ಜೀ ಕನ್ನಡ ವಾಹಿನಿಯಲ್ಲಿ ಜೂನ್ 29 ಮತ್ತು 30ರಂದು ನಡೆಯುವ ವೀಕೆಂಡ್ ವಿತ್ ರಮೇಶ್ ಸೀಸನ್ 4 ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಶಂಕರ್ ಮಹಾದೇವ ಬಿದರಿ ಮತ್ತು ಬಿ.ಬಿ. ಅಶೋಕ್ ಕುಮಾರ್ ಅವರ ಯಶೋಗಾಥೆ ಅನಾವರಣಗೊಳ್ಳಲಿದೆ.
ಬಿದರಿ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಬದುಕಿನಲ್ಲಿ ಹಲವು ಮೈಲುಗಲ್ಲು ಮುಟ್ಟಿದ ಹಿರಿಮೆ ಹೊಂದಿದ್ದಾರೆ. 1993ರಲ್ಲಿ ನರಹಂತಕ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದ ವಿಶೇಷ ಕಾರ್ಯಪಡೆಯ ನೇತೃತ್ವವಹಿಸಿದ್ದರು. ಕಾಡುಗಳ್ಳನ ಬಲವನ್ನು ಕುಗ್ಗಿಸಿದ ಹೆಗ್ಗಳಿಕೆ ಅವರದು.
‘ಟೈಗರ್ ಅಶೋಕ್ ಕುಮಾರ್’ ಎಂದೇ ಪ್ರಸಿದ್ಧಿ ಪಡೆದಿರುವ ಬಿ.ಬಿ. ಅಶೋಕ್ ಕುಮಾರ್ ಕೂಡ ಪೊಲೀಸ್ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರು ಪೊಲೀಸ್ ಅಧಿಕಾರಿಯಾಗುವ ನಿರ್ಧಾರದ ಹಿಂದಿನ ಕಥೆ ಅನಾವರಣಗೊಳ್ಳಲಿದೆ.
ಸಂಚಾರ ಪೊಲೀಸ್ ಅಧಿಕಾರಿಯಾಗಿದ್ದಾಗ ತಮ್ಮ ವೃತ್ತಿಬದುಕಿನ ಮೊದಲ ಕ್ರಿಮಿನಲ್ ಪ್ರಕರಣವಾದ ‘ಆಪರೇಷನ್ ಟೈಗರ್’ ಅನ್ನು ಪೂರ್ಣಗೊಳಿಸಿದ್ದರಿಂದ ಅವರಿಗೆ ‘ಟೈಗರ್ ಅಶೋಕ್ ಕುಮಾರ್’ ಎಂಬ ಹೆಸರು ಪ್ರಾಪ್ತವಾಯಿತಂತೆ. ಈ ಬಗ್ಗೆ ಅವರು ಅನುಭವ ಹಂಚಿಕೊಂಡಿದ್ದಾರೆ.
ಅಶೋಕ್ ಕುಮಾರ್ ಅವರು ತಾವು ನಡೆಸಿದ ಮೊದಲ ಎನ್ಕೌಂಟರ್ ಪ್ರಕರಣದ ಕಥೆಯನ್ನೂ ಪ್ರೇಕ್ಷಕರ ಎದುರು ಬಿಚ್ಚಿಟ್ಟಿದ್ದಾರೆ. ಅವರು ವೀರಪ್ಪನ್ ವಿರುದ್ಧದ ವಿಶೇಷ ಕಾರ್ಯಪಡೆಯಲ್ಲಿಯೂ ಸೇವೆ ಸಲ್ಲಿಸಿದ್ದರು. ಆ ದಿನಗಳ ಅನುಭವಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಬಿದರಿ ಮತ್ತು ಅಶೋಕ್ ಕುಮಾರ್ ಅವರ ಸಾಧನೆಗಳು ಕ್ರಮವಾಗಿ ಜೂನ್ 29 ಮತ್ತು ಜೂನ್ 30ರಂದು ರಾತ್ರಿ 9.30ಕ್ಕೆ ಪ್ರಸಾರವಾಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.