
ನಟ ಎಂ.ಎಸ್.ಉಮೇಶ್, ನಟಿ ಕೃತಿಕಾ ರವೀಂದ್ರ
ಚಿತ್ರ: ಇನ್ಸ್ಟಾಗ್ರಾಂ
5 ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ನಟ ಎಂ.ಎಸ್. ಉಮೇಶ್ ಭಾನುವಾರ ನಿಧನರಾದರು. ಮೈಸೂರಿನ ಶ್ರೀಕಂಠಯ್ಯ ಉಮೇಶ್ ಅವರಿಗೆ 80 ವರ್ಷವಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರದಂದು ಉಮೇಶ್ ಅವರು ನಿಧನರಾದರು.
ನಟ ಎಂ.ಎಸ್.ಉಮೇಶ್, ನಟಿ ಕೃತಿಕಾ ರವೀಂದ್ರ
ನಟ ಎಂ.ಎಸ್. ಉಮೇಶ್ ಅವರು ಕೊನೆಯದಾಗಿ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ನಟಿಸಿದ್ದರು. ಇದೇ ಧಾರಾವಾಹಿಯಲ್ಲಿ ನಟಿ ಕೃತಿಕಾ ರವೀಂದ್ರ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಟ ಎಂ.ಎಸ್. ಉಮೇಶ್ ನಿಧನದ ಬಗ್ಗೆ ನಟಿ ಕೃತಿಕಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ನಟ ಎಂ.ಎಸ್.ಉಮೇಶ್ ಅವರ ಜೊತೆಗೆ ಕಳೆದ ಸುಂದರ ಕ್ಷಣಗಳ ಬಗ್ಗೆ ಫೋಟೊಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.
ನಟಿ ಕೃತಿಕಾ ಪೋಸ್ಟ್ನಲ್ಲಿ ಏನಿದೆ?
‘ಉಮೇಶಣ್ಣನವರ ಜೊತೆ ನಟನೆ ಮಾಡಿದ ಅಷ್ಟೂ ದಿನ ಅವರ ನಗೋದನ್ನು ನಗಿಸೋದನ್ನು ನೋಡಿ ನನಗೆ ಆಶ್ಚರ್ಯ ಆಗಿತ್ತು. ಹೇಗೆ ಈ ವಯಸ್ಸಿನಲ್ಲಿ ಇಷ್ಟು ಲವಲವಿಕೆ ಅಣ್ಣ ಅಂತ ಕೇಳಿದಾಗ ಅವರು ಹೇಳುತ್ತಿದ್ದಿದ್ದು, ‘ಇನ್ನೇನಿದ್ಯಮ್ಮ ಜೀವನದಲ್ಲಿ. ಎಲ್ಲಾ ಕಷ್ಟವನ್ನು ಸುಖವನ್ನು ನೋಡಿದ್ದೇನೆ. ಇರೋ ಅಷ್ಟು ದಿನ ನಗುತ್ತಾ ನಗಿಸುತ್ತಾ ಇರಬೇಕು ಅಷ್ಟೇ ಅಂತ. ಇತ್ತೀಚಿಗೆ ಅವರನ್ನು ಆಸ್ಪತ್ರೆಯಲ್ಲಿ ನೋಡಿದಾಗ ಮಾತಾಡೋಕೆ ಕಷ್ಟ ಪಡುತ್ತಿದ್ದರು. ಆದರೆ ನಗೋದಕ್ಕಲ್ಲ, ಬಾಯಿತುಂಬ ‘ನನ್ನ ಸೊಸೆ’ ಅಂತ ಕರೆಯುವುದಕ್ಕೆ ಕಷ್ಟ ಆದರೂ ಖುಷಿಯಿಂದ ಹೇಳಿಕೊಂಡಿದ್ದನ್ನು ನನ್ನ ಕೊನೆ ಉಸಿರು ಇರುವವರೆಗೂ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ನಿಮ್ಮ ಜೊತೆ ತೆರೆ ಹಂಚಿಕೊಂಡಿದ್ದು ನನ್ನ ಪುಣ್ಯ. ಹೋಗಿ ಬನ್ನಿ ಉಮೇಶಣ್ಣ. ಓಂ ಶಾಂತಿ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.