
ರಶ್ಮಿಕಾ-ವಿಜಯ್, ಪ್ರಧಾನಿ ಮೋದಿ
ಚಿತ್ರ: ಇನ್ಸ್ಟಾಗ್ರಾಂ
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ನಾಳೆ (ಫೆಬ್ರುವರಿ 26) ಉದಯಪುರ ಸಿಟಿ ಪ್ಯಾಲೇಸ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜನಪ್ರಿಯ ಜೋಡಿ ತಮ್ಮ ಮದುವೆಗೆ ನಟ–ನಟಿಯರು, ರಾಜಕೀಯ ಗಣ್ಯರು, ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೂಡ ಮದುವೆ ಆಮಂತ್ರಣ ಪತ್ರಿಕೆ ನೀಡಲಾಗಿದೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್ ದೇವರಕೊಂಡ ಅವರ ಪೋಷಕರಿಗೆ ಕಳುಹಿಸಿರುವ ಪತ್ರದಲ್ಲಿ ನವಜೋಡಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಧಾನಿ ಮೋದಿ ಅವರಿಂದ ಬಂದ ಪತ್ರ
ಪ್ರಧಾನಿ ಮೋದಿ ಬರೆದ ಪತ್ರದಲ್ಲಿ ಏನಿದೆ?
‘ಫೆಬ್ರುವರಿ 26, 2026ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ಆಹ್ವಾನ ಬಂದಿರುವುದು ಸಂತೋಷ ಕೊಟ್ಟಿದೆ.ಈ ಶುಭ ಸಂದರ್ಭದಲ್ಲಿ ವಿಜಯ್ ಮತ್ತು ಮಂದಣ್ಣ ಕುಟುಂಬಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂದಿದ್ದಾರೆ.
‘ಈ ವಿವಾಹವು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಜೋಡಿ ಸಪ್ತಪದಿ ತುಳಿಯುವ ಮೂಲಕ ಜೀವನಪರ್ಯಂತ ಸ್ನೇಹಿತರಾಗುತ್ತಾರೆ. ವಿಜಯ್ ಅಥವಾ ರಶ್ಮಿಕಾ ಇಬ್ಬರೂ ತಮ್ಮ ಸಿನಿಮಾ ಕ್ಷೇತ್ರಕ್ಕೆ ಹೊಸಬರಲ್ಲ. ಆದರೆ ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರುವ ಅವರ ನಿಜ ಜೀವನದ ಈ ದೈವಿಕ ಚಿತ್ರಕಥೆಯ ಅಧ್ಯಾಯವು ಬೆಳ್ಳಿ ಪರದೆ ಮೇಲೆ ಅವರು ಸೃಷ್ಟಿಸಿದ ಮ್ಯಾಜಿಕ್ ಅನ್ನು ಖಂಡಿತವಾಗಿಯೂ ಮೀರಿಸುತ್ತದೆ’ ಎಂದರು.
‘ಮುಂಬರುವ ದಿನಗಳು, ತಿಂಗಳುಗಳು ಮತ್ತು ವರ್ಷಗಳು ಇಬ್ಬರು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಕನಸುಗಳು ಮತ್ತು ಅವುಗಳ ನೆರವೇರಿಕೆಯಿಂದ ತುಂಬಿರಲಿ. ಚಿಂತನಾಶೀಲತೆ ಮತ್ತು ಪ್ರೀತಿಯಿಂದ, ಜವಾಬ್ದಾರಿಗಳನ್ನು ಹಂಚಿಕೊಳ್ಳಲಿ, ಪರಸ್ಪರರ ಅಪೂರ್ಣತೆಗಳನ್ನು ಸ್ವೀಕರಿಸಲಿ, ಪರಸ್ಪರರ ಸಾಮರ್ಥ್ಯಗಳಿಂದ ಕಲಿಯಲಿ ಮತ್ತು ನಿಜವಾದ ಪಾಲುದಾರರಾಗಿ ಪ್ರಯಾಣಿಸಲಿ. ನವ ದಂಪತಿಗೆ, ಕುಟುಂಬಸ್ಥರಿಗೆ ನನ್ನ ಆಶೀರ್ವಾದಗಳು ಮತ್ತು ಶುಭಾಶಯಗಳು ಎಂದು ಪ್ರಧಾನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.