ಕೊರೊನಾ ಲಾಕ್ಡೌನ್ ಪರಿಣಾಮ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಉದ್ಯಮವನ್ನೇ ಅವಲಂಬಿಸಿದ್ದ ಕಾರ್ಮಿಕರು ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಕಾರ್ಮಿಕರ ಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಹಿರಿತೆರೆ ಮತ್ತು ಕಿರುತೆರೆಯ ಸುಮಾರು 6 ಸಾವಿರಕಾರ್ಮಿಕರಿಗೆ ತಲಾ ₹ 3 ಸಾವಿರ ಮೊತ್ತದ ಅಗತ್ಯ ವಸ್ತುಗಳನ್ನು ಖರೀದಿಸಲು ಕೂಪನ್ ನೀಡಿದೆ.
‘ಈ ಕೂಪನ್ಗೆ ಕಾಲಾವಧಿ ಜುಲೈ 1ರವರೆಗೆ ಇದೆ. ರಿಲೆಯನ್ಸ್ನ ಯಾವುದೇ ಮಳಿಗೆಯಲ್ಲಿ ಈ ಕೂಪನ್ ಕೊಟ್ಟು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಸಿನಿಮಾ ಮತ್ತು ಕಿರುತೆರೆಯ ತಂತ್ರಜ್ಞರು, ಕಲಾವಿದರು, ಸಹಾಯಕರು, ಕಾರ್ಮಿಕರಿಗೆ ಕೂಪನ್ ವಿತರಿಸಲಾಗಿದೆ. ಈ ಕೂಪನ್ ನೀಡಲು ಸರ್ಕಾರ ₹ 1.80 ಕೋಟಿ ವಿನಿಯೋಗಿಸಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್.
‘ಸರ್ಕಾರಕ್ಕೆ 12 ಸಾವಿರ ಕಾರ್ಮಿಕರ ಪಟ್ಟಿ ಕೊಡಲಾಗಿತ್ತು. ತುರ್ತು ನೆರವಿನ ಅಗತ್ಯವಿರುವ ಕಾರ್ಮಿಕರನ್ನು ಗುರುತಿಸಲು ನನ್ನ ನೇತೃತ್ವದಡಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟಿ ತಾರಾ ಅನುರಾಧಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಸಮಿತಿಯ ತೀರ್ಮಾನದಂತೆ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಕಾರ್ಮಿಕರಿಗೆ ದಿನಸಿ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸಲು ರಿಲೆಯನ್ಸ್ ಕಂಪನಿಯ ಜತೆಗೆ ಮಾತುಕತೆ ನಡೆಸಲಾಗಿತ್ತು. ಈಗ ಅಕಾಡೆಮಿಯ ಮೂಲಕ ರಾಜ್ಯ ಸರ್ಕಾರ ಕಾರ್ಯರೂಪಕ್ಕೆ ತಂದಿದೆ’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.