ಮೆಗಾಸ್ಟಾರ್ ಚಿರಂಜೀವಿ ಬರುತ್ತಾರೆಂದರೆ ಜನಸಂದಣಿಯಾಗುವುದು ಸಾಮಾನ್ಯ. ಆದರೆ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದ ಘಟನೆ ಬುಧವಾರ ಅನಂತಪುರದಲ್ಲಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಇಲ್ಲಿನ ಕಲಾ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಡ್ಪಾಧರ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.
ಚಿರಂಜೀವಿ–ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಅ.5ರಂದು ತೆಲುಗು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಪ್ರಚಾರದ ಭಾಗವಾಗಿ ಸಾರ್ವಜನಿಕವಾಗಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಮೆಗಾಸ್ಟಾರ್ ಆಗಮನಕ್ಕಾಗಿ 30 ಸಾವಿರಕ್ಕೂ ಅಧಿಕ ಜನರು ಮೈದಾನದಲ್ಲಿ ಕಾದು ನಿಂತಿದ್ದರು.
ಮೈದಾನದ ಸುತ್ತಲಿನ ಮನೆ ಮಹಡಿಗಳೆಲ್ಲ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಪೊಲೀಸರು ಬಿಗಿಭದ್ರತೆಯೊಂದಿಗೆ ಸಂಚಾರ ದಟ್ಟಣೆ ನಿಭಾಯಿಸಲು ಪರ್ಯಾಯ ವ್ಯವಸ್ಥೆ ರೂಪಿಸಿದ್ದರು.
ಬೆಂಗಳೂರಿನಿಂದ ಚಿರಂಜೀವಿ ಬರುವುದು ತುಸು ತಡವಾಗಿದ್ದು, ಗಂಟೆಗಳ ಕಾಲ ಸಾಕಷ್ಟು ಅಭಿಮಾನಿಗಳು ಕಾದು ನಿಂತಿದ್ದರು. ಪ್ರೇಕ್ಷಕರ ಮನತಣಿಸಲು ಹೆಸರಾಂತ ನೃತ್ಯ ಸಂಯೋಜಕರು ಮತ್ತು ತಂಡದಿಂದ ಡ್ಯಾನ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೆಗಾಸ್ಟಾರ್ ಆಗಮನವಾಗುತ್ತಿದ್ದಂತೆ ಜನ ಮುಗಿಬಿದ್ದು ನೆಚ್ಚಿನ ನಾಯಕನನ್ನು ನೋಡಿ ಸಂಭ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.