ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜೊತೆಗಿನ ದಿನಗಳನ್ನು ನವರಸ ನಾಯಕ ಜಗ್ಗೇಶ್ ನೆನಪು ಮಾಡಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್, ನೆನಪುಗಳನ್ನು ಮೆಲುಕು ಹಾಕಿದ್ದಾರೆ.
‘ನನ್ನ ಪುಟ್ಟಗ್ರಾಮಕ್ಕೆ ನೀ ಬಂದು ಸಂಭ್ರಮಿಸಿದ ದಿನ ಹೇಗೆ ಮರೆಯಲಿ? ಮಾತು ಬಾರದ ನನ್ನ ತಮ್ಮನ ಕಂಡು ನೀ ಮರುಗಿದ್ದು ನೆನೆದು ನನ್ನ ಹೃದಯ ಛಿದ್ರವಾಗಿದೆ. ನೀ ಇಲ್ಲಾ ಎಂದರೆ ನಂಬಲಾಗುತ್ತಿಲ್ಲಾ. ಕರೆ ಮಾಡಿದರೆ, ‘ಅಣ್ಣ’ ಎಂದು ಕರೆ ಸ್ವೀಕರಿಸುವೆ ಎನ್ನುವಂತೆ ಭಾಸವಾಗುತ್ತಿದೆ,’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ನೀ ಇಲ್ಲಾ ಎಂದರೆ ಮನ ನಂಬುತ್ತಿಲ್ಲಾ. ಎಂಥ ಸಾವು ಇದು. ಬದುಕಲ್ಲಿ ನಾನು ಪೂಜೆಯನ್ನೇ ಮಾಡದ ದಿನವಿದು’ ಎಂದೂ ಅವರು ಬರೆದುಕೊಂಡಿದ್ದಾರೆ.
ಈ ಟ್ವೀಟ್ನ ಜೊತೆಗೆ ಜಗ್ಗೇಶ್ ಅವರು ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.
ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ
ಕನ್ನಡ ನಾಡು–ನುಡಿಗಾಗಿ ಸಾಧಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪುನೀತ್ ಅವರಿಗೆ ಮರಣೋತ್ತರ ಪ್ರಶಸ್ತಿಯಾಗಿ ನೀಡಬೇಕು ಎಂದು ಪುನೀತ್ ಅವರು ಟ್ವಿಟರ್ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
‘ರಾಜ್ಯೋತ್ಸವ ಪ್ರಶಸ್ತಿಯನ್ನು ನಮ್ಮ ಪುನೀತನಿಗೆ ಮರಣೋತ್ತರ ಪ್ರಶಸ್ತಿಯಾಗಿ ನೀಡಿ ಮಾನ್ಯ ಮುಖ್ಯಮಂತ್ರಿಗಳೆ. ಕನ್ನಡಿಗರ ಪ್ರೀತಿ ಗೆದ್ದ ರಾಜಣ್ಣನ ಮಗನ ಆತ್ಮಕ್ಕೆ ಗೌರವಿಸಿದಂತೆ ಆಗುತ್ತದೆ ಎಂಬುದು ನನ್ನ ವಿನಂತಿ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇವುಗಳನ್ನೂ ಓದಿ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.