
ನಟ ಸತೀಶ್ ನೀನಾಸಂ
ಯೂಟ್ಯೂಬ್ ಚಿತ್ರ
ನಟ ಸತೀಶ್ ನೀನಾಸಂ, ನಟಿ ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಸಂದರ್ಭದಲ್ಲಿ ಮತ್ತೊಂದು ಹಾಡು ರಿಲೀಸ್ ಮಾಡಲಾಗಿದೆ. ಈಗಾಗಲೇ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
ಇತ್ತೀಚೆಗೆ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ‘ಕಲ್ಯಾಣವೇ ಗೌರಿ’ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಆ ಬೆನ್ನಲ್ಲೆ ‘ಸಿದ್ದಯ್ಯ ಸ್ವಾಮಿ ಬನ್ನಿ’ ಹಾಡು ಬಿಡುಗಡೆಯಾಗಿದೆ. ಇದೀಗ ಈ ಹಾಡಿನ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಶಿವರಾತ್ರಿ ಹಬ್ಬಕ್ಕೂ ಮುಂಚಿತವಾಗಿ ಹಾಡು ಬಿಡುಗಡೆಯಾಗಿದ್ದು ಭಕ್ತರಿಗೆ ಖುಷಿ ಕೊಟ್ಟಿದೆ.
ಈ ಸಿನಿಮಾವು ವ್ಯಾಪಾರಿ ಮತ್ತು ಕೆಲಸಗಾರರ ನಡುವಿನ ಕಥೆಯನ್ನು ಒಳಗೊಂಡಿದೆ. ಇದೊಂದು ರೆಟ್ರೊ ಶೈಲಿಯ ಕಥೆಯಾಗಿದ್ದು, ಆದರೆ ರೌಡಿಸಂ ಕಥೆಯಲ್ಲ ಇದು ಕ್ರಾಂತಿಕಾರಿ ಅಶೋಕನ ಕಥೆ. ವ್ಯಾಪಾರಿಗಳು ಕೂಲಿ ಕೆಲಸಗಾರರ ಮೇಲೆ ದಬ್ಬಾಳಿಕೆ ಮಾಡುವುದು ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಅದರ ವಿರುದ್ಧ ಪ್ರತಿಭಟಿಸಿ ಬಂಡೇಳುವ ನಾಯಕನ ಕಥೆ ಇದಾಗಿದೆ.
ಈ ಸಿನಿಮಾವನ್ನು ಮನು ಶೆಡ್ಗಾರ್ ಅವರು ನಿರ್ದೇಶನ ಮಾಡುತ್ತಿದ್ದು, ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಚಿತ್ರಗ್ರಹಣ ಲವಿತ್, ವೃದ್ಧಿ ಕ್ರಿಯೇಷನ್ಸ್ ಜೊತೆಗೆ ಸತೀಶ್ ನೀನಾಸಂ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.