ನಟಿ ಕೀರ್ತಿ ಸುರೇಶ್ ಅವರು ಉದ್ಯಮಿಯೊಬ್ಬರ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆಯೇ?
-ಇದು ಅವರ ಅಭಿಮಾನಿಗಳಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ ಆಕೆಯೇ ಈಗ ಉತ್ತರ ನೀಡಿದ್ದಾರೆ. ‘ನನ್ನ ಮದುವೆ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರು ಯಾರೆಂಬುದು ನನಗೆ ಗೊತ್ತಿಲ್ಲ. ಇದು ನನಗೂ ಅಚ್ಚರಿ ಮೂಡಿಸಿದೆ. ಮದುವೆಯ ವಿಚಾರವೇ ನನ್ನ ಮುಂದಿಲ್ಲ. ಸದ್ಯಕ್ಕೆ ನಾನು ಹಸೆಮಣೆ ಏರಲು ಸಿದ್ಧಳಿಲ್ಲ’ ಎಂದಿದ್ದಾರೆ ಕೀರ್ತಿ.
‘ಪ್ರಸ್ತುತ ಇಡೀ ದೇಶವೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸ್ಥಿತಿಯಲ್ಲಿ ನಾನು ಮದುವೆಯಾಗಲು ಸಾಧ್ಯವೇ. ಇಂತಹ ಗಾಳಿಸುದ್ದಿಗೆ ಅರ್ಥವಿಲ್ಲ’ ಎಂದಿದ್ದಾರೆ ಅವರು.
ಹಾಗಿದ್ದರೆ ಈ ಗಾಳಿಸುದ್ದಿ ಹಬ್ಬಿಸಿದವರು ಯಾರೆಂಬುದು ಆಕೆಯ ಅಭಿಮಾನಿಗಳ ಪ್ರಶ್ನೆ. ಈ ಗಾಸಿಪ್ ಹಿಂದೆ ತಮಿಳಿನ ಯುವ ಹಾಸ್ಯನಟ ಸತೀಶ್ ಅವರ ಕೈವಾಡವಿದೆ ಎನ್ನಲಾಗಿದೆ. ಆತ ಈ ಸುದ್ದಿಯನ್ನು ತೇಲಿಬಿಟ್ಟಿದ್ದು ಏಕೆ ಎಂಬುದು ಇನ್ನೂ ಅರ್ಥವಾಗಿಲ್ಲ. ಆತನನ್ನು ಕೀರ್ತಿ ಸುರೇಶ್ ತರಾಟೆಗೂ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಕಾಲಿವುಡ್ನಲ್ಲಿ ಕೇಳಿಬರುತ್ತಿದೆ.
ಕೀರ್ತಿ ಸುರೇಶ್ ಅವರು ಉದ್ಯಮಿ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರ ಪುತ್ರಿ. ಬಾಲನಟಿಯಾಗಿ ಆಕೆ ಚಿತ್ರರಂಗ ಪ್ರವೇಶಿಸಿದರು. ಮಲಯಾಳ, ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ಮಹಾನಟಿ’ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ಆಕೆಗೆ ರಾಷ್ಟ್ರ ಪ್ರಶಸ್ತಿಯು ಮುಡಿಗೇರಿತು. ಪ್ರಸ್ತುತ ಆಕೆ ‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ‘ಅಣ್ಣಾತೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಆಕೆಯದು ತಲೈವನ ಪುತ್ರಿಯ ಪಾತ್ರ.
ಕೀರ್ತಿ ಅವರು ಮೋಹನ್ಲಾಲ್ ಅವರ ಮಹಾತ್ವಾಕಾಂಕ್ಷೆಯ ಚಿತ್ರ ‘ಅರಬಿ ಕಡಲಿಂಟೆ ಸಿಂಹಮ್’ ಹಾಗೂ ತೆಲುಗಿನ ‘ಮಿಸ್ ಇಂಡಿಯಾ’, ‘ರಂಗ್ ದೇ’ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.