ADVERTISEMENT

ಸಂದರ್ಶನ | ದೊಡ್ಡ ಯಶಸ್ಸು ಬಹಳ ಅಪಾಯಕಾರಿ: ನಟ ಕಿಶೋರ್‌

ಅಭಿಲಾಷ್ ಪಿ.ಎಸ್‌.
Published 6 ಫೆಬ್ರುವರಿ 2025, 23:30 IST
Last Updated 6 ಫೆಬ್ರುವರಿ 2025, 23:30 IST
ಕಿಶೋರ್‌ 
ಕಿಶೋರ್‌    
ನಟ ಕಿಶೋರ್‌ ಅಭಿನಯದ ‘ಅನಾಮಧೇಯ ಅಶೋಕ್‌ ಕುಮಾರ್‌’ ಸಿನಿಮಾ ಇಂದು(ಫೆ.7) ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಹೊಸ ಸಿನಿಮಾ ಹಾಗೂ ಅವರ ಮುಂದಿನ ಯೋಜನೆಗಳ ಬಗ್ಗೆ ಅವರೊಂದಿಗೆ ಮಾತುಕತೆ.

ಭಿನ್ನವಾದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯುತ್ತಿಲ್ಲ. ಪ್ರೇಕ್ಷಕರ ಬದಲಾದ ಮನಃಸ್ಥಿತಿಯ ಬಗ್ಗೆ...

ಬದಲಾದ ಮನಃಸ್ಥಿತಿಗೆ ಹಲವು ಕಾರಣಗಳಿವೆ. ಒಂದು ಸಿನಿಮಾದವರು. ಆಗಿನ ಸಿನಿಮಾಗಳ ರೀತಿ ಈಗಿನ ಸಿನಿಮಾಗಳಿಲ್ಲ. ಹಾಗೆಯೇ ಆಗಿನ ಜನರ ರೀತಿ ಈಗಿನ ಜನರೂ ಇಲ್ಲ. ಪ್ರೇಕ್ಷಕ, ಆತನೂ ಒಬ್ಬ ಮನುಷ್ಯ. ಆಧುನೀಕರಣ, ತಂತ್ರಜ್ಞಾನದ ಅಭಿವೃದ್ಧಿ ಆತನ ಮೇಲೂ ಪರಿಣಾಮ ಬೀರಿದೆ. ಬದಲಾದ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಬಂಡವಾಳಶಾಹಿಯ ಪರಿಣಾಮದಿಂದಾಗಿ ಮನುಷ್ಯನ ಮೂಲ ಸೌಲಭ್ಯಗಳ ಪರಿಕಲ್ಪನೆಯೂ ಬದಲಾಗಿವೆ. ಜೀವನದ ಕಲ್ಪನೆ, ಜೀವನದ ಮೌಲ್ಯಗಳ ಕಲ್ಪನೆ ಬದಲಾಗಿದೆ. ಹೀಗಿರುವಾಗ ಆತನ ಕಲೆಯ, ಕಲಾಭಿವ್ಯಕ್ತಿಯ ಬಗೆಗಿನ ಕಲ್ಪನೆ, ಕಲಾಭಿರುಚಿ ಬದಲಾಗುತ್ತದೆ. ಹಿಂದಿನ ಕಲಾಭಿರುಚಿ ಈಗಿನ ಜನರಿಗೆ ಇಲ್ಲ. ಹಣ ಎಂಬುವುದು ಜನರ ಜೀವನದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ. ಅವನ ಕಲ್ಪನೆಯ ಸೌಲಭ್ಯಗಳು ಹಣದಿಂದ ಸಿಗುತ್ತಿರುವಾಗ, ಕಲಾಭಿರುಚಿಯ ಅಭಿಪ್ರಾಯವೂ ಬದಲಾಗಿದೆ. ಕಲೆ ಎಂದರೆ ಮನರಂಜನೆ ಎಂದಷ್ಟೇ ಆಗಿದೆ. ಮನುಷ್ಯ ಒತ್ತಡದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವುದರಿಂದ ಅವನಿಗೆ ಮನರಂಜನೆ ಸಿಕ್ಕರಷ್ಟೇ ಸಾಕಾಗಿದೆ. ಅವನನ್ನು ಪ್ರಶ್ನಿಸುವ, ಚಿಂತನೆಗೆ ಹಚ್ಚುವಂತಹ ಸಿನಿಮಾಗಳು ಬೇಡವಾಗಿದೆ. ‘ಸಿನಿಮಾಗೆ ಯಾಕೆ ಬರ್ತೀವಿ, ವಾರಪೂರ್ತಿ ದುಡಿದಿರುತ್ತೇವೆ ನಮಗೆ ಮನರಂಜನೆ ಸಿಕ್ಕಿದರೆ ಸಾಕಪ್ಪ’ ಎನ್ನುವಷ್ಟರ ಮಟ್ಟಿಗೆ ಕಲಾಭಿವ್ಯಕ್ತಿಯ ಬೆಲೆ ಇಳಿದಿದೆ. ಇವತ್ತು ಸಿನಿಮಾ ಮಾತ್ರವಲ್ಲ, ಜನಪದ ಕಲಾವಿದರಿಗೆ, ನೃತ್ಯಪಟುಗಳಿಗೆ, ಚಿತ್ರಕಲೆಗೂ ಬೆಲೆ ಇಲ್ಲದಂತಾಗಿದೆ. ಸಿನಿಮಾ ಉಳಿದರೆ ಜನರ ದನಿ ಉಳಿದುಕೊಳ್ಳುತ್ತದೆ, ಪ್ರಜಾಪ್ರಭುತ್ವ ಉಳಿದುಕೊಳ್ಳುತ್ತದೆ.  

ಸಿನಿಮಾ ಅಭಿರುಚಿ ಬದಲಾಗಿದೆಯೇ...?

ADVERTISEMENT

ಸಿನಿಮಾ ಎನ್ನುವುದು ಕೇವಲ ಮನರಂಜನೆಯ ಸಾಧನವಲ್ಲ. ಅದು ಚಿಂತನೆಗೆ ದೂಡುವ, ಮನುಷ್ಯ ಮನುಷ್ಯನ ನಡುವೆ ಸಂವಾದ ಏರ್ಪಡಿಸುವ, ಸಮಾಜ ಜಾಗೃತಿಯ ಸಾಧನ. ಎಳೆದ ತಕ್ಷಣ ಕಿಕ್‌ ಕೊಡುವ ಸಿಗರೇಟ್‌ ಮಾತ್ರವೇ ಜಾಸ್ತಿ ವ್ಯಾಪಾರ ಆಗುವುದು. ಸಿನಿಮಾಗೂ ಇದೇ ಸ್ಥಿತಿ ಬಂದಿದೆ. ಸಮಾಜವೇ ಆ ಮಟ್ಟಿಗೆ ತಂದಿಟ್ಟುಬಿಟ್ಟಿದೆ. ಬಂಡವಾಳಶಾಹಿ ವ್ಯವಸ್ಥೆ ಹಾಗೂ ಕೊಳ್ಳುಬಾಕ ಸಂಸ್ಕೃತಿಯೇ ಇದರ ಪ್ರಮುಖ ಅಪರಾಧಿಗಳು. ಈ ಹಿಂದೆ ಸಿನಿಮಾ ಮೇಲೆ ಆಸಕ್ತಿ, ಪ್ರೀತಿ ಇದ್ದವರು ನಷ್ಟವಾದರೂ ಸರಿ ಎನ್ನುತ್ತಾ ವಿತರಣೆ, ಪ್ರದರ್ಶನವನ್ನು ಮಾಡುತ್ತಿದ್ದರು. ಇಂತಹವರು ಈಗ ಕಡಿಮೆಯಾಗಿದ್ದಾರೆ. ‘ಫೋಟೋ’ ಎಂಬ ಸಿನಿಮಾಗೆ ಪ್ರಕಾಶ್‌ ರಾಜ್‌ ಬೆನ್ನೆಲುಬಾಗಿ ನಿಂತರು. ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಬಿಡುಗಡೆ ಬಳಿಕ ಅದನ್ನು ಪೋಷಿಸುವುದು ವಿತರಕರು, ಪ್ರದರ್ಶಕರ ಕೆಲಸ, ಜವಾಬ್ದಾರಿ ಅಲ್ಲವೇ?.  

‘ಅನಾಮಧೇಯ ಅಶೋಕ್‌ ಕುಮಾರ್‌’ನಲ್ಲಿ ನಿಮ್ಮ ಪಾತ್ರವೇನು? 

ಈ ಸಿನಿಮಾ ಮೂಲಕ ಒಂದು ಹೊಸ ತಂಡದ ಜೊತೆ ಕೆಲಸ ಮಾಡಿರುವ ಖುಷಿ ಇದೆ. ಪತ್ರಕರ್ತನ ಪಾತ್ರವನ್ನು ನಾನಿಲ್ಲಿ ಮಾಡಿದ್ದೇನೆ. ಕಥೆ ಬಹಳ ಕುತೂಹಲಕಾರಿಯಾಗಿದೆ. ಸರ್ಕಲ್‌ ಇನ್‌ಸ್ಪೆಕ್ಟರ್ ಹಾಗೂ ಪತ್ರಕರ್ತನ ನಡುವೆ ನಡೆಯುವ ವಾದ ಚಿತ್ರದ ಕಥಾಹಂದರ. ಇದು ಯಾರ ಕಥೆಯೂ ಆಗಿರಬಹುದು. ಎಲ್ಲರಿಗೂ ಇದು ಕನೆಕ್ಟ್‌ ಆಗಲಿದೆ. ಬಹಳ ಚೆನ್ನಾಗಿ ಇದಕ್ಕೆ ಕಮರ್ಷಿಯಲ್‌ ರೂಪ ನೀಡಿದ್ದಾರೆ. ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳನ್ನು ನಾವು ಬಹಳ ಪರಿಣಾಮಕಾರಿಯಾಗಿ ಮಾಡಿದರೂ ಸೋಲುತ್ತಿದ್ದೇವೆ. ಮಲಯಾಳದಲ್ಲಿ ಈ ಜಾನರ್‌ ಗೆಲ್ಲುತ್ತಿದೆ. ಏಕೆಂದರೆ ಅಲ್ಲಿ ಬರಹಗಾರರಿಗೆ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಬರಹಗಾರರು ಬರಹಗಾರರಾಗಿಯೇ ಉಳಿದುಕೊಳ್ಳುತ್ತಿದ್ದಾರೆ ಎಂದರೆ ಅವರಿಗೆ ಒಳ್ಳೆಯ ಬೆಲೆ ಸಿಗುತ್ತಿದೆ ಎಂದರ್ಥ. ಸಾಹಿತ್ಯವನ್ನು ಸಿನಿಮಾ ಭಾಗವಾಗಿಯೇ ಇಟ್ಟುಕೊಂಡು, ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ಸರಳವಾದ ಕಥೆ ತೆಗೆದುಕೊಂಡರೂ ಬರವಣಿಗೆಯಲ್ಲಿ ಅದನ್ನು ಗಟ್ಟಿಗೊಳಿಸುತ್ತಾರೆ. ಆ ಜಗತ್ತಿನೊಳಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ಅವರ ಬರವಣಿಗೆಗೆ ಇದೆ. ನಮ್ಮಲ್ಲಿ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದೆ. ಉತ್ತಮವಾದ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಮಾಡಿದರೂ ಅದನ್ನು ತಲುಪಿಸುವಲ್ಲಿಯೂ ನಾವು ಸೋಲುತ್ತಿದ್ದೇವೆ.  

ಸಿನಿಮಾ ನಿರ್ಮಾಣ ಎನ್ನುವುದು ದಾರಿ ತಪ್ಪುತ್ತಿದೆಯೇ?

‘ಕಾಂತಾರ’, ‘ಕೆಜಿಎಫ್‌’ ಗೆದ್ದಿತು ಎಂದಾಕ್ಷಣ ಕನ್ನಡ ಸಿನಿಮಾ ಎಲ್ಲಿಗೋ ಹೋಯಿತು ಎಂದೇನಿಲ್ಲ. ಕನ್ನಡ ಸಿನಿಮಾ ಎಲ್ಲಿಗೂ ಹೋಗಿಲ್ಲ. ಇನ್ನೂ ಕುಸಿಯುತ್ತಿದ್ದೇವೆ. ದೊಡ್ಡ ಉದಾಹರಣೆ ಮಾಡಿಟ್ಟು ಎಲ್ಲರೂ ಆ ಮಟ್ಟವನ್ನೇ ತಲುಪುತ್ತೇವೆ ಎಂದು ಹೋದರೆ ನಾವು ಎಲ್ಲಿಗೂ ತಲುಪುತ್ತಿಲ್ಲ. ಹಿಂದೆ ಹಿಟ್‌ ಆದ ಹತ್ತು ಸಿನಿಮಾಗಳ ಹೆಸರನ್ನಾದರೂ ಹೇಳಬಹುದುದಿತ್ತು. ಈಗ ಇವೆರಡನ್ನು ಬಿಟ್ಟರೆ ಹೇಳಿಕೊಳ್ಳಲು ಬೇರೆ ಸಿನಿಮಾಗಳೇ ಇಲ್ಲ. ಈ ಯಶಸ್ಸುಗಳೇ ಶಾಪವಾದಂತಿದೆ. ಏಕೆಂದರೆ ಕನ್ನಡ ಸಿನಿಮಾವೊಂದು ಈ ಮಟ್ಟಕ್ಕೂ ಹೋಗಬಹುದು ಹಾಗೂ ನೂರಾರು ಕೋಟಿ ಸಂಪಾದನೆಯನ್ನೂ ಮಾಡಬಹುದು ಎಂಬ ನಿರೀಕ್ಷೆಯನ್ನು ಈ ಸಿನಿಮಾಗಳು ಹುಟ್ಟುಹಾಕಿವೆ. ಎಲ್ಲರಿಗೂ ನೂರಾರು ಕೋಟಿ ಗಳಿಸುವ ಆಸೆಯಿದೆ. ‘ಕಾಂತಾರ’, ‘ಕೆಜಿಎಫ್‌’ ರೀತಿಯೇ ಸಿನಿಮಾ ಮಾಡಬೇಕು ಎಂದು ಹೊರಡುತ್ತಾರೆ. ಅನುಕರಣೆ ಮಾಡಲು ಹೋಗಿ ಎಡವುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಸ್ಟಾರ್‌ಗಳು ದೊಡ್ಡ ಸ್ಟಾರ್‌ಗಳಾಗಿ ಆಯಿತು. ಉಳಿದ ಸ್ಟಾರ್‌ಗಳಿಗೂ ಇದು ಒತ್ತಡವಾಗಿದೆ. ನಾವು ಆ ಮಟ್ಟಕ್ಕೆ ಬೆಳೆಯಲಿಲ್ಲ ಎಂದರೆ ನಮ್ಮ ಉಳಿವು ಎಲ್ಲಿದೆ ಎಂಬ ಪ್ರಶ್ನೆ ಅವರಿಗೆ ಕಾಡಿದೆ. ದೊಡ್ಡದಾಗಿ ಮಾರುಕಟ್ಟೆ ಮಾಡಿದರೆ, ಹೆಚ್ಚು ದಿನ ಶೂಟಿಂಗ್‌ ಮಾಡಿದರೆ ಗೆಲ್ಲುತ್ತೇವೆ ಎಂಬ ಭ್ರಮೆಯೂ ಎಡವಲು ಕಾರಣ. ದೊಡ್ಡ ಯಶಸ್ಸುಗಳು ಬಹಳ ಅಪಾಯಕಾರಿ. ‘ಕಾಂತಾರ’, ‘ಕೆಜಿಎಫ್‌’ ಡೀಸೆಂಟ್‌ ಹಿಟ್‌ ಆಗಿದ್ದಿದ್ದರೆ ಯಾರಿಗೂ ಇಷ್ಟು ಒತ್ತಡವಿರುತ್ತಿರಲಿಲ್ಲ. ಯಾರೂ ₹100–₹200 ಕೋಟಿ ಹಾಕುತ್ತಿರಲಿಲ್ಲ. ಈ ಎರಡೂ ಯಶಸ್ಸುಗಳು ಕನ್ನಡ ಚಿತ್ರರಂಗಕ್ಕೆ ಎಷ್ಟು ವರವೋ, ಅಷ್ಟೇ ಶಾಪ ಕೂಡಾ.    

ವಾರದಲ್ಲಿ ಎಂಟು ಹತ್ತು ಸಿನಿಮಾ ಬಿಡುಗಡೆ ಆಗುತ್ತಿವೆ?

ಸರ್ವರಿಗೂ ಸಮಬಾಳು ಸಮಪಾಲು ಪ್ರಜಾಪ್ರಭುತ್ವದ ಮೂಲಸಿದ್ಧಾಂತ. ಇಲ್ಲಿ ನಿಯಂತ್ರಣ ಸಲ್ಲದು ಎನ್ನುವುದು ನನ್ನ ಅಭಿಪ್ರಾಯ. ಸಿನಿಮಾ ಮಾಡುವ ಹಕ್ಕು ಎಲ್ಲರಿಗೂ ಇದೆ. ಸಿನಿಮಾ ಹಿಡಿದಿಟ್ಟುಕೊಂಡರೆ ಆ ನಿರ್ದೇಶಕ, ನಿರ್ಮಾಪಕ ಮುಂದೆ ಸಿನಿಮಾ ಮಾಡುವುದು ಕಷ್ಟವಾಗಲಿದೆ. ನಮ್ಮ ಮಾರುಕಟ್ಟೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನ ಸಿನಿಮಾಗಳನ್ನು ಮಾಡುತ್ತಿದ್ದೇವೆ. 

ಹೊಸ ತಂಡದ ಜೊತೆ ಕೆಲಸದ ಅನುಭವ..

ಇದು ನಮ್ಮ ಕರ್ತವ್ಯ. ಒಂದು ಹಂತಕ್ಕೆ ಸಿನಿಮಾದಲ್ಲಿ ಗುರುತಿಸಿಕೊಂಡ ನಂತರ ಎಲ್ಲರೂ ಹೊಸಬರ ಜೊತೆ ನಿಂತುಕೊಳ್ಳುವ ಪ್ರಯತ್ನ ಮಾಡಬೇಕು. ಹೊಸಬರಿಗೆ ಒಂದು ಹಂತಕ್ಕೆ ಪ್ರೋತ್ಸಾಹ ಸಿಕ್ಕಿದರೆ ಅವರು ಅನುಭವದಲ್ಲಿ ಬೆಳೆಯುತ್ತಾರೆ. ತಪ್ಪು ಮಾಡದೇ ಮೊದಲ ಹೆಜ್ಜೆಯಿಂದಲೇ ಸರಿ ಇರಬೇಕು ಎಂದು ಬಯಸುವುದೂ ತಪ್ಪು.  

ಮುಂದಿನ ಪ್ರಾಜೆಕ್ಟ್‌ಗಳು...

ಹಾರರ್‌ ಥ್ರಿಲ್ಲರ್‌ ಜಾನರ್‌ನ ‘ಐದು’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ‘ಅಲ್ಪವಿರಾಮ’ ಸಿನಿಮಾವೂ ಅಂತಿಮ ಹಂತದಲ್ಲಿದೆ. ನಾನು ನಿರ್ದೇಶನ ಮಾಡುತ್ತಿರುವ ‘ಡ್ರೈವ್‌’ ಸಿನಿಮಾವನ್ನು ಪೂರ್ಣಗೊಳಿಸಬೇಕಾಗಿದೆ. ಸುದರ್ಶನ್‌ ರಂಗಪ್ರಸಾದ್‌ ಅವರು ನಿರ್ದೇಶಿಸುತ್ತಿರುವ ‘ಅರವಣಿಪುರಂ’ ಸಿನಿಮಾ ಶೂಟಿಂಗ್‌ ಆರಂಭವಾಗಬೇಕಿದೆ. ಇನ್ನೆರಡು ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಮಲಯಾಳದಲ್ಲಿ ‘ವಡಕ್ಕನ್‌’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.