ಹೈದರಾಬಾದ್: ಕೋವಿಡ್ನಿಂದ ಚೇತರಿಸಿಕೊಂಡಿರುವ ತೆಲುಗು ನಟ ಮಹೇಶ್ ಬಾಬು ಅವರು ಸಹೋದರ ರಮೇಶ್ ಬಾಬು ಅವರ 11ನೇ ದಿನದ ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಮಹೇಶ್ ಬಾಬು ಅವರ ಸಹೋದರ ಘಟ್ಟಮನೇನಿ ರಮೇಶ್ ಬಾಬು (56) ಅವರು ಯಕೃತ್ತಿಗೆ (ಲಿವರ್) ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚಿಗೆ ನಿಧನರಾಗಿದ್ದರು.
ಇತ್ತ ಕೊರೊನಾ ಸೋಂಕಿಗೆ ತುತ್ತಾಗಿ ಮನೆಯಲ್ಲಿ ಪ್ರತ್ಯೇಕವಾಸದಲ್ಲಿದ್ದ ಮಹೇಶ್ ಬಾಬು, ಅಣ್ಣನ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಅವರು ಕೋವಿಡ್ನಿಂದ ಗುಣಮುಖರಾಗಿದ್ದು, ಸಹೋದರನ ಮನೆಗೆ ಭೇಟಿ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪ್ರೀತಿಯ ಅಣ್ಣನಿಗೆ ನುಡಿ ನಮನ ಸಲ್ಲಿಸಿದ್ದ ಮಹೇಶ್ ಬಾಬು, ‘ಅಣ್ಣಯ್ಯ ನೀನು ನನ್ನ ಸ್ಪೂರ್ತಿ, ಶಕ್ತಿ, ಧೈರ್ಯ ಎಲ್ಲವೂ ಅಗಿದ್ದೆ. ಒಂದು ವೇಳೆ ಆಗದಿದ್ದರೇ ನಾನು ಇಂದು ನಾನಾಗಿರುತ್ತಿರಲಿಲ್ಲ. ನನಗೋಸ್ಕರ ಎಲ್ಲವನ್ನೂ ಮಾಡಿದ್ದಕ್ಕೆ ಧನ್ಯವಾದ. ವಿರಮಿಸು.. ನೀನು ಎಂದೆಂದಿಗೂ ನನ್ನ ಅಣ್ಣಯ್ಯ’ ಎಂದು ಕಂಬನಿ ಮಿಡಿದಿದ್ದರು.
ನಟ, ನಿರ್ಮಾಪಕರಾಗಿ ‘ರಮೇಶ್’
ಹಿರಿಯ ನಟ ಕೃಷ್ಣ ಅವರ ಮೊದಲ ಪುತ್ರನಾಗಿದ್ದ ರಮೇಶ್ ಬಾಬು ಬಾಲ ನಟನಾಗಿ ಚಿತ್ರರಂಗ ಪ್ರವೇಶ ಮಾಡಿದ್ದರು. 1974ರಲ್ಲಿ ತೆರೆಕಂಡ 'ಅಲ್ಲೂರಿ ಸೀತಾರಾಮರಾಜು' ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ್ದರು. ಬಳಿಕ ನಿರ್ಮಾಪಕರಾಗಿ ಕೆಲಸ ಮಾಡಿದ ಅವರು, ಸಹೋದರ ಮಹೇಶ್ ಬಾಬು ಅವರ ಸಿನಿಮಾಗಳನ್ನು ನಿರ್ಮಿಸಿದ್ದರು. ಮಹೇಶ್ ನಟಿಸಿದ್ದ ‘ಅರ್ಜುನ್’, ‘ಅತಿಥಿ’, ‘ಆಗಡು‘ ಚಿತ್ರಗಳನ್ನು ನಿರ್ಮಿಸಿದ್ದರು.
ಮಹೇಶ್ ಬಾಬು ನಟನೆಯ ಬಹುನಿರೀಕ್ಷಿತ ಚಿತ್ರ ‘ಸರ್ಕಾರು ವಾರಿ ಪಾಟ’ ಏ.1ರಂದು ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.