ADVERTISEMENT

ಸಾವಿರ ಸಿನಿಮಾದತ್ತ ಸೌಂಡ್‌ ಎಂಜಿನಿಯರ್‌ ಸೇನಾಪತಿ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 0:54 IST
Last Updated 18 ಏಪ್ರಿಲ್ 2020, 0:54 IST
ಪಳನಿಸೇನಾಪತಿ
ಪಳನಿಸೇನಾಪತಿ   

ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರು ಶ್ರೀಧರ್‌ ಎಂಬಧ್ವನಿಗ್ರಹಣ ಮಾಂತ್ರಿಕನನ್ನು ಸಂಗೀತ ಲೋಕಕ್ಕೆ ಪರಿಚಯಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ‘ನಾದಬ್ರಹ್ಮ’ ಹಂಸಲೇಖ ಅವರು ಒಬ್ಬ ಸೌಂಡ್‌ ಎಂಜಿನಿಯರ್‌ ಅನ್ನು ಸಿನಿ ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ. ಅವರು ಮತ್ಯಾರು ಅಲ್ಲ, ಪಳನಿಸೇನಾಪತಿ.ಹಂಸಲೇಖ ಅವರ ನೆಚ್ಚಿನ ಶಿಷ್ಯರ ಪೈಕಿ ಪಳನಿಗೆ ಅಗ್ರಸ್ಥಾನ ಯಾವಾಗಲೂ.

ಕನ್ನಡ, ತುಳು, ಕೊಡವ,ಕೊಂಕಣಿ, ತಮಿಳು, ತೆಲುಗು, ಮಲಯಾಳ, ಮರಾಠಿ, ಹಿಂದಿ, ಇಂಗ್ಲಿಷ್‌,ಫ್ರೆಂಚ್‌ ಸಿನಿಮಾಗಳಿಗೂ ಪಳನಿ ಧ್ವನಿಗ್ರಹಣ ನೀಡಿದ್ದಾರೆ. ಇವರು ಧ್ವನಿಗ್ರಹಣ ನೀಡಿರುವ ಚಿತ್ರಗಳ ಲೆಕ್ಕ ಈಗ 900 ದಾಟಿ, ಸಾವಿರ ಚಿತ್ರಗಳತ್ತ ದಾಪುಗಾಲಿಟ್ಟಿವೆ. ಹಂಸಲೇಖ ಅವರ ಸಂಗೀತ ನಿರ್ದೇಶನವಿರುವ ಕನ್ನಡ ಚಿತ್ರಗಳಲ್ಲಿ ಸುಮಾರು 125ಕ್ಕೂ ಹೆಚ್ಚು ಚಿತ್ರಗಳಲ್ಲಿ ಪಳನಿಯವರೇ ಧ್ವನಿಗ್ರಹಣವಿದೆ ಎಂದರೆ ಪಳನಿ ಸಾಮರ್ಥ್ಯ ಅರಿತೇ ಹಂಸಲೇಖ ಅವರು ಈ ಪ್ರತಿಭೆಗೆ ನೀರೆರೆದು ಪೋಷಿಸುತ್ತಿದ್ದಾರೆ ಎನ್ನಬಹುದು.

ರೇಡಿಯೋ ಅಂಡ್ ಟೆಲಿವಿಷನ್ ಎಂಜಿನಿಯರಿಂಗ್ ಕೋರ್ಸ್, ಲಂಡನ್ ಕಾಲೇಜ್ ಆಫ್ ಮ್ಯೂಸಿಕ್‍ನಲ್ಲಿ ಮತ್ತಷ್ಟು ಕಲಿತಿದ್ದ ಪಳನಿ 1994ರಲ್ಲಿ ಪ್ರಸಾದ್ ಸ್ಟುಡಿಯೋದಲ್ಲಿ ಸೌಂಡ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದರು. ಆಗಲೇ ಹಂಸಲೇಖ ಅವರ ಆಶೀರ್ವಾದ ಸಿಕ್ಕಿ ಅವರ ಬದುಕೇ ಹಸನಾಯಿತು. ‘ನಾನು ಈಗಏನಾಗಿದ್ದೀನೋ ಅದರ ಎಲ್ಲ ಶ್ರೇಯವೂ ನನ್ನ ಗುರುಗಳಾದ ಹಂಸಲೇಖ ಅವರಿಗೆ ಸಲ್ಲುತ್ತದೆ’ ಎಂದು ವಿನಮ್ರವಾಗಿ ನುಡಿಯುವ ಪಳನಿ, ದರ್ಶನ್‌ ನಟನೆಯ ಬಹುನಿರೀಕ್ಷೆಯ ಚಿತ್ರ ‘ರಾಜ ವೀರಮದಕರಿ’ ಚಿತ್ರಕ್ಕೂ ಧ್ವನಿಗ್ರಹಣ ಮಾಡುತ್ತಿದ್ದಾರೆ.

ADVERTISEMENT

‘ಅಮೃತವರ್ಷಣಿ’, ‘ನೆನಪಿರಲಿ’, ‘ರಂಗೋಲಿ’ ಸಿನಿಮಾಗಳು ಇವತ್ತಿಗೂ ಸಿನಿರಸಿಕರ ನೆನಪಿನಲ್ಲಿ ಅಚ್ಚಳಿಯದೇ ಇವೆ. ಈ ಚಿತ್ರಗಳಿಗೆ ಧ್ವನಿಗ್ರಹಣ ಮಾಡಿದವರೂ ಇದೇ ಪಳನಿ. ಇನ್ನು ‘ಕಾಲ್ಗೆಜ್ಜೆ’ ಸಿನಿಮಾಕ್ಕೆ ಅತ್ಯುತ್ತಮ ಧ್ವನಿಗ್ರಹಣ ರಾಜ್ಯ ಪ್ರಶಸ್ತಿಯೂ ಇವರಿಗೆ ಸಿಕ್ಕಿದೆ. 2013ರಲ್ಲಿರೇಡಿಯೊ ಮಿರ್ಚಿಯಿಂದ ಇವರ ಅನನ್ಯ ಸಂಗೀತ ಸೇವೆಗೆ ಪ್ರಶಸ್ತಿ ದಕ್ಕಿದೆ. ಅಲ್ಲದೆ ಅದೇ ವರ್ಷ ‘ಆರ್ಯಭಟ’ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಬಾಲಿವುಡ್‍ನ ಲಕ್ಷೀಕಾಂತ್‍ ಪ್ಯಾರಲಾಲ್, ಇಸ್ಮೈಲ್‍ ದರ್ಬಾರ್, ಟಾಲಿವುಡ್‍ನ ಇಳಯರಾಜ, ದೇವ, ಕೀರವಾಣಿ, ರಾಜ್‍ಕೋಟಿ, ಸ್ಯಾಂಡಲ್‍ವುಡ್‍ನಲ್ಲಿ ಬಹುತೇಕ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಅನುಭವಿ ಇವರು.

ಪಳನಿ ಧ್ವನಿಗ್ರಹಣಕ್ಕಷ್ಟೇ ಸೀಮಿತವಾಗಿಲ್ಲ, ಗುರು ಹಂಸಲೇಖ ಅವರ ಆಶೀರ್ವಾದದಿಂದ ಸ್ವತಂತ್ರ ನಿರ್ದೇಶನಕ್ಕೂ ಕೈಹಚ್ಚಿದ್ದಾರೆ. ‘ಬೈಸಿಕಲ್ ಬಾಯ್ಸ್’ ಮೂಲಕ ಸಂಗೀತ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ಮೂರು ಮರಾಠಿ ಚಿತ್ರಗಳಿಗೆ,ತಮಿಳಿನಲ್ಲಿ ನಿರ್ಮಿಸಿರುವ ಅಬ್ದುಲ್ ಕಲಾಂ ಬಯೋಪಿಕ್‌ ಚಿತ್ರಕ್ಕೂ ಇವರದೇ ಸಂಗೀತ ನಿರ್ದೇಶನವಿದೆ.ಸದ್ಯ ‘ಸದ್ಗುಣ ಸಂಪನ್ನ ಮಾದವ’ ಸೇರಿ ಐದು ಕನ್ನಚಿತ್ರಗಳಿಗೆ ಪಳನಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.