ತಮಿಳಿನ ‘ವೆಟ್ಟೈಯಾಡು ವಿಲೈಯಾಡು’ ಚಿತ್ರ ತೆರೆಕಂಡಿದ್ದು ಹದಿನಾಲ್ಕು ವರ್ಷಗಳ ಹಿಂದೆ. ಗೌತಮ್ ಮೆನನ್ ನಿರ್ದೇಶಿಸಿದ್ದ ಇದರಲ್ಲಿ ಕಮಲಹಾಸನ್ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ನಿಯೋ ನೋಯಿರ್ ಆ್ಯಕ್ಷನ್ ಥ್ರಿಲ್ಲರ್ ಕಥಾವಸ್ತು ಹೊಂದಿದ್ದ ಚಿತ್ರ ಇದು. ಕಮಲಹಾಸನ್ ಅವರ ವೃತ್ತಿಬದುಕಿನಲ್ಲಿಯೇ ವಿಶಿಷ್ಟವಾದ ಈ ಪಾತ್ರ ಜನರ ಮೆಚ್ಚುಗೆಗಳಿಸಿತ್ತು. ಜ್ಯೋತಿಕಾ ಮತ್ತು ಕಮಲಿನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಜೊತೆಗೆ, ಗಲ್ಲಾಪೆಟ್ಟಿಗೆಯಲ್ಲೂ ಇದು ಒಳ್ಳೆಯ ಕಲೆಕ್ಷನ್ ಮಾಡಿತ್ತು.
ಈಗ ಇದರ ಸ್ವೀಕೆಲ್ಗೆ ಗೌತಮ್ ಮೆನನ್ ಸಿದ್ಧತೆ ನಡೆಸಿದ್ದಾರೆ. ಕಮಲಹಾಸನ್ ಕೂಡ ಇದರಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರಂತೆ. ಈ ಚಿತ್ರಕ್ಕೆ ಯಾರು ನಾಯಕಿಯಾಗುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಒಂದು ಮೂಲದ ಪ್ರಕಾರ ಅನುಷ್ಕಾ ಶೆಟ್ಟಿ ಇದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಈಗ ‘ಮಹಾನಟಿ’ ಚಿತ್ರದ ಖ್ಯಾತಿಯ ಕೀರ್ತಿ ಸುರೇಶ್ ನಟಿಸಲಿದ್ದಾರೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.
‘ಸೂಪರ್ಸ್ಟಾರ್’ ರಜನಿಕಾಂತ್ ನಟನೆಯ ‘ಅಣ್ಣಾತೆ’ ಚಿತ್ರದಲ್ಲಿ ಕೀರ್ತಿ ನಟಿಸುತ್ತಿದ್ದಾರೆ. ಗೌತಮ್ ಮೆನನ್ ಅವರು ಕೀರ್ತಿಗೆ ಸ್ಕ್ರಿಪ್ಟ್ ಅನ್ನು ವಿವರಿಸಿದ್ದಾರಂತೆ. ಆಕೆಯೂ ಕೂಡ ಒಪ್ಪಿಗೆ ಸೂಚಿಸಿದ್ದಾರಂತೆ.
ಗೌತಮ್ ನಿರ್ದೇಶನದ ‘ಕಾರ್ತಿಕ್ ಡಯಲ್ ಸೀತಾ ಯೆನ್’ ಮತ್ತು ‘ಧ್ರುವ ನಾಟ್ಚಾತಿರಾಮ್’ ಸಿನಿಮಾಗಳು ಲಾಕ್ಡೌನ್ನಿಂದಾಗಿ ಬಿಡುಗಡೆಯಾಗಿಲ್ಲ. ಈ ಚಿತ್ರಗಳು ತೆರೆಕಂಡ ಬಳಿಕ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.