ADVERTISEMENT

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಏಜೆನ್ಸೀಸ್
Published 14 ಜೂನ್ 2020, 12:32 IST
Last Updated 14 ಜೂನ್ 2020, 12:32 IST
ಸುಶಾಂತ್ ಸಿಂಗ್ ರಜಪೂತ್ - ಪ್ರಧಾನಿ ನರೇಂದ್ರ ಮೋದಿ
ಸುಶಾಂತ್ ಸಿಂಗ್ ರಜಪೂತ್ - ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ, ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತುಂಬಾ ಬೇಗ ಹೊರಟು ಹೋಗಿದ್ದಾರೆ. ಅವರು ಟಿವಿ ಮತ್ತು ಚಲನಚಿತ್ರಗಳಲ್ಲಿ ಉತ್ತಮ ಸಾಧನೆ ತೋರಿದವರು. ಮನರಂಜನಾ ಜಗತ್ತಿನಲ್ಲಿ ಅವರ ಸಾಧನೆಯು ಅನೇಕರಿಗೆ ಸ್ಫೂರ್ತಿ ನೀಡಿತು ಮತ್ತು ಹಲವಾರು ಸ್ಮರಣೀಯ ನಟನಾ ಪ್ರದರ್ಶನಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಸಾವನ್ನು ಕೇಳಿ ಆಘಾತವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಕೇಳಿಕೊಳ್ಳುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.

ಇನ್ನುಳಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವರು ಟ್ವಿಟರ್‌ನಲ್ಲಿ ಯುವ ಮತ್ತು ಅದ್ಭುತ ನಟನ ಸಾವಿಗೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

ADVERTISEMENT

'ನನ್ನ ಬಳಿ ಪದಗಳಿಲ್ಲ, ನೀವೇಕೆ ಈ ದಾರಿಯನ್ನು ಆಯ್ಕೆ ಮಾಡಿಕೊಂಡಿರಿ ಎಂಬುದು ತಿಳಿಯುತ್ತಿಲ್ಲ. ಬಾಲ ನಟನಾಗಿ ನಟಿಸಿ ಬಾಲಾಜಿಯಾಗಿ ಬಂದಿದ್ದ ನೀವು ಇನ್ನೂ ಹಲವು ಮೈಲುಗಳಷ್ಟು ದೂರ ಹೋಗಿದ್ದೀರಿ- ನೀವು ಸಾಗಬೇಕಾದ ಹಾದಿ ಇನ್ನೂ ಹಲವು ಮೈಲುಗಳಿದ್ದವು. ತುಂಬ ಬೇಗನೇ ಸುಶಾಂತ್ ಸಿಂಗ್ ರಜಪೂತ್ ಅವರು ಹೋಗಿಬಿಟ್ಟರು' ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.

ಹಿಂದಿ ಚಿತ್ರಗಳ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ನನ್ನನ್ನು ದಿಗ್ಭ್ರಮೆಗೊಳಿಸಿದೆ. ಜನರು ಅವರ ನಟನಾ ಸಾಮರ್ಥ್ಯ, ಪ್ರತಿಭೆ ಮತ್ತು ಕೌಶಲ್ಯದ ಅಭಿಮಾನಿಯಾಗಿದ್ದರು. ಈ ರೀತಿಯಲ್ಲಿ ಅವರ ಸಾವು ನೋವಿನಿಂದ ಕೂಡಿದ್ದು, ಇದು ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. ದೇವರು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ ಎಂದು ತಿಳಿದಾಗ ಆಘಾತ ಉಂಟಾಯಿತು. ಅವರು ನನ್ನ ನಗರ ಪಾಟ್ನಾದವರು. ಕಳೆದ ವರ್ಷ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಅವರನ್ನು ಭೇಟಿ ಮಾಡಿದ್ದು ನೆನಪಿದೆ. ಅವರ ಕುಟುಂಬ ಪಾಟ್ನಾದ ರಾಜೀವ್ ನಗರದಲ್ಲಿ ವಾಸಿಸುತ್ತಿದೆ ಎಂದು ಅವರು ನನಗೆ ಹೇಳಿದ್ದರು. ಅವರಿನ್ನು ಸಾಧಿಸುವುದು ಸಾಕಷ್ಟಿತ್ತು. ಆದರೆ ಬೇಗನೆ ಹೊರಟುಹೋದರು ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ರಾಥೋರ್ ಟ್ವೀಟ್ ಮಾಡಿ, ಅದ್ಭುತ ವ್ಯಕ್ತಿ, ಆದರ್ಶಪ್ರಯಾದ ಸಮರ್ಪಣಾ ಭಾವ ಹೊಂದಿದ್ದ ಸುಶಾಂತ್ ಸಿಂಗ್ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಅವರ ಈ ರೀತಿಯಲ್ಲಿ ಹೋಗಬಾರದಿತ್ತು. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಓಂ ಶಾಂತಿ ಎಂದಿದ್ದಾರೆ.

ಮುಂಬೈನ ಬಾಂದ್ರಾ ನಿವಾಸದಲ್ಲಿ ನಟ ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.