
ಪುನೀತ್ ರಾಜ್ಕುಮಾರ್
ನಟ, ದಿವಂಗತ ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಇಡೀ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿತ್ತು. ಅವರು ನಿಧನರಾಗಿ ಇಂದಿಗೆ ನಾಲ್ಕು ವರ್ಷಗಳು. ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ನಾಯಕರು ಸಾಮಾಜಿಕ ಮಾಧ್ಯಮದ ಮೂಲಕ ಅವರ ಫೋಟೊ ಹಂಚಿಕೊಳ್ಳುವ ಮೂಲಕ ನಮನ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ
‘ಪುನೀತ್ ರಾಜ್ಕುಮಾರ್ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾದವರು. ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ, ಸಜ್ಜನಿಕೆ, ಬದುಕಿನ ಬಗೆಗಿನ ಪ್ರೀತಿ ಅವರನ್ನು ಎಲ್ಲರೆದೆಯಲ್ಲಿ ಜೀವಂತವಾಗಿಸಿದೆ. ಎಂದಿಗೂ ಮಾಸದ ನಗುಮೊಗದ ಅಪ್ಪುವಿಗೆ ಪುಣ್ಯಸ್ಮರಣೆಯ ಪ್ರೀತಿಪೂರ್ವಕ ನಮನಗಳು’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
‘ಅಪ್ಪು ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆ. ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಅಪ್ಪು ಅಜರಾಮರ’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ
‘ಸರಳತೆ, ಸಜ್ಜನಿಕೆ ಮತ್ತು ಔದಾರ್ಯದ ಮೇರುಶಿಖರವೇ ಆಗಿದ್ದ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾದ ಶ್ರೀ ಪುನೀತ್ ರಾಜಕುಮಾರ್ ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸುತ್ತೇನೆ. ತಮ್ಮ ಇಡೀ ಬದುಕನ್ನು ಕಲೆ ಮತ್ತು ಸಮಾಜಸೇವೆಗೆ ಮೀಸಲಿಟ್ಟು, ನಮ್ಮೆಲ್ಲರ ಪಾಲಿಗೆ ಅಕ್ಕರೆಯ ಅಪ್ಪು, ಪವರ್ ಸ್ಟಾರ್ ಆಗಿದ್ದ ಪುನೀತ್ ಅವರು ಕನ್ನಡಿಗರು ಮರೆಯಲಾಗದ ಅನನ್ಯ ವ್ಯಕ್ತಿತ್ವದ ಕಲಾವಿದರು. ಇಂದು ಅವರ ಪುಣ್ಯಸ್ಮರಣೆ ದಿನ. ನನ್ನ ನಲ್ಮೆಯ ನೆಚ್ಚಿನ ಅಪ್ಪುಗೆ ನಮನಗಳನ್ನು ಸಲ್ಲಿಸುತ್ತೇನೆ’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ
‘ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ‘ಕರ್ನಾಟಕ ರತ್ನ‘, ನಮ್ಮೆಲ್ಲರ ಪ್ರೀತಿಯ ‘ಅಪ್ಪು’ ದಿ. ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳು’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಿ.ಎಸ್ ಯಡಿಯೂರಪ್ಪ
‘ಕನ್ನಡಿಗರೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುವ ಕರ್ನಾಟಕ ರತ್ನ, ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ಸಂಸ್ಮರಣೆಗಳು’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಿ.ವೈ ವಿಜಯೇಂದ್ರ
‘ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುವ ಅನರ್ಘ್ಯ ರತ್ನ , ಅಭಿಮಾನಿ ದೇವರುಗಳ ಪಾಲಿನ ಮೆಚ್ಚಿನ ಅಪ್ಪು, ಶ್ರೀ ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. ದೈಹಿಕವಾಗಿ ಮಾತ್ರ ನಮ್ಮಿಂದ ದೂರವಾಗಿರುವ ಕರ್ನಾಟಕ ರತ್ನ ಪವರ್ ಸ್ಟಾರ್ ಅವರ ನೆನಪು ಕನ್ನಡ ನಾಡಿನ ಕೋಟ್ಯಂತರ ಹೃದಯಗಳಲ್ಲಿ ಸದಾ ಹಸಿರು’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಆರ್.ಅಶೋಕ್
‘ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು, ಪ್ರತಿಯೊಬ್ಬರ ಮನೆ ಮಗನಾಗಿ ಜನ ಮನ್ನಣೆ ಗಳಿಸಿದ್ದ ಅಪ್ಪು ನಮ್ಮನ್ನೆಲ್ಲ ಅಗಲಿ ಇಂದಿಗೆ 4 ವರ್ಷ, ಕರ್ನಾಟಕ ರತ್ನ ಅಪ್ಪು ಅವರ ಪುಣ್ಯಸ್ಮರಣೆಯಂದು ಅವರ ಕಲಾ ಸೇವೆ ಹಾಗೂ ಜನಸೇವೆಯನ್ನು ಸ್ಮರಿಸೋಣ’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.