ADVERTISEMENT

ಪ್ರೇಮ ವೈಫಲ್ಯದ ಕಥೆ‌ ಹೇಳಿದ‌ ನಯನತಾರಾ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 19:45 IST
Last Updated 14 ಏಪ್ರಿಲ್ 2020, 19:45 IST
ನಯನತಾರಾ
ನಯನತಾರಾ   

ನಟಿ ನಯನತಾರಾ ಸಿನಿರಸಿಕರ ಪಾಲಿಗೆ ‘ಲೇಡಿ ಸೂಪರ್ ಸ್ಟಾರ್‌’. ಆಕೆ ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಹಾಗೂ ಬಹುಬೇಡಿಕೆಯ ನಟಿಯೂ ಹೌದು. ತನ್ನ ಗ್ಲಾಮರ್ ಲುಕ್ ಮೂಲಕವೇ ಪ್ರೇಕ್ಷಕರಿಗೆ ಮೋಡಿ‌ ಮಾಡಿದ‌ ಹೆಗ್ಗಳಿಕೆ ಆಕೆಯದ್ದು. ಹಾಗೆಂದು ನಟನೆಯಲ್ಲಿ ಅವರು ಹಿಂದೆ ಬಿದ್ದವರಲ್ಲ. ಸೂಪರ್ ಸ್ಟಾರ್ ರಜನಿಕಾಂತ್, ಚಿರಂಜೀವಿ ಸೇರಿದಂತೆ‌ ಹಲವು ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡ ಹಿರಿಮೆ ಅವರದು.

ಬಿಗ್ ಬಜೆಟ್‌ನ ಆ್ಯಕ್ಷನ್, ಕಮರ್ಷಿಯಲ್, ಥ್ರಿಲ್ಲರ್, ಐತಿಹಾಸಿಕ, ಪೌರಾಣಿಕ ಸಿನಿಮಾಗಳ ನಾಯಕಿ ಪಾತ್ರಕ್ಕೆ ಇಂದಿಗೂ ನಯನತಾರಾ ಅವರೇ ನಿರ್ದೇಶಕರು ಮತ್ತು ನಿರ್ಮಾಪಕರ ಮೊದಲ ಆಯ್ಕೆಯಾಗಿರುತ್ತಾರೆ ಎಂದು ಬಿಡಿಸಿಹೇಳಬೇಕಿಲ್ಲ. ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ದರ್ಶನ್ ನಟನೆಯ ಕನ್ನಡದ ‘ರಾಜವೀರ ಮದಕರಿನಾಯಕ’ ಚಿತ್ರಕ್ಕೂ ಆಕೆಯನ್ನೇ ಕರೆತರುವ ಪ್ರಯತ್ನ ನಡೆದಿದೆ‌.

ಮಹಿಳಾ ಕೇಂದ್ರಿತ ಸಿನಿಮಾಗಳಲ್ಲೂ ಮನೋಜ್ಞ ಅಭಿನಯದ ಮೂಲಕ ನಯನತಾರಾ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ತಮಗೆ ಸಿಕ್ಕಿದ ಪಾತ್ರಗಳಿಗೆ ಜೀವ ತುಂಬುವ ಆಕೆ ಸಂಭಾವನೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ‌ ಪಡೆಯುವ ನಟಿಯರ ಪೈಕಿ ಆಕೆಯದ್ದೇ ಅಗ್ರಸ್ಥಾನ. ರಜನಿಕಾಂತ್ ನಾಯಕರಾಗಿದ್ದ ‘ದರ್ಬಾರ್’ ಚಿತ್ರದಲ್ಲಿನ ನಟನೆಗೆ ಆಕೆ ₹ 5 ಕೋಟಿ ಸಂಭಾವನೆ‌ ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು.

ADVERTISEMENT

ಆಕೆ ವೃತ್ತಿಬದುಕಿನಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತು ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲುವಿನ‌ ನಾಗಾಲೋಟವನ್ನು ಮುಂದುವರಿಸಿದ್ದಾರೆ‌‌‌. ಪರದೆ ಮೇಲೆ ನಿರಾಯಾಸವಾಗಿ ನಾಯಕನ ಪ್ರೀತಿ ಸಂಪಾದಿಸುವ ಆಕೆಗೆ‌ ವೈಯಕ್ತಿಕ ಬದುಕಿನಲ್ಲಿ ಪ್ರೀತಿಯು ಸುಲಭವಾಗಿ ಒಲಿದಿಲ್ಲ. ಪ್ರೇಮ ವೈಫಲ್ಯದ ಸುರುಳಿಯು ಆಕೆಯನ್ನು ಸುತ್ತಿಕೊಂಡಿದೆ. ಹಲವು ವರ್ಷಗಳ ಕಾಲ ಇದರಿಂದ‌ ಹೊರಬರಲಾರದೆ ಆಕೆ ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದೂ ಇದೆ. ಸುದ್ದಿಗೋಷ್ಠಿಗಳಲ್ಲಿ ಮಾಧ್ಯಮದವರ ಪ್ರಶ್ನೆ ಎದುರಿಸಲಾರದೆ ಅಸಹಾಯಕರಾಗಿ ಕುಳಿತಿದ್ದೂ ಉಂಟು.

ಮೊದಲಿಗೆ ನಯನತಾರಾಗೆ ಪ್ರೇಮಾಂಕುರವಾಗಿದ್ದು ತಮಿಳು ನಟ ಶಿಂಬು ಜೊತೆಗೆ. ಕೆಲವು ವರ್ಷಗಳವರೆಗೆ ಇಬ್ಬರು ಜೊತೆಯಾಗಿಯೇ ಸುತ್ತಿದ್ದರು. ಬಳಿಕ ಇಬ್ಬರು ಬೇರೆಯಾದರು. ಬಳಿಕ ನಟ, ನಿರ್ದೇಶಕ ಪ್ರಭುದೇವ್ ಅವರನ್ನು ನಯನತಾರಾ ಪ್ರೀತಿಸಿದರು. ಈ ಪ್ರೀತಿ ಮದುವೆಯ‌ ಹಂತಕ್ಕೂ ಹೋಯಿತು‌‌‌. ಇಬ್ಬರೂ ಮದುವೆಯಾಗುತ್ತಾರೆ ಎಂಬ ಖುಷಿಯಲ್ಲಿದ್ದ‌ ಅಭಿಮಾನಿಗಳಿಗೆ ಏಕಾಏಕಿ ಬೇರ್ಪಟ್ಟಿದ್ದು ದಿಗಿಲು‌‌‌ ಮೂಡಿಸಿತ್ತು. ಈ ಪ್ರೇಮ ವೈಫಲ್ಯದ ಬಳಿಕ ನಯನತಾರಾ ಕೆಲವು ದಿನಗಳವರೆಗೆ ಮೌನವಾಗಿಯೇ ಇದ್ದರು‌. ಈಗ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತ್ತಿದ್ದಾರೆ. ಅವರು‌ ನಿರ್ದೇಶಿಸುತ್ತಿರುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇತ್ತೀಚೆಗೆ‌ ನಯನತಾರಾ ತನ್ನ ಎರಡೂ ಪ್ರೇಮ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ‘ಪ್ರೀತಿಯು ನಂಬಿಕೆಯ ಮೇಲೆ‌‌ ನಿಂತಿರುತ್ತದೆ. ನಂಬಿಕೆಯ‌ ಕೊರತೆ ಕಂಡುಬಂದಾಗ ಅದರಿಂದ ಹೊರಬರುವುದು ಅನಿವಾರ್ಯವಾಗುತ್ತದೆ. ಹಾಗಾಗಿಯೇ, ಶಿಂಬು‌ ಮತ್ತು ಪ್ರಭುದೇವ್ ಅವರ ಪ್ರೇಮದ ಸುಳಿಯಿಂದ ನಾನು ಹೊರ ಬರಬೇಕಾಯಿತು’ ಎಂದು ಹೇಳಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.