
‘ನಮ್ಮ ಪ್ರೀತಿ ನಿಜವಾಗಿತ್ತು... ಆ ಪ್ರೀತಿ ಎಂತಹ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ನಮಗೆ ನೀಡಿತ್ತು’.... ಈ ಮಾತು ಹೇಳುತ್ತಲೇ ಪತಿ ಧರ್ಮೇಂದ್ರ ಅವರನ್ನು ನೆನೆದು ಬಾಲಿವುಡ್ ಹಿರಿಯ ನಟಿ, ಸಂಸದೆ ಹೇಮಾಮಾಲಿನಿ ವೇದಿಕೆ ಮೇಲೆ ಭಾವುಕರಾಗಿದ್ದಾರೆ.
ನವದೆಹಲಿಯ ಜನಪಥದಲ್ಲಿರುವ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಗುರುವಾರ ನಡೆದ ನಟ ಧರ್ಮೇಂದ್ರ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಜೀವನದ ಪ್ರತಿ ಹೆಜ್ಜೆಯಲ್ಲೂ ಪತಿಯ ಬೆಂಬಲವನ್ನು ಸ್ಮರಿಸಿದ್ದಾರೆ.
‘ಅನೇಕ ಸಿನಿಮಾಗಳಲ್ಲಿ ನನ್ನೊಂದಿಗೆ ನಟಿಸಿದ್ದ ವ್ಯಕ್ತಿ ನನ್ನ ಜೀವನ ಸಂಗಾತಿಯಾದರು. ನಮ್ಮ ಪ್ರೀತಿ ಸತ್ಯವಾದುದು. ಆದ್ದರಿಂದಲೇ ಎಂತಹ ಪರಿಸ್ಥಿತಿಯನ್ನು ಎದುರಿಸಿ ಸತಿ–ಪತಿಯಾಗಲು ನಮಗೆ ಸಾಧ್ಯವಾಯಿತು. ಧರ್ಮೇಂದ್ರ ಉತ್ತಮ ಪತಿಯಾಗಿದ್ದರು. ನನ್ನ ಜೀವನಕ್ಕೆ ಆಧಾರಸ್ತಂಭವಾಗಿದ್ದರು. ಪ್ರತಿ ಕ್ಷಣ, ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ನಿಂತಿದ್ದರು’ ಎಂದು ಹೇಳಿದ್ದಾರೆ.
‘ನನ್ನ ಪ್ರತಿ ನಿರ್ಧಾರಕ್ಕೂ ಅವರು ಬೆಂಬಲ ನೀಡುತ್ತಿದ್ದರು. ನನ್ನ ಇಬ್ಬರು ಹೆಣ್ಣು ಮಕ್ಕಳಾದ ಇಶಾ ಮತ್ತು ಅಹಾನಾಗೆ ಅಕ್ಕರೆಯ ತಂದೆಯಾಗಿದ್ದರು. ಅವರಿಗೆ ಪ್ರೀತಿಯನ್ನು ಕೊಟ್ಟು ಸರಿಯಾದ ಸಮಯದಲ್ಲಿ ವಿವಾಹ ಮಾಡಿದ್ದರು. ತಮ್ಮ ಐವರು ಮೊಮ್ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಅವರಿಗೂ ಅಜ್ಜನೆಂದರೆ ಎಲ್ಲಿಲ್ಲದ ಪ್ರೀತಿ.... ಇದು ನಮ್ಮ ಪ್ರೀತಿಯ ಹೂದೋಟ ಎನ್ನುತ್ತಿದ್ದರು... ಅದನ್ನು ನಾವು ಪ್ರೀತಿ ಕಾಳಜಿಯಿಂದ ಪೋಷಿಸಬೇಕು’ ಎಂದು ಕಣ್ಣಂಚನ್ನು ಒರೆಸಿಕೊಂಡಿದ್ದಾರೆ.
ಶ್ರದ್ದಾಂಜಲಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟಿ, ಸಂಸದೆ ಕಂಗನಾ ರನೌತ್ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಭಾಗವಹಿಸಿದ್ದರು.
ಹಿಂದಿ ಚಿತ್ರರಂಗದ ಮೇರು ನಟರಲ್ಲಿ ಒಬ್ಬರೆನಿಸಿಕೊಂಡಿರುವ ಧರ್ಮೇಂದ್ರ ಅವರು 1954ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು. ನಂತರ 1980ರಲ್ಲಿ ಹೇಮಾಮಾಲಿನಿ ಅವರನ್ನು ವಿವಾಹವಾಗಿದ್ದಾರೆ. ಮೊದಲ ಹೆಂಡತಿಯ ನಾಲ್ಕು ಮತ್ತು ಎರಡನೇ ಹೆಂಡತಿಯ ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ, ನವೆಂಬರ್ 24ರಂದು ನಿಧನ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.