADVERTISEMENT

70ರ ಹೊಸಿಲಲ್ಲಿ ‘ಹಂಸ’ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 10:39 IST
Last Updated 23 ಜೂನ್ 2021, 10:39 IST
ನಾದಬ್ರಹ್ಮ ಹಂಸಲೇಖ
ನಾದಬ್ರಹ್ಮ ಹಂಸಲೇಖ   

ನಾದಬ್ರಹ್ಮ ಹಂಸಲೇಖ ಅವರು70ನೇ ಜನ್ಮದಿನದ (ಜನ್ಮದಿನ: ಜೂನ್‌ 23, 1951) ಸಂಭ್ರಮದಲ್ಲಿ ಇದ್ದಾರೆ. ಬಹುಭಾಷೆಯ ಚಿತ್ರಗಳಿಗೆ ಸಂಗೀತ ನಿರ್ದೇಶನ, ಸಾಹಿತ್ಯ, ರಂಗಭೂಮಿ, ಜನಪದ ಹೀಗೆ ಹತ್ತಾರು ಕ್ಷೇತ್ರದಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡ ಹಂಸಲೇಖ ಅವರ ಗೀತೆಗಳು ಇಂದಿಗೂ ಅಭಿಮಾನ, ಮೆಚ್ಚುಗೆ ಕಾಯ್ದುಕೊಂಡಿವೆ.

1973ರಲ್ಲಿ ‘ತ್ರಿವೇಣಿ’ ಚಿತ್ರದ ‘ನೀನಾ ಭಗವಂತ’ ಹಾಡನ್ನು ಬರೆಯುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮೂಲ ಗಂಗರಾಜು ಆಗಿದ್ದ ಅವರು ಸಿನಿಪಯಣ, ಸಂಗೀತ ಸರಸ್ವತಿಯ ಕೈ ಹಿಡಿದು ‘ಹಂಸಲೇಖ’ ಅನಿಸಿಕೊಂಡರು. ಈಗ ಅಭಿಮಾನಿಗಳ ಬಾಯಲ್ಲಿ ‘ನಾದಬ್ರಹ್ಮ’ನಾದರು. 1987ರಲ್ಲಿ ತೆರೆಕಂಡ ಪ್ರೇಮಲೋಕ ಸಿನಿಮಾದ ಹಾಡುಗಳು ಹಂಸಲೇಖ ಅವರಿಗೆ ಖ್ಯಾತಿ ತಂದುಕೊಟ್ಟಿತು.

ಹಂಸಲೇಖ ಅವರು ಜೀವಮಾನದ ಸಾಧನೆ ಪ್ರಶಸ್ತಿ ಪುರಸ್ಕಾರ ಪಡೆದ ಸಂದರ್ಭ

ದೀರ್ಘ ಕಾಲ ಹಂಸಲೇಖ– ರವಿಚಂದ್ರನ್‌ ಜೋಡಿಯಾಗಿಯೇ ಬೆಸೆದರು. ಚಿತ್ರ– ಸಂಗೀತವನ್ನು ಭಿನ್ನ ಆಯಾಮಕ್ಕೆ ಒಯ್ದರು. ಮುಂದೆ ಅದ್ಯಾಕೋ ಅವರಿಬ್ಬರೂ ಪರಸ್ಪರ ಅಂತರ ಕಾಯ್ದುಕೊಂಡದ್ದು ಹಳೇಯ ಕಥೆ. ಹೀಗೆ ಚಿತ್ರ–ಸಂಗೀತ– ಸಾಹಿತ್ಯದಲ್ಲಿ ಹಂಸಲೇಖ ಅವರು ಮುಟ್ಟಿದ್ದೆಲ್ಲವೂ ಚಿನ್ನ. ಸಿನಿಮಾ ಸೊರಗಿದರೂ ಗೀತ ಸಾಹಿತ್ಯ ಮತ್ತು ಸಂಗೀತದ ಕಾರಣಕ್ಕೆ ಸೂಪರ್‌ಹಿಟ್‌ ಆದ ಉದಾಹರಣೆಗಳು ಸಾಕಷ್ಟಿವೆ ಎನ್ನುತ್ತಾರೆ ‘ಚಂದನವನ’ದ ಮಂದಿ.

ADVERTISEMENT

ಸಂಗೀತ, ರಂಗಭೂಮಿ, ಜನಪದ ಕ್ಷೇತ್ರದ ‘ದೇಸಿ’ ನಾಯಕ ಇವರು ಎಂದು ಅಭಿಮಾನಿಗಳು ಪ್ರೀತಿಯಿಂದ ಹೇಳುತ್ತಾರೆ. ಅವರದ್ದೊಂದು ವಿಶ್ವರಂಗಭೂಮಿ ಪರಿಕಲ್ಪನೆ ಇದೆ. ಚನ್ನಪಟ್ಟಣದ ಬಳಿ ನರಸಿಂಹ ಸ್ವಾಮಿ ದೇವರ ಗುಡ್ಡದ ತಪ್ಪಲಲ್ಲಿ ಈ ದೇಸಿ ಶಾಲೆ ಇದೆ. ನೃತ್ಯ, ಸಂಗೀತ, ರಂಗಭೂಮಿಯ ಶಿಕ್ಷಣ ನೀಡುವ ವಸತಿ ಶಾಲೆ ಅದು. ಸಾಕಷ್ಟು ಪ್ರತಿಭೆಗಳನ್ನು ಅದು ಕಲಾ ಕ್ಷೇತ್ರಕ್ಕೆ ನೀಡಿದೆ.

ಸಂಗೀತ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ, ಆರು ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ, ಮೂರು ಬಾರಿ ರಾಜ್ಯ ಸರ್ಕಾರದ ಪ್ರಶಸ್ತಿ ಅವರಿಗೆ ಸಿಕ್ಕಿದೆ.70ರ ಹರೆಯಕ್ಕೆ ಕಾಲಿಟ್ಟ ಅವರಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.