ADVERTISEMENT

ವಿಚ್ಛೇದನಕ್ಕೆ ಪತ್ನಿ ಅರ್ಜಿ: ವಿಜಯ ಯಾತ್ರೆ ಆರಂಭದಲ್ಲೇ ಎಡವಿದ್ರಾ ದಳಪತಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2026, 12:35 IST
Last Updated 28 ಫೆಬ್ರುವರಿ 2026, 12:35 IST
<div class="paragraphs"><p><strong>ಜನ ನಾಯಗನ್ ಸಿನಿಮಾದಲ್ಲಿ ದಳಪತಿ ವಿಜಯ್</strong></p></div>

ಜನ ನಾಯಗನ್ ಸಿನಿಮಾದಲ್ಲಿ ದಳಪತಿ ವಿಜಯ್

   

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರು ಸದ್ಯ ತಮ್ಮ ವೃತ್ತಿಜೀವನದ ಕೊನೆಯ ಸಿನಿಮಾ ‘ಜನನಾಯಗನ್’ನಲ್ಲಿ ನಟಿಸಿ ಆಗಿದೆ. ಚಿತ್ರ ಬಿಡುಗಡೆಗೆ ಕಾನೂನು ತೊಡಕು ಎದುರಾಗಿದೆ. ಈ ನಡುವೆ ಅವರು, ತಮಿಳುನಾಡು ರಾಜಕಾರಣದಲ್ಲಿ ಸಕ್ರೀಯರಾಗಿದ್ದಾರೆ. ತಮಿಳಿಗ ವೆಟ್ರಿಗ ಖಳಗಂ (ಟಿವಿಕೆ) ಪಕ್ಷ ಸ್ಥಾಪಿಸಿರುವ ಅವರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟು ತಮಿಳುನಾಡಿನಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಈ ನಡುವೆ, ಅವರಿಗೆ ತಲೆನೋವು ಒಂದು ಎದುರಾಗಿದ್ದು, ಅವರ ಪತ್ನಿ ಸಂಗೀತಾ ಅವರು ಜೋಸೆಫ್ ವಿಜಯ್ ಅವರಿಂದ ವಿಚ್ಛೇದನ ನೀಡುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ, ಈ ವಿಚಾರ ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅಂದಹಾಗೆ, ಸಂಗೀತಾ ಅವರ ವಿಚ್ಛೇದನದ ವಿಚಾರ ದೀಢೀರನೆ ಹುಟ್ಟಿಕೊಂಡಿರುವುದಲ್ಲ. ಬದಲಾಗಿ ಕಳೆದ ಒಂದು ವರ್ಷದಿಂದ ಚರ್ಚೆಯಲ್ಲಿತ್ತು.

ADVERTISEMENT

ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲು ಸಂಗೀತಾ ನೀಡಿರುವ ಕಾರಣ

ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ಸಂಗೀತಾ ಅವರು, ನಟ ವಿಜಯ್‌ಗೆ ನಟಿಯೊಬ್ಬಳ ಜತೆ ಸಂಬಂಧ ಇದೆ ಎಂದು ಆರೋಪ ಮಾಡಿದ್ದಾರೆ. ಮಾತ್ರವಲ್ಲ, ತಾವಿಬ್ಬರು 2022ರಲ್ಲಿ ಇದೇ ವಿಚಾರವಾಗಿ ಸಂದಾನದ ಮಾತುಕತೆ ನಡೆಸಿದ್ದು, ಆಕೆಯ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ವಿಜಯ್ ಭರವಸೆ ನೀಡಿದ್ದರು. ಆದರೆ, ಆ ಭರವಸೆಯ ಹೊರತಾಗಿಯೂ ವಿಜಯ್ ಅವರು ಸರಿಹೋಗಿಲ್ಲ. ಆ ನಟಿ ಜೊತೆಗಿನ ಸಂಬಂಧ ಕಡಿದುಕೊಂಡಿಲ್ಲ. ತಮ್ಮ ದಾಂಪತ್ಯ ಸರಿದಾರಿಗೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಆ ನಿಟ್ಟಿನಲ್ಲಿ ತಮ್ಮ 26 ವರ್ಷಗಳ ದಾಂಪತ್ಯ ಮುರಿದುಕೊಳ್ಳಲು ಮುಂದಾಗಿದ್ದಾರೆ.

ತಮಿಳುನಾಡು ರಾಜಕಾರಣ ಅರಿಯಲು ಎಡವಿದ್ರಾ ವಿಜಯ್?

ತಮಿಳುನಾಡು ಅಂದರೆ, ಅಲ್ಲಿ ಕುಟುಂಬ ರಾಜಕಾರಣ, ದ್ವೇಷರಾಜಕಾರಣ ಸಾಮಾನ್ಯ ವಿಚಾರ. ಆದರೆ, ಇದನ್ನು ಅರಿಯುವಲ್ಲಿ ನಟ ವಿಜಯ್ ಅವರು ಎಡವಿದರು ಎಂಬುದು ಅನೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ವಿಜಯ್ ಅವರು ತಮಿಳಿಗ ವೆಟ್ರಿ ಖಜಗಂ ಪಾರ್ಟಿ ಮೂಲಕ ರಾಜಕೀಯ ಪ್ರವೇಶಿಸುತ್ತಿದ್ದಂತೆ, ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ವಿಜಯ್ ನಡೆಸುತ್ತಿದ್ದ ರ‍್ಯಾಲಿಗಳಲ್ಲಿ ಸೇರುತ್ತಿದ್ದರು. ಇದರಿಂದಾಗಿ ವಿಜಯ್ ತಮಿಳುನಾಡು ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಸಿದರು. ಇದನ್ನು ಸಹಿಸದ ಡಿಎಂಕೆ ಪಕ್ಷವು ವಿವಿಧ ರೀತಿಯಲ್ಲಿ ತಡೆಯಲು ಪ್ರಯತ್ನಿಸಿರುವುದು ಗುಟ್ಟಾಗಿ ಏನು ಉಳಿದಿಲ್ಲ.

ಅದಕ್ಕೆ ಸಾಕ್ಷಿ ಎಂಬಂತೆ, ಕರೂರು ರ‍್ಯಾಲಿಯ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯನ್ನು ಬಳಸಿಕೊಂಡು ಕಾನೂನಿನ ಅಡಿಯಲ್ಲಿ ವಿಜಯ್ ಅವರನ್ನು ಸಿಲುಕಿಸಲು ಪ್ರಯತ್ನಗಳು ನಡೆದವು.

ಇದೇ ಸಂದರ್ಭದಲ್ಲಿ ಅವರ ‘ಜನನಾಯಗನ್’ ಸಿನಿಮಾ ಬಿಡುಗಡೆಯೇ ಆಗದಂತೆ ಸೆನ್ಸಾರ್ ಸಮಸ್ಯೆ ಎದುರಾಯಿತು. ಇದುವರೆಗೂ ಸಿನಿಮಾ ಬಿಡುಗಡೆ ಕಂಡಿಲ್ಲ.

ಇನ್ನೂ ಚುನಾವಣೆಗೆ ಒಂದುವರ್ಷ ಬಾಕಿ ಇರುವಾಗಲೇ, ಡಿಎಂಕೆ ಕಡೆಯಿಂದ ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಅವರ ಮಗ ದಯಾನಿಧಿ ಮಾರನ್ ಪ್ರಚಾರಕ್ಕೆ ವೇಗ ನೀಡಿದರು. ಜನರ ಮುಂದೆ ಅಬ್ಬರದ ಭಾಷಣ ಮಾಡುತ್ತಾ ಪ್ರಚಾರಕ್ಕೆ ಮೆರಗು ನೀಡಿದರು.

ಇನ್ನೂ ಇದೇ ಸಂದರ್ಭದಲ್ಲಿ ಮಹಿಳೆಯರ ಅಕೌಂಟ್‌ಗೆ ₹5 ಸಾವಿರ ಹಣ ಪಾವತಿಸುವ ಮೂಲಕ ಮತಬ್ಯಾಂಕ್ ಭಧ್ರಪಡಿಸಿಕೊಳ್ಳಲು ಡಿಎಂಕೆ ಮುಂದಾಯಿತು. ಆದರೆ, ವಿಜಯ್ ಅವರು ಕೇವಲ ಭಾಷಣ ಹೊರತುಪಡಿಸಿ, ಡಿಎಂಕೆ ದಾಳಕ್ಕೆ ಯಾವುದೇ ಪ್ರತಿತಂತ್ರ ಹೂಡುವಲ್ಲಿ ವಿಫಲರಾಗಿದ್ದಾರೆ.

ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗ, ನಿನ್ನೆ (ಫೆಬ್ರುವರಿ 27) ಎಐಡಿಎಂಕೆ ನಾಯಕ, ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಪಕ್ಷ ತೊರೆದು ಸ್ಟಾಲಿನ್ ಅವರ ಡಿಎಂಕೆ ಪಕ್ಷ ಸೇರಿದ್ದಾರೆ. ಇನ್ನೂ ಬಿಜೆಪಿ, ಅಣ್ಣಮಲೈ ಅವರನ್ನು ಮೂಲೆಗುಂಪು ಮಾಡಿ ವಿಜಯ್‌ರನ್ನು ಮುನ್ನಲೆಗೆ ತರಲು ಗಾಳ ಗಾಕುತ್ತಿದೆ. ಆದರೆ, ಈ ಬಗ್ಗೆ ವಿಜಯ್ ಆಗಲಿ ಬಿಜೆಪಿ ಆಗಲಿ ಸ್ಪಷ್ಟ ನಿರ್ಧಾರ ಪ್ರಕಟಿಸುವಲ್ಲಿ ವಿಫಲರಾಗಿದ್ದಾರೆ.

ವಿಜಯ್ ರಾಜಕೀಯಕ್ಕೆ ಬರುತ್ತಿದ್ದಂತೆ, ನಟಿ ತ್ರಿಷಾ ಜತೆ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿ ಮುನ್ನಲೆಗೆ ಬಂದಿತು. ಇತ್ತೀಚೆಗೆ ತಾನೆ, ಬಿಜೆಪಿ ನಾಯಕ ನಾಗೇಂದ್ರ ಅವರು ‘ವಿಜಯ್, ರಾಜಕೀಯದಲ್ಲಿ ಯಶಸ್ಸು ಸಾಧಿಸಲು ನಟಿ ತ್ರಿಷಾ ಮನೆಯಿಂದ ಹೊರಬರಬೇಕು’ ಎಂಬ ಹೇಳಿಕೆ ನೀಡಿದರು. ಈ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಅಂತಿಮವಾಗಿ ನಾಗೇಂದ್ರ ಅವರು ವಿಜಯ್ ಅವರ ಕ್ಷಮೆ ಕೋರಿದ್ದಾರೆ. ಆದರೆ, ಹೇಳಿಕೆಯಿಂದ ವಿಜಯ್ ಅವರ ಚಾರಿತ್ರ್ಯ ಹರಣ ಆಗಿದ್ದಂತು ಸುಳ್ಳಲ್ಲ.

ಇದರ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ, ವಿಜಯ್ ಅವರು ತ್ರಿಷಾ ಜೊತೆ ಕಾಣಿಸಿಕೊಂಡ ಅನೇಕ ಫೋಟೊಗಳು ಹರಿದಾಡತೊಡಗಿದವು. ಆದರೆ, ಈ ಯಾವುದೇ ಘಟನೆಯ ಕರಿತು ವಿಜಯ್ ಆಗಲಿ, ತ್ರಿಷಾ ಆಗಲಿ ಸ್ಪಷ್ಟನೆ ಕೊಡಲಿಲ್ಲ.

ಸದ್ಯ, ವಿಜಯ್ ಅವರಿಂದ ದೂರವೇ ಇದ್ದು, ಲಂಡನ್‌ನಲ್ಲಿ ವಾಸಿಸುತ್ತಿರುವ ಸಂಗೀತಾ ಅವರು ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಈ ಘಟನೆ ವಿಜಯ್ ಅವರ ರಾಜಕೀಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದೇ ವಿಚ್ಛೇದನದ ವಿಚಾರ ಇಟ್ಟುಕೊಂಡು ಪತ್ನಿಯನ್ನು ಜೊತೆ ಇಟ್ಟುಕೊಳ್ಳಲಾರದವರು, ಮಹಿಳೆಯರಿಗೆ ರಕ್ಷಣೆ ಕೊಡುತ್ತಾರಾ? ಎಂಬ ವಿಚಾರ ಮುನ್ನಲೆಗೆ ಬಂದರೂ ಅನುಮಾನವಿಲ್ಲ.

ಒಟ್ಟಾರೆ, ಸಿನಿಮಾ ರಂಗದಿಂದ ದೂರ ಸರಿದು, ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ದಳಪತಿ ವಿಜಯ್ ಅವರ ರ‍್ಯಾಲಿಗಳಲ್ಲಿ ಅಭಿಮಾನಿಗಳು ಸೇರುತ್ತಾರೆ ಹೊರತು, ಅದು ಚುನಾವಣೆಯಲ್ಲಿ ಮತವಾಗಿ ಬದಲಾಗಿ ಅಧಿಕಾರಕ್ಕೆ ಹಿಡಿಯುತ್ತದೆ ಎಂದು ಹೇಳುವುದು ಅಸಾಧ್ಯ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.