‘ಬೀರ್ಬಲ್’ ಬೆಡಗಿಯಾಗಿ ಚಂದನವನ ಪ್ರವೇಶಿಸಿದ್ದ ನಟಿ ರುಕ್ಮಿಣಿ ವಸಂತ್ ಇದೀಗ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾಗೆ ನಾಯಕಿಯಾಗಿದ್ದಾರೆ.
ನಟ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’, ಗೋಲ್ಡರ್ ಸ್ಟಾರ್ ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಹಾಗೂ ನಟ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ರುಕ್ಮಿಣಿ ಈ ಮೂರೂ ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ಪ್ರಾಜೆಕ್ಟ್ಗೆ ಹಸಿರು ನಿಶಾನೆ ನೀಡಿದ್ದಾರೆ.
ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್ಕುಮಾರ್ ಅವರು ನಿರ್ಮಿಸುತ್ತಿರುವ, ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನಡೆದಿತ್ತು. ‘ಮಫ್ತಿ’ ಚಿತ್ರದ ಹಿಂದಿನ ಕಥೆ(ಪ್ರೀಕ್ವೆಲ್) ಇದಾಗಿದೆ. ‘ಮಫ್ತಿ’ ಚಿತ್ರದ ಮಧ್ಯಂತರದ ನಂತರ ‘ಭೈರತಿ ರಣಗಲ್’ ಎಂಬ ಪಾತ್ರ ಬರುತ್ತದೆ. ಪ್ರೀಕ್ವೆಲ್ ಭಾಗದಲ್ಲಿ ‘ಭೈರತಿ ರಣಗಲ್’ ಆಗಿದ್ದು ಹೇಗೆ ಎಂಬ ಕಥೆ ಇರಲಿದೆ ಎಂದು ನರ್ತನ್ ಹೇಳಿದ್ದರು. ರವಿ ಬಸ್ರೂರು ಸಂಗೀತ ನಿರ್ದೇಶನ, ನವೀನ್ ಕುಮಾರ್ ಅವರ ಛಾಯಾಚಿತ್ರಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.